ರಾಮನಗರ: ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ, ಪಲ್ಟಿಯಾಗಿ ಹೊತ್ತಿ ಉರಿದ ಕಾರು

ರಾಮನಗರ, ನ.24: ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡುತ್ತಿದ್ದ ಚಾಲಕನಿಗೆ ಬ್ಯಾಲೆನ್ಸ್ ತಪ್ಪಿ ಕಾರು ರಸ್ತೆಯಲ್ಲೇ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ರಾಮನಗರ ತಾಲೂಕಿನ ದೊಡ್ಡಗಂಗವಾಡಿ ಗ್ರಾಮದ ಬಳಿ ನಡೆದಿದೆ. ಕಾರಿನಿಂದ ಕೆಳಗಿಳಿದು ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಮೂಲದ ರೋಹಿತ್, ತರುಣ್, ಮಂಜು ಬಚಾವಾದ ಯುವಕರು. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯುವಕರನ್ನು ವಶಕ್ಕೆ ಪಡೆಯಲಾಗಿದೆ.

ಯುವಕರು ಕಂಠಪೂರ್ತಿ ಕುಡಿದು ಗ್ರಾಮದೊಳಗೆ ರ್‍ಯಾಶ್ ಡ್ರೈವಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಓರ್ವ ವ್ಯಕ್ತಿಗೆ ಗುದ್ದಿ ಎಸ್ಕೇಪ್ ಆಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ, ಹೊತ್ತಿ ಉರಿದಿದೆ ಎನ್ನಲಾಗುತ್ತಿದೆ. ಕಾರಿನಲ್ಲಿದ್ದ ಯುವಕರನ್ನ ಹಿಡಿದು ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯುವಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.