ಮಂಗಳೂರಿನ ಜನರು ಪತ್ನಿಗೆ ಕಳ್ಳಿ ಅಂತಾರೆಂದು ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ ಪತಿ

ಬೆಂಗಳೂರು  ಮಂಗಳೂರಿನಲ್ಲಿ ವಾಸವಿದ್ದಾಗ ತನ್ನ ಪತ್ನಿಯ ಮೇಲೆ ಕಳ್ಳತನ ಆರೋಪ ವ್ಯಕ್ತವಾಗಿತ್ತು. ಜನರು ತನ್ನ ಪತ್ನಿಯನ್ನು ಕಳ್ಳಿ, ಕಳ್ಳಿ ಎಂದು ಕರೆಯುತ್ತಿದ್ದರು. ಇದರಿಂದ ಪತ್ನಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಕರೆತಂದು ವಾಸವಿದ್ದ ಪತಿ, ಇದ್ದಕ್ಕಿದ್ದಂತೆ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ. 

ಕೊಲೆಯಾದ ಮಹಿಳೆಯನ್ನು ಸರಿತಾ (35) ಎಂದು ಗುರುತಿಸಲಾಗಿದೆ. ಆಕೆಯ ಪತಿ ತಾರಾನಾಥ್‌ ಕೊಲೆ ಮಾಡಿದ ಆರೋಪಿ ಆಗಿದ್ದಾನೆ. ಇನ್ನು ಈ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದೆ. ಮಂಗಳೂರಿನ ಮೂಲಕ ದಂಪತಿ ದುಡಿಮೆಗಾಗಿ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರು. ಇಲ್ಲಿ ಪಾನಿಪೂರಿ ಮಾರಾಟ ಮಾಡುತ್ತಾ ಜೀವನ ಕಟ್ಟಿಕೊಂಡಿದ್ದರು. ಇನ್ನು ಪ್ರತಿನಿತ್ಯ ಕೆಲಸದಲ್ಲಿ ಇಬ್ಬರೂ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ, ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಜೀವನ ಮಾಡುತ್ತಿದ್ದರು. ಆದರೆ, ತನ್ನ ಪತ್ನಿ ಕಳ್ಳಿ ಎನ್ನುವ ವಿಚಾರ ಬೆಂಗಳೂರಿಗೆ ಬಂದರೂ ಬೆಂಬಿಡದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದಾನೆ. 

ಪತ್ನಿಯ ಮೇಲಿನ ಕಳ್ಳಿ ಎಂಬ ಆರೋಪದಿಂದ ಬೇಸತ್ತ ಪತಿ ತಾರಾನಾಥ್‌ ತನ್ನ ಪತ್ನಿ ಮಲಗಿರುವಾಗ ಕುತ್ತಿಗೆಗೆ ಹಗ್ಗವನ್ನು ಬಿಗಿದು ಕೊಲೆ ಮಾಡಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದನು. ಆದರೆ, ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಸಾಲದೇ ಸೀದಾ ಪೊಲೀಸ್‌ ಠಾಣೆಗೆ ಹೋಗಿದ್ದಾನೆ. ಅಲ್ಲಿ ಪೊಲೀಸರಿಗೆ ತನ್ನ ಪತ್ನಿಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಬಂಧಿಸುವಂತೆ ಶರಣಾಗಿದ್ದಾರೆ. ಇನ್ನು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆತನೊಂದಿಗೆ ತೆರಳಿ ಸ್ಥಳ ಮಹಜರ್‌ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಸಾಬೀತಾಗಿದ್ದು, ಪತಿ ತಾರಾನಾಥನನ್ನು ವಶಕ್ಕೆ ಪಡೆದಿದ್ದಾರೆ.ಸದ್ಯ ವೈಟ್ ಫೀಲ್ಡ್ ಪೊಲೀಸರಿಂದ ಆರೋಪಿಯ ವಿಚಾರಣೆಮ ಮಾಡುತ್ತಿದ್ದಾರೆ.