ಮೀನು ಹಿಡಿಯಲು ಹೋಗಿ ಯುವಕರಿಬ್ಬರು ನೀರುಪಾಲು

ತುಮಕೂರು: ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ ಗುಬ್ಬಿಯ ಕಡಬಾ ಕೆರೆಯಲ್ಲಿ ನಡೆದಿದೆ.

ಮೃತರನ್ನು ಹರೀಶ್ (31) ಯೋಗೀಶ್ (36) ಎಂದು ಗುರುತಿಸಲಾಗಿದೆ. ಆಡುಗೊಂಡನಹಳ್ಳಿ ನಿವಾಸಿಗಳಾದ ಇಬ್ಬರು ಶನಿವಾರ ರಾತ್ರಿ ವೇಳೆ ಕಡಬಾ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು. ರಾತ್ರಿ ವೇಳೆ ವಿಪರೀತ ಮಳೆಯಾಗಿದ್ದು ಕೆರೆಯ ನೀರಿನ ಮಟ್ಟ ಅರಿಯದೆ ಮುಳುಗಿ ಹೋಗಿದ್ದಾರೆ. ಮನೆಗೆ ವಾಪಸ್ ಆಗದ ಕಾರಣ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು ಕೆರೆ ಬಳಿ ಬಂದು ನೋಡಿದಾಗ ಇಬ್ಬರು ಮುಳುಗಿರುವುದು ಖಾತ್ರಿಯಾಗಿದೆ.

ಈ ಬಗ್ಗೆ ಕುಟುಂಬಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮುಳುಗಿರುವ ಶವಗಳನ್ನು ಪತ್ತೆ ಹಚ್ಚಿದ್ದಾರೆ. ಶವಗಳು ಸಿಗುತ್ತಿದ್ದಂತೆ ಯುವಕರ ಕುಟುಂಬಸ್ಥರ ಶೋಕ ಮುಗಿಲು ಮುಟ್ಟಿದೆ.