ಟೀಂ ಇಂಡಿಯಾಗೆ ಬಿಗ್ ಶಾಕ್! ಆಸ್ಟ್ರೇಲಿಯಾ ಜೊತೆಗೆ ಆಫ್ರಿಕಾ ಸರಣಿಗೂ ಹಾರ್ದಿಕ್ ಅಲಭ್ಯ!

ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ 2023 ಲೀಗ್ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಈ ಗಾಯದಿಂದಾಗಿ ಇನ್ನೆರಡು ತಿಂಗಳು ಮೈದಾನಕ್ಕೆ ಮರಳುವುದಿಲ್ಲ ಎಂದು ವರದಿಯಾಗಿದೆ.

ಈ ಇಂಜುರಿಯಿಂದಾಗಿ ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಜಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲ್ಲಿರುವ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಗಳಿಂದಲೂ ಪಾಂಡ್ಯ ಹೊರಗುಳಿಯುವ ಸಾಧ್ಯತೆಯಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಹಾರ್ದಿಕ್ ಪಾಂಡ್ಯ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಅಥವಾ ಬೇಡವೇ ಎಂಬುದನ್ನು ವೈದ್ಯಕೀಯ ತಂಡ ಇನ್ನೂ ನಿರ್ಧರಿಸಿಲ್ಲ. ಎರಡು ವಾರಗಳ ಹಿಂದೆ ಹಾರ್ದಿಕ್ ಪಾಂಡ್ಯ ಅವರನ್ನು ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಕೇಳಲಾಗಿತ್ತು. ಆ ಬಳಿಕ ತರಬೇತುದಾರರು ಕ್ರಮೇಣ ಬೌಲಿಂಗ್ ವೇಗವನ್ನು ಹೆಚ್ಚಿಸಲು ಪಾಂಡ್ಯಗೆ ಸಲಹೆ ನೀಡಿದ್ದರು. ಈ ವೇಳೆ ಪಾಂಡ್ಯಗೆ ಮತ್ತೆ ಕಾಲು ನೋವು ಕಾಣಿಸಿಕೊಂಡಿತು.

ಹಾರ್ದಿಕ್ ಎಸೆದ ಮೊದಲ ಮೂರು ಎಸೆತಗಳಲ್ಲಿ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಆದರೆ ಮುಂದಿನ ಎಸೆತದಲ್ಲಿ ವೇಗವನ್ನು ಹೆಚ್ಚಿಸುವ ಸಮಯದಲ್ಲಿ ಪಾಂಡ್ಯ ಕಾಲಿನಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತು. ಇದನ್ನು ಹಾರ್ದಿಕ್ ಅವರು ಸಹಾಯಕ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಇದರ ನಂತರ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ವೈದ್ಯಕೀಯ ತಂಡವು ಮತ್ತೊಂದು ಸುತ್ತಿನ ಸ್ಕ್ಯಾನ್ ನಡೆಸಲು ನಿರ್ಧರಿಸಿತ್ತು.

ಇದಾದ ನಂತರ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಪಾಂಡ್ಯ, ‘ನಾನು ವಿಶ್ವಕಪ್‌ನ ಉಳಿದ ಪಂದ್ಯಗಳಲ್ಲಿ ಆಡಲಾಗುತ್ತಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ. ಆದರೆ ನಾನು ನನ್ನ ತಂಡದೊಂದಿಗೆ ಇರುತ್ತೇನೆ ಮತ್ತು ಪ್ರತಿ ಪಂದ್ಯದ ಪ್ರತಿ ಬಾಲ್‌ನಲ್ಲಿ ಅವರನ್ನು ಹುರಿದುಂಬಿಸುತ್ತೇನೆ’ ಎಂದು ಬರೆದುಕೊಂಡಿದ್ದರು.

ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಇಂಜುರಿಗೆ ತುತ್ತಾದರು. ಇದರಿಂದ ಅವರಿಗೆ ತಮ್ಮ ಓವರ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕೂಡಲೇ ಅವರನ್ನು ಸ್ಕ್ಯಾನ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ನಂತರ ಗಾಯದ ತೀವ್ರತೆಯನ್ನು ಪರಿಶೀಲಿಸಿದ ಬಿಸಿಸಿಐ, ಪಾಂಡ್ಯರನ್ನು ವಿಶ್ವಕಪ್ ತಂಡದಿಂದ ಕೈಬಿಟ್ಟಿತ್ತು.