ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ್ರಾ ಭುವನೇಶ್ವರ್? ಅನುಮಾನ ಹೆಚ್ಚಿಸಿದ ಇನ್ಸ್ಟಾಗ್ರಾಮ್ ಬಯೋ ಬದಲಾವಣೆ

ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗುಳಿದಿರುವ ತಂಡದ ಮಾಜಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಇದೀಗ ಸೋಶಿಯಲ್ ಮಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದಾರೆ.

ಇದಕ್ಕೆ ಕಾರಣವೂ ಇದ್ದು, ಟೀಂ ಇಂಡಿಯಾದಲ್ಲಿ ಮತ್ತೆ ಅವಕಾಶಕ್ಕಾಗಿ ಕಾಯ್ದು ಕಾಯ್ದು ಬಸವಳಿದಿರುವ ಭುವಿ, ಮತ್ತೆ ತಂಡಕ್ಕೆ ಆಯ್ಕೆಯಾಗುವುದು ಅನುಮಾನವಾಗಿದೆ. ಈ ನಡುವೆ ಭುವನೇಶ್ವರ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಬಯೋ ಬದಲಿಸಿದ್ದು, ಇದನ್ನು ಗಮನಿಸಿದ ನೆಟ್ಟಿಗರು ಭುವಿ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಮೊದಲು ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ ಇಂಡಿಯನ್ ಕ್ರಿಕೆಟರ್ ಎಂದು ಬರೆದುಕೊಂಡಿದ್ದ ಭುವಿ, ಇದೀ ಗ ಅದನ್ನು ಇಂಡಿಯನ್ ಎಂದು ಬದಲಿಸಿದ್ದಾರೆ. ಹೀಗಾಗಿ ಭುವನೇಶ್ವರ್ ಕುಮಾರ್ ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ್ರಾ ಎನ್ನುವ ಅನುಮಾನ ಎಲ್ಲರನ್ನು ಕಾಡಲಾರಂಭಿಸಿದೆ.

33ರ ಹರೆಯದ ಭುವಿ ಕೊನೆಯದಾಗಿ 2022ರ ಟಿ20ಯಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆಡಿದ 6 ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್ಗಳನ್ನು ಪಡೆದಿದ್ದರು. ಆದರೆ ರನ್​ಗಳಿಗೆ ಕಡಿವಾಣ ಹಾಕುವಲ್ಲಿ ಭುವಿ ಯಶಸ್ವಿಯಾಗಿದ್ದರು.

ಟಿ20 ಮಾದರಿಯಲ್ಲಿ ಆಗಾಗ್ಗೆ ಅವಕಾಶ ಪಡೆಯುತ್ತಿದ್ದ ಭುವನೇಶ್ವರ್ ಕುಮಾರ್ ಉಳಿದ ಮಾದರಿಯಲ್ಲಿ ಅಂದರೆ, ಟೆಸ್ಟ್ ಕ್ರಿಕೆಟ್​ನಲ್ಲಿ 2018 ರಲ್ಲಿ ಕೊನೆಯದಾಗಿ ತಂಡದಲ್ಲಿ ಕಾಣಿಸಿಕೊಂಡಿದ್ದ ಭುವಿ, ಜನವರಿ 2022 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡದ ಭಾಗವಾಗಿದ್ದರು.

ಈ ವರ್ಷ ನಡೆಯಲ್ಲಿರುವ ಏಷ್ಯಾಕಪ್ ಹಾಗೂ ವಿಶ್ವಕಪ್​ನಲ್ಲಿ ಭುವಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಏಕೆಂದರೆ ಮೂವರು ವೇಗಿಗಳಾಗಿ ಸಿರಾಜ್, ಬುಮ್ರಾ ಹಾಗೂ ಶಮಿ ಆಡುವುದು ಖಚಿತವಾಗಿದೆ. ಇನ್ನೊಂದೆಡೆ ಯುವ ಟಿ20 ತಂಡವನ್ನು ಕಟ್ಟಲು ಆರಂಭಿಸಿರುವ ಬಿಸಿಸಿಐ ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್​ಗೆ ಭುವಿಯನ್ನು ಆಯ್ಕೆ ಮಾಡುವುದು ಅನುಮಾನವಾಗಿದೆ.