ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿಯ ಭರ್ಜರಿ ಹುಟ್ಟಹಬ್ಬ ಆಚರಣೆ: ಜೈಲಾಧಿಕಾರಿಗಳು ಗಪ್​ ಚುಪ್​

ಬೆಂಗಳೂರು, ನ.24: ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದ್ರು ಸಿಗುತ್ತೆ, ಎಂತಹ ಐಷಾರಾಮಿ ಜೀವನವನ್ನು ಬೇಕಾದ್ರು ನಡೆಸಬಹುದು ಎಂಬುವುದನ್ನು ಸಾಬೀತು ಮಾಡಲು ಈಗಾಗಲೇ ಅನೇಕ ವಿಡಿಯೋಗಳು ಸಿಕ್ಕಿವೆ. ಇದರ ಜೊತೆಗೆ ಈಗ ಮತ್ತೊಂದು ಸಾಕ್ಷ್ಯ ದೊರೆತಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಾರನೊಬ್ಬ ಭರ್ಜರಿ ಬರ್ತ್‌ಡೇ ಸೆಲೆಬ್ರೇಶನ್ ಮಾಡಿಕೊಂಡಿದ್ದಾನೆ ಹೊರಗಿನಿಂದ ಬಂದವರು ಜೈಲಿನಲ್ಲಿ ಕೊಲೆಗಾರನಿಗೆ ಹೂವಿನ ಹಾರ ಹಾಕಿ ಕೇಕ್ ಕತ್ತರಿಸಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಗುತ್ತಿರುವ ಅಕ್ರಮಗಳಿಗೆ ಇನ್ನೂ ಕಡಿವಾಣ ಹಾಕಲಾಗಿಲ್ಲ. ಪರಪ್ಪನ ಅಗ್ರಹಾರ ಜೈಲಿನೊಳಗಡೆ ರೌಡಿಗಳಿಗೆ ಹೈಫೈ ಸೌಲಭ್ಯ ನೀಡಲಾಗುತ್ತಿದೆ. ರೌಡಿಗಳು ಹೊರಗಿದ್ರು ಅಬ್ಬರವೇ ಜೈಲಿನಲ್ಲಿದ್ದರೂ ಅಬ್ಬರವೇ ಎಂಬಂತಾಗಿದೆ. ಹೊರಗಡೆಯಿಂದ ಬಂದ ಗೆಳೆಯರು ತಮ್ಮ ಕೊಲೆಗಾರ ಸ್ನೇಹಿತನಿಗೆ ಹಾರ, ಕೇಕ್ ತೆಗೆದುಕೊಂಡು ಹೋಗಿ ಬರ್ತ್ ಡೇ ಆಚರಿಸಿದ್ದಾರೆ. ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿರುವ ಉಮೇಶ್‌, ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಿಕೊಂಡಿದ್ದಾನೆ. ಕೇಕ್ ತಿಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಅಲ್ಲದೆ ಜೈಲು ಅಧಿಕಾರಿಗಳು ಬರ್ತ್‌ಡೇಗೆ ಜೈಲನ್ನೇ ಫೈವ್‌ಸ್ಟಾರ್ ಹೋಟೆಲ್ ರೀತಿಯಲ್ಲಿ ವೇದಿಕೆ ಸಜ್ಜು ಮಾಡಿ ಕೊಟ್ಟಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಈ ಹಿಂದೆ ಹಲವು ಬಾರಿ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮೇಲಧಿಕಾರಿಗಳು ದಾಳಿ ನಡೆಸಿ ತಪಾಸಣೆ ಮಾಡಿದಾಗ ಕೈದಿಗಳ ಬಳಿ ಮೊಬೈಲ್‌ ಫೋನ್‌, ಗಾಂಜಾ ಮತ್ತಿತರ ವಸ್ತುಗಳು ಪತ್ತೆಯಾಗಿದ್ದವು. ಅದಾದ ಬಳಿಕ ಅಲ್ಲಿನ ನಿಯಮಗಳನ್ನು ಬಿಗಿ ಮಾಡಲಾಗಿತ್ತು. ಆದರೂ ಈಗ ಇದೇ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಮನಪರಿವರ್ತನೆಗೆಂದು ಜೈಲಿಗೆ ಕಳುಹಿಸಿದ್ರೆ, ಅಲ್ಲಿಯೂ ರೌಡಿಗಳು, ಕೊಲೆಗಟುಕರು ಹೈಫೈ ಜೀವನ ನಡೆಸಿ ಯಾವುದೇ ಪರಿವರ್ತನೆ ಮಾಡಿಕೊಳ್ಳದೆ ಜೈಲಿನಿಂದ ಬಂದು ಅದೇ ಕೆಲಸಗಳನ್ನು ಮಾಡುತ್ತಾರೆ. ಹೀಗಾಗಿ ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬಿಗಿ ನಿಯಮಗಳನ್ನು ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಇನ್ನು ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ಆನಂದ್ ಎಂಬುವವನನ್ನು ಕೊಲೆ ಉಮೇಶ್‌ ಜೈಲು ಸೇರಿದ್ದ. ಇಂಥವನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಬೆಂಬಲಿಗರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.