ಜಾತಿ ಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ, ಕೇವಲ ಗೊಂದಲ ಸೃಷ್ಟಿಸುತ್ತಿದೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ನ.24: ಜಾತಿ‌ ಜನಗಣತಿ ಗೊಂದಲ ವಿಚಾರ ಸಂಬಂಧ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು ಕಾಂಗ್ರೆಸ್ ಸರ್ಕಾರದಲ್ಲೇ ಗೊಂದಲವಿದೆ. ಜಾತಿ ಜನಗಣತಿ ವಿಚಾರದಲ್ಲಿ ದೊಡ್ಡ ಪ್ರಮಾಣದ ಗೊಂದಲ‌ ಸೃಷ್ಟಿಯಾಗುತ್ತಿದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತೆ. ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಜಾತಿಜನಗಣತಿ ಮಾಡಬೇಕಿರುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ ಕೆಲಸವನ್ನ ನಾವು ಮಾಡುತ್ತೇವೆ ಅಂತಾ ರಾಜ್ಯ ಸರ್ಕಾರ ಹೇಳುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಜಾತಿ ಜನಗಣತಿ ವರದಿಯ ಪತ್ರ ಮಾಯವಾಗಿದೆ ಅಂತಾ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರೇ ಪತ್ರ ಬರೆದಿದ್ದಾರೆ. ಈ ವಿಚಾರದ ಬಗ್ಗೆ ಸರ್ಕಾರದಲ್ಲೇ ಸಹಮತವಿಲ್ಲ. ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಮೊದಲಾದವರಿಂದ ಇದರ ಬಗ್ಗೆ ವಿರೋಧವಿದೆ. ಈ ಕುರಿತು ವರದಿ ಜಾರಿಯಾಗಬಾರದೆಂದ ವಿರೋಧ ಅವರಲ್ಲೇ ಇದೆ. ಸರ್ಕಾರದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಇರುವಾಗ ವರದಿ ಹೇಗೆ ಸಲ್ಲಿಸುತ್ತಾರೆ? ಕೆಲ‌ ಶಾಸಕರನ್ನ ಎತ್ತಿಕಟ್ಟಿ ಸಿಎಂ ಸಿದ್ಧರಾಮಯ್ಯ ತಮ್ಮ ಪಾರುಪತ್ಯ ಮೆರೆಯುತ್ತಿದ್ದಾರೆ. ಜನರ ಹಿತದೃಷ್ಠಿಯಿಂದ ಸರ್ಕಾರ ಸರಿಯಾಗಿ‌ ನಡೆಸಬೇಕು. ಆದರೆ ಸಿದ್ಧರಾಮಯ್ಯ 20 ಶಾಸಕರನ್ನ ಮೈಸೂರಿಗೆ ಕಳಿಸುವ ಪ್ರಯತ್ನ ಮಾಡಿದರು. ಸಧ್ಯ ಹಲವು ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ. ಈ ರೀತಿ ಗೊಂದಲ ಸೃಷ್ಠಿಸಿದ್ದಾರೆ ಇದು ಸರಿಯಲ್ಲ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.

ಜಾತಿ ಜನಗಣತಿ ವಿಚಾರದಲ್ಲೂ ಇದೇ ರೀತಿ ಗೊಂದಲಗಳಿವೆ. ಜನ ಐದು ವರ್ಷ ಅಧಿಕಾರ ನೀಡಿದ್ದು ಗೊಂದಲಗಳಿಲ್ಲದೇ ಕೆಲಸ ಮಾಡಲು. ಜನತಾ ದರ್ಶನ, ಜನಸಂಪರ್ಕ ಕಾರ್ಯಕ್ರಮಗಳು ನಿಂತು ಹೋಗಿವೆ. ಬಹಳಷ್ಟು ಭಾಗದಲ್ಲಿ ಸಚಿವರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಆಡಳಿತಯಂತ್ರ ಸಂಪೂರ್ಣ ಕುಸಿತ ಕಂಡಿದೆ. ಸರ್ಕಾರ ಈ‌ ನ್ಯೂನತೆಗಳನ್ನ ಸರಿಪಡಿಸಬೇಕು ಎಂದರು.

ಇನ್ನು ಇದೇ ವೇಳೆ ಪ್ರಧಾನಿ ಮೋದಿಯವರನ್ನ ಅಪಶಕುನಿ ಎಂಬ ರಾಹುಲ್ ಆರೋಪ ವಿಚಾರ ಸಂಬಂಧ ಮಾತನಾಡಿದ ಜೋಶಿ, ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡದಿರೋದೇ ಉತ್ತಮ. ಅವರು ಯಾವ ಕೀಳು ಮಟ್ಟಕ್ಕೆ ಇಳಿಯುತ್ತಾರೆ ಅನ್ನೋದಕ್ಕೆ ಈ‌ ಹೇಳಿಕೆಯೇ ಸಾಕ್ಷಿ. ರಾಹುಲ್ ಗಾಂಧಿಗೆ ಹೊಸ ವಿಷಯ ಬರೆದುಕೊಡುವವರೆಗೂ ಅವರು ಏನೇನೋ ಮಾತನಾಡುತ್ತಾರೆ. ದೇಶದಲ್ಲಷ್ಟೇ ಅಲ್ದೇ ಇಡೀ ವಿಶ್ವದಲ್ಲಿ‌ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮೋದಿ ವಿರುದ್ಧ ಹೇಳಿಕೆ ನೀಡಿದಷ್ಟು ಅವರ ಮೇಲೆ ಜನರ ಆಶೀರ್ವಾದ ಹೆಚ್ಚಿಗೆಯಾಗುತ್ತೆ ಎಂದರು.