ಸಂಜು ಸ್ಯಾಮ್ಸನ್​ರನ್ನು ಟೀಂ ಇಂಡಿಯಾದಿಂದ ಕೈಬಿಟ್ಟಿದ್ಯಾಕೆ? ಇಲ್ಲಿದೆ ವಿವರ

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಏಕದಿನ ವಿಶ್ವಕಪ್  ಆಡಿದ ಹಲವು ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಸಾಕಷ್ಟು ಪ್ರತಿಭೆಯಿದ್ದರೂ ಕೆಲವು ಆಟಗಾರರನ್ನು ಬಿಸಿಸಿಐ ಕಡೆಗಣಿಸುತ್ತಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ. ಇದಕ್ಕೆ ಪ್ರಮುಖ ಕಾರಣ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್​ರನ್ನು ತಂಡಕ್ಕೆ ಆಯ್ಕೆ ಮಾಡದಿರುವುದು. ವಾಸ್ತವವಾಗಿ ಆಸೀಸ್ ವಿರುದ್ಧ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸೂಚನೆಯನ್ನು ಬಿಸಿಸಿಐ ಮೊದಲೇ ನೀಡಿತ್ತು. ಹೀಗಾಗಿ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಆಯ್ಕೆ ಆಗುವುದು ಖಚಿತ ಎಂಬ ಮಾತು ಹರಿದಾಡುತ್ತಿತ್ತು. ಆದರೆ ಈ ಕೇರಳದ ಬ್ಯಾಟರ್​ನನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಬಿಸಿಸಿಐ, ಅವರ ಜಾಗದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಅಷ್ಟಕ್ಕೂ ಸಾಕಷ್ಟು ಪ್ರತಿಭೆ ಇದ್ದರೂ ಸಂಜುರನ್ನು ಏಕೆ ಕಡೆಗಣಿಸಲಾಗುತ್ತಿದೆ. ಭಾರತ ಕ್ರಿಕೆಟ್​ನಲ್ಲಿ ಸಂಜು ಯುಗ ಮುಗಿಯಿತಾ?.

ಸಂಜು ಸ್ಯಾಮ್ಸನ್ ಕಳಪೆ ಫಾರ್ಮ್​

ಟಿ20 ತಂಡಕ್ಕೆ ಸಂಜು ಸ್ಯಾಮ್ಸನ್ ಆಯ್ಕೆಯಾಗದಿರಲು ಪ್ರಮುಖ ಕಾರಣ ಅವರ ಕಳಪರ ಫಾರ್ಮ್. ಸಂಜು ಕಳೆದ ಎರಡು ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದರು. ವೆಸ್ಟ್ ಇಂಡೀಸ್‌ನಲ್ಲಿ ನಡೆದ 5 ಪಂದ್ಯಗಳ ಟಿ0 ಸರಣಿ ಮತ್ತು ಐರ್ಲೆಂಡ್‌ನಲ್ಲಿ ಆಡಿದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿಯೂ ಸಂಜುಗೆ ಅವಕಾಶ ನೀಎಲಾಯಿತು. ಆದರೆ ಸಂಜು ಸ್ಯಾಈ ಎರಡೂ ಸರಣಿಗಳಲ್ಲೂ ರನ್​ಗಳಿಸುವಲ್ಲಿ ದಯನೀಯವಾಗಿ ವಿಫಲರಾದರು. ವೆಸ್ಟ್ ಇಂಡೀಸ್ ಟಿ20 ಸರಣಿಯಲ್ಲಿ ಸಂಜು ಕೇವಲ 32 ರನ್ ಗಳಿಸಿದರೆ, ಐರ್ಲೆಂಡ್ ವಿರುದ್ಧ 2 ಪಂದ್ಯಗಳಲ್ಲಿ 41 ರನ್ ಗಳಿಸಲಷ್ಟೇ ಶಕ್ತರಾದರು. ಇದರಲ್ಲಿ ಅವರ ಗರಿಷ್ಠ ಸ್ಕೋರ್ 27 ರನ್ ಆಗಿತ್ತು. ಒಂದು ಅಥವಾ ಎರಡು ಸರಣಿಗಳ ಕಳಪೆ ಫಾರ್ಮ್​ ಅನ್ನು ಗಮನದಲ್ಲಿಟ್ಟುಕೊಂಡು ಆಟಗಾರನನ್ನು ತಂಡದಿಂದ ಕೈಬಿಡುವುದು ಸರಿಯಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಸ್ಯಾಮ್ಸನ್ ತನ್ನ ಟಿ20 ವೃತ್ತಿಜೀವನದಲ್ಲಿ ಒಟ್ಟು 24 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 20 ಕ್ಕಿಂತ ಕಡಿಮೆ ಇದೆ.

ಸಂಜು ಬದಲಿಯಾಗಿ ಸಾಕಷ್ಟು ಆಯ್ಕೆಗಳು

ಸಂಜು ಸ್ಯಾಮ್ಸನ್ ಅವರನ್ನು ಹೊರಗಿಡಲು ಇನ್ನೊಂದು ಪ್ರಮುಖ ಕಾರಣವೆಂದರೆ, ಟೀಂಇಂಡಿಯಾಗೆ ಸಂಜು ಬದಲಿಯಾಗಿ ಆಯ್ಕೆಗಳ ಕೊರತೆಯಿಲ್ಲ. ಸಂಜು ಬದಲಿಯಾಗಿ ತಂಡಕ್ಕೆ ಈಗಾಗಲೇ ಹಲವು ಆಯ್ಕೆಗಳು ಸಿಕ್ಕಿವೆ. ಇದರಲ್ಲಿ ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ ಸೇರಿದ್ದಾರೆ. ತಿಲಕ್ ವರ್ಮಾ ಬಗ್ಗೆ ಹೇಳುವುದಾದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಹೊರತುಪಡಿಸಿ, ಅವರು ಬೌಲಿಂಗ್ ಕೂಡ ಮಾಡುತ್ತಾರೆ. ರಿಂಕು ಸಿಂಗ್ ಮ್ಯಾಚ್ ಫಿನಿಶರ್ ಆಗಿ ಹೊರಹೊಮ್ಮುತ್ತಿದ್ದಾರೆ. ಹಾಗೆಯೇ ಜಿತೇಶ್ ಶರ್ಮಾ ಅವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಕೌಶಲ್ಯದಿಂದ ಆಯ್ಕೆದಾರರನ್ನು ಮೆಚ್ಚಿಸಿದ್ದಾರೆ.

ದೇಶೀ ಟೂರ್ನಿಯಲ್ಲೂ ಸಂಜು ಫ್ಲಾಪ್

ವಾಸ್ತವವಾಗಿ ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾದಲ್ಲಿ ಪುನರಾಗಮನ ಮಾಡಲು ಉತ್ತಮ ಅವಕಾಶವನ್ನು ಹೊಂದಿದ್ದರು. ವಿಶ್ವಕಪ್​ ಸಮಯದಲ್ಲಿ ನಡೆದ ದೇಶೀ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸಂಜುಗೆ ಮಿಂಚುವ ಅವಕಾಶವಿತ್ತು. ಆದರೆ ಆ ಅವಕಾಶವನ್ನೂ ಸಂಜು ಸರಿಯಾಗಿ ಬಳಸಿಕೊಳ್ಳಲಿಲ್ಲ. ಈ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿದ ಸಂಜು ಅಲ್ಲಿಯೂ ತಮ್ಮ ಕಳಪೆ ಫಾರ್ಮ್​ ಮುಂದುವರೆಸಿದರು. 27.60ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಸಂಜು ಕೇವಲ 138 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಸಂಜು ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೆ ನಿಸ್ಸಂಶಯವಾಗಿ ತಂಡಕ್ಕೆ ಆಯ್ಕೆಯಾಗುತ್ತಿದ್ದರು.