ನಾನು ಯೋಗ್ಯ ಅಲ್ಲ ಅನ್ನೋದು ತೋರಿಸಿ ಹೋದಳು; ಬ್ರೇಕಪ್ ಬಳಿಕ ಮತ್ತೆ ಪ್ರೀತಿ ಮಾಡಿದ್ರಾ ರಾಜ್​ ಶೆಟ್ಟಿ?

ರಾಜ್ ಬಿ. ಶೆಟ್ಟಿ ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನೀಡಿದ್ದಾರೆ. ಅವರು ಹೊಸ ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳು ಸಾಕಷ್ಟು ಗಮನ ಸೆಳೆಯುತ್ತವೆ. ಈಗ ಅವರ ನಟನೆಯ‘ಟೋಬಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಆಗಸ್ಟ್ 25ರಂದು ಈ ಚಿತ್ರ ರಿಲೀಸ್ ಆಗಲಿದೆ. ಇದೊಂದು ರಿವೇಂಜ್ ಕಥೆ ಎಂಬುದನ್ನು ಟ್ರೇಲರ್ ಹೇಳಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಅವರು ವಾಹಿನಿಯ  ‘ಭರ್ಜರಿ ಬ್ಯಾಚುಲರ್ಸ್’ ರಿಯಾಲಿಟಿ ಶೋನ ವೇದಿಕೆ ಏರಿದ್ದರು. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರೀತಿ, ಪ್ರೇಮ, ಬ್ರೇಕಪ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಲವ್ ಮ್ಯಾರೇಜ್ ಬೆಟರ್

ಪ್ರೀತಿ ವಿಚಾರದಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಂಬಿಕೆ ಇರುತ್ತದೆ. ಕೆಲವರಿಗೆ ಪ್ರೀತಿಸಿ ಮದುವೆ ಆಗೋದು ಇಷ್ಟವಿರುವುದಿಲ್ಲ. ಕೆಲವರಿಗೆ ಪ್ರೀತಿಸಿಯೇ ಮದುವೆ ಆಗಬೇಕೆಂದಿರುತ್ತದೆ. ‘ನನಗೆ ಲವ್ ಮ್ಯಾರೇಜ್ ಇಷ್ಟ. ಇದರಲ್ಲಿ ತಪ್ಪು ಮಾಡೋಕೆ ಸಾಕಷ್ಟು ಅವಕಾಶ ಇದೆ. ಮದುವೆ ಬಳಿಕ ಅವರಿಗೋಸ್ಕರ ನಾವೊಂದು ಹೆಜ್ಜೆ ಇಡುತ್ತೇವೆ. ನಮಗೋಸ್ಕರ ಅವರೊಂದು ಹೆಜ್ಜೆ ಇಡುತ್ತಾರೆ. ಆಗ ಇಬ್ಬರು ಒಟ್ಟಿಗೆ ಸಾಗಬಹುದು ಅನ್ನೋದು ಗೊತ್ತಾಗುತ್ತದೆ. ಅವರೊಂದು ಹೆಜ್ಜೆ ಇಡುತ್ತಾರೆ, ನಾನು ಬೇರೆ ಕಡೆ ಹೆಜ್ಜೆ ಇಡುತ್ತೇವೆ. ಆಗ ಇಬ್ಬರೂ ಬೇರೆ ಕಡೆ ಹೋಗಬೇಕು ಅನ್ನೋದು ಗೊತ್ತಾಗುತ್ತದೆ’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.

ನಾನು ಕಂಡೀಷನ್ ಹಾಕಲ್ಲ

ಮದುವೆ ಆಗೋ ಹುಡುಗಿ ನೀವು ಬದಲಾಗಬೇಕು ಎಂದರೆ ಏನು ಮಾಡುತ್ತೀರಿ ಎಂದು ಕೇಳಲಾಯಿತು. ‘ನಾನು ಇರೋದು ಇಷ್ಟೇ. ನಾನು ಇರೋದೇ ಒಂದು ಲೋಟ. ಆ ನೀರನ್ನು ಚೊಂಬಿನಲ್ಲಿ ಹಾಕಿ ತುಂಬಿಸ್ತೀನಿ ಎಂದರೆ ಸಾಧ್ಯವಿಲ್ಲ. ನಾನು ಇರುವ ಹಾಗೆ ಇರೋಕೆ ಬಿಡು. ನೀನು ಹೇಗಿದ್ದರೂ ನಾನು ಅದನ್ನು ಪ್ರಶ್ನೆ ಮಾಡಲ್ಲ. ಇಬ್ಬರೂ ಬೆಳೆಯುತ್ತಾ ಹೋಗಬೇಕು. ಪ್ರಬುದ್ಧತೆ ಇರುವ ವ್ಯಕ್ತಿ ಕಂಡೀಷನ್ ಹಾಕಲ್ಲ’ ಎಂದಿದ್ದಾರೆ ರಾಜ್​ ಬಿ. ಶೆಟ್ಟಿ.

ಲವ್ ಬ್ರೇಕಪ್ ಕಥೆ..

‘ಪದವಿ ಶಿಕ್ಷಣ ಪಡೆಯುವಾಗ ಒಂದು ಹುಡುಗಿ ಪ್ರೀತಿ ಮಾಡಿದ್ಲು. ಆರು ವರ್ಷ ಆ ಪ್ರೀತಿ ಇತ್ತು. ರಿಲೇಷನ್ ಸೆಟ್ ಆಗುವಾಗಲೇ ನಾನು ಅವಳಿಗೆ ಹೇಳಿದ್ದೆ, ‘ನೀನು ಬಿಟ್ಟು ಹೋಗುತ್ತೀಯಾ ಎಂದರೆ ನಾನು ಕಾರಣ ಕೇಳುವುದಿಲ್ಲ’ ಎಂದು. ಹಾಗೆಯೇ ಆಯಿತು. ಆರು ವರ್ಷದ ಬಳಿಕ ಬ್ರೇಕಪ್ ಆಯಿತು. ಅವಳು ಬಿಟ್ಟು ಹೋಗದೇ ಇದ್ದಿದ್ದರೆ ನಾನು ಕೆಟ್ಟ ಮನುಷ್ಯನಾಗಿಯೇ ಉಳಿದುಕೊಳ್ಳುತ್ತಿದ್ದೆ. ಹಾಗಂತ ಈಗ ನಾನು ಒಳ್ಳೆಯವನಾಗಿದ್ದೀನಿ ಎಂದಲ್ಲ. ಕೊನೇಪಕ್ಷ ನಾನು ಎಷ್ಟು ಕೆಟ್ಟವನು ಅನ್ನೋದು ನನಗೆ ಈಗ ಗೊತ್ತಾಗಿದೆ. ಅವಳು ಬ್ರೇಕಪ್ ಮಾಡಿದ್ದರಿಂದಲೇ ನಾನು ಬೆಳೆದೆ. ನನಗೆ ಪ್ರೀತಿಯೇ ಕೊಡಲು ಬಂದಿರಲಿಲ್ಲ ಅನ್ನೋದು ನಂತರ ಗೊತ್ತಾಗಿತ್ತು. ನಾನು ಯೋಗ್ಯ ಅಲ್ಲ ಅನ್ನೋದನ್ನು ತೋರಿಸಿ ಹೋದಳು’ ಎಂದಿದ್ದಾರೆ ಅವರು.