ತಂದೆಯ ಬರ್ಬರ ಹತ್ಯೆ, ಅಪ್ಪನಿಗೂ ಗೊತ್ತಿತ್ತು ಪುತ್ರಿಯೇ ತನ್ನನ್ನು ಸಾಯಿಸಬಹುದು ಅಂತಾ, ಹತ್ಯೆ ಮಾಡಿದ ಮಗಳು ಎಲ್ಲಿ ಹೋದಳು?

ರಾಮನಗರ, ಜುಲೈ 21: ಆ ವೃದ್ಧನಿಗೆ ತನ್ನ ಮಗಳನ್ನು ಕಂಡರೆ ಭಯ ಆಗ್ತಾ ಇತ್ತು. ಅದಕ್ಕಾಗಿಯೇ ಮಗಳ ಮನೆಯ ಪಕ್ಕದಲ್ಲೇ ಬೇರೆ ಮನೆ ಮಾಡಿಕೊಂಡು ಜೀವಿಸ್ತಿದ್ದ, ಮಗಳು ಮೆಂಟಲ್ ಥರ ಆಡ್ತಾಳೆ, ಬಿಟ್ರೆ ಕೊಲೆನೇ ಮಾಡ್ತಾಳೆ ಅಂತ‌ ಹೆದರಿ ಗೇಟ್ ಲಾಕ್ ಮಾಡಿಕೊಂಡಿರ್ತಿದ್ದ ಅಪ್ಪ, ಕೊನೆಗೆ, ಎಲ್ಲರಿಗೂ ಯಾವುದರ ಭಯವಿತ್ತೋ ಅದೇ ನಡೆದುಹೋಗಿದೆ. ಹೌದು..ಚನ್ನಪಟ್ಟಣ ತಾಲೂಕಿನ ರಾಮನರಸಿಂಹರಾಜ ಪುರ ಗ್ರಾಮದ ನಿವೃತ್ತ ಕೃಷಿ ಅಧಿಕಾರಿ ಹೆಚ್​​. ಹುಚ್ಚೀರಯ್ಯ ಮಗಳಿಂದಲೇ ಹತ್ಯೆಯಾಗಿರುವ ಆರೋಪ ಬಂದಿದೆ. ಎಲ್ಲರಂತೆ ತಮ್ಮ ಮಗಳನ್ನ ಅದ್ದೂರಿಯಾಗಿ ಮದುವೆ ಮಾಡಿದ್ದ ಹುಚ್ಚೀರಯ್ಯ (68) ನಾಯಿದೊಳ್ಳೆ ಗ್ರಾಮದ ತಮ್ಮ ತೋಟದ ಮನೆಯಲ್ಲಿ ನಿವೃತ್ತಿ ಬದುಕು ನಡೆಸುತ್ತಿದ್ದರು.

ಮೊದಲಿನಿಂದಲೂ ಮಗಳ ಮೆಂಟಲ್ ಸ್ಥಿತಿ ಸರಿಯಿಲ್ಲ ಅನ್ನೋ ಕಾರಣಕ್ಕೆ ಬಹಳ ಭಯದಲ್ಲೇ ಬದುಕುತ್ತಿದ್ದ ಹುಚ್ಚೀರಯ್ಯ, ಇದ್ದ ಮನೆ ಮಗಳಿಗೆ ಬಿಟ್ಟು ಬೇರೆ ಮನೆ ಮಾಡಿಕೊಂಡು ಇವಳ ತಂಟೇನೆ ಬೇಡ ಅಂತಿದ್ರು,‌ ಆದರೆ ಯಾವುದರ ಭಯ ಹುಚ್ಚೀರಯ್ಯ ಹಾಗೂ ಊರಿನವರಿಗಿತ್ತೋ ಅದೇ ನಡೆದು ಹೋಗಿದೆ. ‌ಮಂಗಳವಾರ ರಾತ್ರಿ ಹುಚ್ಚೀರಯ್ಯರನ್ನು ಗುದ್ದಲಿಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆ ಆದ ದಿನದಿಂದ ಮಗಳು ಪುಷ್ಪಲತಾ (30) ಮೊಬೈಲ್ ಜತೆ ಪರಾರಿಯಾಗಿದ್ದಾಳೆ.

ಕಳೆದ ಮಂಗಳವಾರ ರಾತ್ರಿ ಊಟಕ್ಕೆ ಕೂತಿದ್ದ ಹುಚ್ಚೀರಯ್ಯ ಜೊತೆ ಎಂದಿನಂತೆ ಮಗಳು ಪುಷ್ಪ ಜಗಳ ಪ್ರಾರಂಭ ಮಾಡಿದ್ದಾಳಂತೆ. ಹಣದ ವಿಚಾರಕ್ಕೆ ಜಗಳ ನಡೆದು ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಮಗಳು ಪುಷ್ಪ ಗುದ್ದಲಿಯಿಂದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಈ ವಿಷಯವನ್ನ ಯಾರಿಗೂ ತಿಳಿಸದ ಮಗಳು ಪುಷ್ಪ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಎಂದಿನಂತೆ ಬುಧವಾರ ರಾತ್ರಿ ಸಂಬಂಧಿಕರು ತೂಟದ ಮನೆಗೆ ಊಟ ತೆಗೆದುಕೊಂಡು ಹೋದಾಗ ಹುಚ್ಚೀರಯ್ಯ ಕೊಲೆಯಾಗಿರೊದು ಬೆಳಕಿಗೆ ಬಂದಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಹುಚ್ಚೀರಯ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ರಾಮನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ನಿವೃತ್ತ ಕೃಷಿ ಅಧಿಕಾರಿ ಹುಚ್ಚೀರಯ್ಯ ಹಾಗೂ ಮಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿದ್ದು ಹಲ್ಲೆ ಕೂಡ ಮಾಡಿದ್ದಳು. ಗಲಾಟೆ ವಿಕೋಪಕ್ಕೆ ತಿರುಗಿ ಮೊನ್ನೆ ಮಗಳೇ ತಂದೆಯನ್ನ ಹತ್ಯೆ ಮಾಡಿದ್ದಾಳೆ. ಸದ್ಯ ತಲೆಮರೆಸಿಕೊಂಡಿರುವ ಮಗಳ ಪತ್ತೆಗೆ ಎರಡು ತಂಡ ರಚನೆ ಮಾಡಿ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದಿದ್ದಾರೆ

ಇದ್ದಿಬ್ಬರು ಮಕ್ಕಳಲ್ಲಿ ಒಬ್ಬ ಹಿರಿಯ ಮಗಳು ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ರೆ, ಕೊನೆ ಮಗಳಾದ್ರೂ ಮುದಿವಯಸ್ಸಲ್ಲಿ ಆಸರೆ ಆಗ್ತಾಳೆ ಅಂತ ಅಂದುಕೊಂಡಿದ್ದ ತಂದೆಗೆ ಆಕೆಯೇ ಬರ್ಬರ ಸಾವು ದಯಪಾಲಿಸಿರುವುದು ಅಪರೂಪದ ಸಂಗತಿಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಪೊಲೀಸರು ಆರೋಪಿ ಪುತ್ರಿ ಪುಷ್ಪಳ ಪತ್ತೆಗೆ ಬಲೆ ಬೀಸಿದ್ದಾರೆ.