ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಮಾಜಿ ಗ್ರಾಪಂ ಸದಸ್ಯನ ಬರ್ಬರ ಕೊಲೆ

ಕಲಬುರಗಿ, ಜುಲೈ 24: ಮಧ್ಯಸ್ಥಿಕೆವಹಿಸಿ ಐದು ಸಾವಿರ ಸಾಲ ಕೊಡಿಸಿದ್ದ ಮಾಜಿ ಗ್ರಾಮ ಪಂಚಾಯತ್ ಸದಸ್ಯನನ್ನೇ ಬರ್ಬರವಾಗಿ ಕೊಲೆಮಾಡಿದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ನಡೆದಿದೆ. ನೀಡಿದ ಸಾಲವನ್ನು ಮರಳಿ ನೀಡದ ಹಿನ್ನೆಲೆ ಸಾಲ ನೀಡಿದ ಮಹಿಳೆಯ ಕುಟುಂಬ ಮತ್ತು ಸಾಲ ಪಡೆದ ಮಹಿಳೆಯ ಕುಟುಂಬದ ನಡುವೆ ಜಗಳ ಆರಂಭವಾಗಿ ಮಧ್ಯಸ್ಥಿಕೆ ವಹಿಸಿದ್ದ ಅಶೋಕ್ ಪ್ಯಾಟಿ (45) ಎಂಬವರನ್ನು ಮಾರಕಾಸ್ತ್ರಗಳಿಂದ ಇರಿದು, ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.

ಮದರಿ ಗ್ರಾಮದಲ್ಲಿ ನಿನ್ನೆ ಗ್ರಾಮ ಪಂಚಾಯತ್ ಚುನಾವಣೆಯಿತ್ತು. ಚುನಾವಣೆ ಶಾಂತಿಯುತವಾಗಿ ನಡೆಯಿತು ಅಂತ ಅಧಿಕಾರಿಗಳು ಮತ್ತು ಗ್ರಾಮದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ರಾತ್ರಿ 10 ಗಂಟೆ ಸಮಯದಲ್ಲಿ ಮದರಿ ಗ್ರಾಮದಲ್ಲಿ ನೆತ್ತರು ಹರಿದಿದೆ. ಮಾಜಿ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಪ್ಯಾಟಿ ಅವರನ್ನು ಬರ್ಬರ ಕೊಲೆ ಮಾಡಲಾಗಿದೆ.

ಅಶೋಕ್ ಪ್ಯಾಟಿ ಮನೆಯ ಹಿಂಬಾಗದಲ್ಲಿಯೇ ಮನೆಯಿರುವ ಹಾಲಗಡ್ಲಾ ಕುಟುಂಬದ ಜಾನಪ್ಪ, ಸಿದ್ದಪ್ಪ, ಗುಂಡಪ್ಪ ಮತ್ತು ಅವರ ಸಂಬಂಧಿಗಳು ಈ ಕೊಲೆ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲಿ ಅಶೋಕ್ ಮತ್ತು ಆತನ ಪುತ್ರನ ಜೊತೆ ಜಾನಪ್ಪ ಹಾಲಗಡ್ಲ ಜಗಳ ತಗೆದಿದ್ದನಂತೆ. ಈ ವೇಳೆ ಅಶೋಕ್​ನನ್ನು ಸುಮ್ಮನೇ ಬಿಡುವುದಿಲ್ಲಾ ಅಂತ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಕಳೆದ ರಾತ್ರಿ ಅಶೋಕ್ ಮತ್ತು ಆತನ ಪತ್ನಿ ಶಾರದಾಬಾಯಿ ಆರೋಪಿ ಜಾನಪ್ಪನ ಮನೆಗೆ ಹೋಗಿದ್ದರಂತೆ.

ಅಶೋಕ್ ಪತ್ನಿ ಶಾರದಬಾಯಿ, ಯಾಕೆ ನನ್ನ ಗಂಡ ಮತ್ತು ಮಕ್ಕಳ ತಂಟೆೆಗೆ ಬರುತ್ತಿದ್ದೀಯಾ ಅಂತ ಪ್ರಶ್ನೆ ಮಾಡಿದ್ದಳಂತೆ. ಈ ಸಂದರ್ಭದಲ್ಲಿ ಅಶೋಕ್ ಮತ್ತು ಜಾನಪ್ಪನ ನಡುವೆ ಮಾತಿನ ಚಕಮಕಿ ನಡೆದಿದೆಯಂತೆ. ಅಶೋಕ್ ಜಾನಪ್ಪ ಮತ್ತು ಆತನ ಸಹೋದರನಿಗೆ ಎರಡೇಟು ಹೊಡೆದು ತನ್ನ ಮನೆಗೆ ಬಂದಿದ್ದನಂತೆ. ಇದರಿಂದ ಸಿಟ್ಟಾದ ಜಾನಪ್ಪ ಮತ್ತು ಆತನ ಸಹೋದರರಾದ ಸಿದ್ದಪ್ಪ, ಗುಂಡಪ್ಪ ಮತ್ತು ಕುಟುಂಬದವರು ಅಶೋಕ್ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಅಶೋಕ್ ಮೇಲೆ ದಾಳಿ ಮಾಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಅಶೋಕ್ ಮನೆಯಿಂದ ಹೊರಬಂದಿದ್ದಾನೆ. ಆದರೆ ಆತನನ್ನು ಬೆನ್ನತ್ತಿದ್ದ ಆರೋಪಿಗಳು ನಡುರಸ್ತೆಯಲ್ಲಿಯೇ ಕೊಲೆ ಮಾಡಿದ್ದಾರೆ.

ಕೊಲೆಗೆ ಕಾಣವಾಯ್ತು ಐದು ಸಾವಿರ ಸಾಲದ ಮಧ್ಯಸ್ಥಿಕೆ

ಕೊಲೆ ಆರೋಪಿಗಳು ಮತ್ತು ಕೊಲೆಯಾದ ಅಶೋಕ್ ಕೂಡಾ ಒಂದೇ ಜಾತಿಗೆ ಸೇರಿದವರು. ಮೊದಲು ಎರಡು ಕುಟುಂಬಗಳು ಚೆನ್ನಾಗಿಯೇ ಇದ್ದವು. ಆದರೆ ಐದು ವರ್ಷದ ಹಿಂದೆ ಅಶೋಕ್, ಜಾನಪ್ಪನ ಸಂಬಂಧಿಯಾಗಿರುವ ಶಾಂತಮ್ಮ ಅನ್ನೋ ಮಹಿಳೆಯಿಂದ, ತನಗೆ ಪರಿಚಿತಳಿದ್ದ ಗ್ರಾಮದ ಇಮಾಮ್ ಬಿ ಅನ್ನೋ ಮಹಿಳೆಗೆ ಐದು ಸಾವಿರ ಸಾಲಕ್ಕೆ ಮಧ್ಯಸ್ಥಿಕೆ ವಹಿಸಿದ್ದನಂತೆ. ಆದರೆ ಇಮಾಮಬಿ ಪಡೆದ ಸಾಲವನ್ನು ಮರಳಿ ನೀಡಿರಲಿಲ್ಲ. ಆದರೆ ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಅಶೋಕ್​ಗೆ ಜಾನಪ್ಪ ಮತ್ತು ಆತನ ಸಂಬಂಧಿ ಹಣಕ್ಕಾಗಿ ಪೀಡಿಸುತ್ತಿದ್ದರಂತೆ.

ಅಸಲು ಮತ್ತು ಬಡ್ಡಿ ಸೇರಿ ಇಪ್ಪತ್ತು ಸಾವಿರವಾಗಿದ್ದು, ಹಣ ಕೊಡಿಸು, ಇಲ್ಲವೇ ನೀನೇ ನೀಡು ಅಂತ ಪೀಡಿಸುತ್ತಿದ್ದರಂತೆ. ಇದೇ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಅಶೋಕ್ ಮತ್ತು ಕೊಲೆ ಮಾಡಿರುವ ಜಾನಪ್ಪ ಕುಟುಂಬದ ನಡುವೆ ದ್ವೇಷ ಬೆಳದಿತ್ತಂತೆ. ಇದೇ ವಿಚಾರವಾಗಿ ಈ ಹಿಂದೆ ಕೂಡಾ ಎರಡು ಕುಟುಂಬದ ನಡುವೆ ಜಗಳ ಕೂಡಾ ಆಗಿವೆಯಂತೆ. ಇನ್ನು ಗ್ರಾಮ ಪಂಚಾಯತ್​ನಿಂದ ಮನೆಗಳು ಬಂದಿದ್ದು, ಈ ಬಾರಿ ತಾನು ಮನೆ ಹಾಕಿಸಿಕೊಳ್ಳುತ್ತೇನೆ, ಮುಂದಿನ ಬಾರಿ ನೀನು ಮನೆ ಹಾಕಿಸಿಕೋ ಅಂತ ಅಶೋಕ್ ಜಾನಪ್ಪಗೆ ಹೇಳಿದ್ದನಂತೆ. ಇವೆಲ್ಲಾ ಸಿಟ್ಟು ಇಟ್ಟುಕೊಂಡಿದ್ದ ಜಾನಪ್ಪ ಮತ್ತು ಆತನ ಕುಟುಂಬದವರು ನಿನ್ನೆ ಅಶೋಕ್​ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಆರೋಪಿಗಳಾದ ಜಾನಪ್ಪ, ಸಿದ್ದಪ್ಪ, ಗುಂಡಪ್ಪ ಕೂಡಾ ಗಾಯಗೊಂಡಿದ್ದು, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಸಹೋದರರಂತೆ ಬಾಳಬೇಕಿದ್ದವರು, ಐದು ಸಾವಿರ ಹಣದ ವಿಚಾರಕ್ಕೆ ವೈಷಮ್ಯ ಬೆಳಸಿಕೊಂಡು ಕೊಲೆ ಮಾಡಿರುವುದು ದುರಂತವೇ ಸರಿ.