ಕೊನೆಯ ಎಸೆತದಲ್ಲಿ ರಿಂಕು ಬಾರಿಸಿದ ಸಿಕ್ಸರ್ ಸ್ಕೋರ್ ಬೋರ್ಡ್​ನಲ್ಲಿ ದಾಖಲಾಗಲಿಲ್ಲ! ಯಾಕೆ ಗೊತ್ತಾ?

2023 ರ ವಿಶ್ವಕಪ್‌ನ ಫೈನಲ್‌ನಲ್ಲಿನ ಸೋಲಿನಿಂದ ಚೇತರಿಸಿಕೊಳ್ಳುವುದು ಸುಲಭವಲ್ಲ, ಆದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಆ ನಿರಾಶೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ. ವಿಶಾಖಪಟ್ಟಣಂನಲ್ಲಿ ನಡೆದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 2 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತವು ಸರಣಿಯಲ್ಲಿ ಉತ್ತಮ ಆರಂಭವನ್ನು ಮಾಡಿದೆ. ಆಸೀಸ್ ನೀಡಿದ 209 ರನ್​ಗಳ ಗುರಿಯನ್ನು ಭಾರತ 19.5 ಓವರ್‌ಗಳಲ್ಲಿ ಸಾಧಿಸಿತು. ತಂಡದ ಪರವಾಗಿ ನಾಯಕ ಸೂರ್ಯಕುಮಾರ್ ಯಾದವ್ 80 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಇಶಾನ್ ಕಿಶನ್ ಕೂಡ 58 ರನ್​ಗಳ ಕೊಡುಗೆ ನೀಡಿದರು. ಇವರಲ್ಲದೇ ರಿಂಕು ಸಿಂಗ್ ಕೂಡ 14 ಎಸೆತಗಳಲ್ಲಿ 22 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಪಂದ್ಯದಲ್ಲಿ ರಿಂಕು ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡದ ಗೆಲುವನ್ನು ಖಾತ್ರಿ ಪಡಿಸಿದರು. ಆದರೆ ರಿಂಕು ಸಿಡಿಸಿದ ಆ ಸಿಕ್ಸರ್ ಮಾತ್ರ ಸ್ಕೋರ್ ಬೋರ್ಡ್​ಗೆ ಸೇರಲಿಲ್ಲ.

ಕೊನೆಯ ಎಸೆತದ ನೋ ಬಾಲ್‌ ಆಗಿತ್ತು

ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಗೆಲ್ಲಲು ಕೊನೆಯ ಓವರ್‌ನಲ್ಲಿ ಇನ್ನೂ ಏಳು ರನ್ ಬಾರಿಸಬೇಕಿತ್ತು. 20ನೇ ಓವರ್​ನ ಮೊದಲ ಎಸೆತದಲ್ಲೇ ರಿಂಕು ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ಆದರೆ ಇದಾದ ಬಳಿಕ ಮುಂದಿನ ನಾಲ್ಕು ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಭಾರತವೂ ಮೂರು ವಿಕೆಟ್ ಕಳೆದುಕೊಂಡಿತು. ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದೇ ಒಂದು ರನ್ ಬೇಕಿದ್ದಾಗ ರಿಂಕು ಅದ್ಭುತ ಸಿಕ್ಸರ್ ಬಾರಿಸಿದರು. ಆದರೆ ರಿಂಕು ಬಾರಿಸಿದ ಸಿಕ್ಸರ್ ಅನ್ನು ಕೌಂಟ್ ಮಾಡಲಿಲ್ಲ​. ಇದು ಅಭಿಮಾನಿಗಳಲ್ಲಿ ಸಾಕಷ್ಟು ದ್ವಂದ್ವಗಳನ್ನು ಹುಟ್ಟಿಹಾಕಿತು.

ವಾಸ್ತವವಾಗಿ ರಿಂಕು ಸಿಕ್ಸರ್ ಬಾರಿಸಿದ 20ನೇ ಓವರ್​ನ ಕೊನೆಯ ಬಾಲ್ ನೋ ಬಾಲ್ ಆಗಿತ್ತು. ಹೀಗಾಗಿ ಐಸಿಸಿ ನಿಯಮದ ಪ್ರಕಾರ ಟೀಂ ಇಂಡಿಯಾವನ್ನು ವಿಜಯಿ ಎಂದು ಘೋಷಿಸಲಾಯಿತು. ರಿಂಕು ಸಿಕ್ಸರ್ ಬಾರಿಸುವ ಮುನ್ನವೇ ಬೌಲರ್ ನೋ ಬಾಲ್ ಮಾಡಿದ್ದರಿಂದ ಆ ಸಿಕ್ಸರ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಈ ಕಾರಣದಿಂದ ಭಾರತ 19.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.

ಅಬ್ಬರಿಸಿದ ಸೂರ್ಯ- ಕಿಶನ್

ಈ ಪಂದ್ಯದಲ್ಲಿ ಭಾರತ ತಂಡ ಗುರಿ ಬೆನ್ನತ್ತಲು ಮುಂದಾದಾಗ ಸ್ಕೋರ್ 22 ಆಗುವಷ್ಟರಲ್ಲಿ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದ್ದರು. ಇದಾದ ಬಳಿಕ ಇಶಾನ್ ಕಿಶನ್, ನಾಯಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಮೂರನೇ ವಿಕೆಟ್‌ಗೆ 60 ಎಸೆತಗಳಲ್ಲಿ 112 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇಶಾನ್ ಔಟಾದ ಬಳಿಕ ನಾಯಕ ಸೂರ್ಯನಿಗೆ ರಿಂಕು ಸಿಂಗ್ ಉತ್ತಮ ಸಾಥ್ ನೀಡಿದರು. ಐದನೇ ವಿಕೆಟ್‌ಗೆ ಇಬ್ಬರ ನಡುವೆ 17 ಎಸೆತಗಳಲ್ಲಿ 40 ರನ್‌ಗಳ ಜೊತೆಯಾಟ ಬಂತು. ಮತ್ತು ಈ ಪಂದ್ಯದಲ್ಲಿ ಭಾರತದ ಗೆಲುವನ್ನು ಸಂಪೂರ್ಣವಾಗಿ ಖಚಿತಪಡಿಸಿತು. ಇದೀಗ ಉಭಯ ತಂಡಗಳ ನಡುವಿನ ಈ ಟಿ20 ಸರಣಿಯ ಎರಡನೇ ಪಂದ್ಯ ನವೆಂಬರ್ 26 ರಂದು ತಿರುವನಂತಪುರಂ ಮೈದಾನದಲ್ಲಿ ನಡೆಯಲಿದೆ.