ಲಕ್ನೋದಲ್ಲಿ ಹಿಟ್​ ಆ್ಯಂಡ್ ರನ್, ಪೊಲೀಸ್​ ಅಧಿಕಾರಿ ಮಗ ಸಾವು

ಯುವಕರ ವೇಗದ ವಾಹನ ಚಾಲನೆಗೆ ಪೊಲೀಸ್​ ಅಧಿಕಾರಿ ಮಗ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಶ್ವೇತಾ ಶ್ರೀವಾಸ್ತವ ಅವರ ಮಗ ನೈಮಿಶ್ ಕೃಷ್ಣ ಉದ್ಯಾನದ ಗೇಟ್‌ ಹೊರಗೆ ಸ್ಕೇಟಿಂಗ್ ಮಾಡುತ್ತಿದ್ದಾಗ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಬಳಿಕ ಸಾವನ್ನಪ್ಪಿದ್ದಾನೆ. ತಾಯಿಯ ಎದುರೇ ಈ ಅಪಘಾತ ಸಂಭವಿಸಿದೆ.

ವಾಹನದಲ್ಲಿ ಸಾರ್ಥಕ್ ಸಿಂಗ್ ಹಾಗೂ ಆತನ ಸ್ನೇಹಿತ ದೇವಶ್ರೀ ವರ್ಮಾ ಇದ್ದರು ಇಬ್ಬರೂ ಕೂಡ ವಿದ್ಯಾರ್ಥಿಗಳು. ತೀವ್ರ ಹುಡುಕಾಟದ ಬಳಿಕ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 279 (ಅಜಾಗರೂಕ ಚಾಲನೆ) ಮತ್ತು 304-ಎ (ನಿರ್ಲಕ್ಷ್ಯದ ಚಾಲನೆಯಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಕ್ರಮವಾಗಿ ಇಂದಿರಾ ನಗರ ಸೆಕ್ಟರ್ 16 ಮತ್ತು 19 ರ ನಿವಾಸಿಗಳು.

150ನ ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಸಾರ್ಥಕ್ ಸಿಂಗ್ ಅವರು ಬಾರಾಬಂಕಿಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯನ ಪುತ್ರನಾಗಿದ್ದರೆ, ದೇವಶ್ರೀ ವರ್ಮಾ ಉದ್ಯಮಿ ಕುಟುಂಬಕ್ಕೆ ಸೇರಿದವರು.

ವರ್ಮಾ ಅವರು ಸೋಮವಾರ ರಾತ್ರಿ ಕಾನ್ಪುರದ ಆಭರಣ ವ್ಯಾಪಾರಿ ಅನ್ಶುಲ್ ವರ್ಮಾ ಅವರ ಚಿಕ್ಕಪ್ಪನಿಂದ ಎಸ್‌ಯುವಿಯನ್ನು ತೆಗೆದುಕೊಂಡು ಬಂದಿದ್ದ. ಮಂಗಳವಾರ ಬೆಳಗ್ಗೆ ಅದನ್ನು ರೈಡ್‌ಗೆ ತೆಗೆದುಕೊಂಡು ಹೋಗಿದ್ದರು. ಆಭರಣ ವ್ಯಾಪಾರಿ ಕುಟುಂಬ ಕಾರ್ಯಕ್ರಮಕ್ಕಾಗಿ ಲಕ್ನೋಗೆ ಬಂದಿದ್ದರು.

ವಿಶೇಷ ಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮತ್ತು ಪೊಲೀಸ್ ಕಮಿಷನರ್ ಎಸ್‌ಬಿ ಶಿರಾಡ್ಕರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕುಕ್ರೈಲ್ ಬಾಂಧಾ ಬಳಿಯ ಫೈಜಾಬಾದ್ ರಸ್ತೆಯಲ್ಲಿರುವ ಎಎಸ್‌ಪಿ ಶ್ವೇತಾ ಶ್ರೀವಾಸ್ತವ್ ಮನೆಗೆ ತಲುಪಿ ಅವರಿಗೆ ಸಾಂತ್ವನ ಹೇಳಿದರು. ಎಎಸ್ಪಿ ತನ್ನ ತಾಯಿಯೊಂದಿಗೆ ಲಕ್ನೋದಲ್ಲಿ ಉಳಿದುಕೊಂಡಿದ್ದರೆ, ಆಕೆಯ ಪತಿ ಅಭಿನವ್ ಶ್ರೀವಾಸ್ತವ್ ಗುರ್ಗಾಂವ್‌ನಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದಾರೆ.

ಮೃತ ಬಾಲಕ ನೈಮಿಶ್ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ (ಗೋಮತಿ ನಗರ ಶಾಖೆ) 3 ನೇ ತರಗತಿ ಓದುತ್ತಿದ್ದ. ಶ್ವೇತಾ ಶ್ರೀವಾಸ್ತವ ತನ್ನ ಮಗನನ್ನು ಸ್ಕೇಟಿಂಗ್ ಅಕಾಡೆಮಿಗೆ ಕರೆದೊಯ್ದಿದ್ದರು, ಘಟನೆ 5.25ರ ಸುಮಾರಿಗೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಶಹೀದ್​ ಪಥ್ ಕಡೆಯಿಂದ ಬರುತ್ತಿದ್ದ ಎಸ್​ಯುವಿ ಜನೇಶ್ವರ ಮಿಶ್ರಾ ಪಾರ್ಕ್​ ಬಳಿ ಚಲಿಸುತ್ತಿದ್ದಾಗ ಬಾಲಕನಿಗೆ ಡಿಕ್ಕಿ ಹೊಡೆದಿತ್ತು. ತಲೆಗೆ ಗಂಭೀರ ಗಾಯವಾಗಿದ್ದು, ಸಹಾರಾ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾನೆ. ಅಪಘಾತದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದ.