ಹಸುಗಳಿಗೆ ಮಾರಕ ಕಾಯಿಲೆ ಬಗ್ಗೆ ವರದಿ, ಆನೇಕಲ್​ಗೆ ವಿಜ್ಞಾನಿಗಳ ತಂಡ ಭೇಟಿ

ಬೆಂಗಳೂರು ಗ್ರಾಮಾಂತರ, ಜು.19: ಆನೇಕಲ್ ತಾಲೂಕಿನ ಹಲವು ಹಳ್ಳಿಗಳಲ್ಲಿ ಹಸುಗಳು ಮಾರಕ ಕಾಯಿಲೆಯಿಂದ ಬಳಲಿ ಸಾವನ್ನಪ್ಪುತ್ತಿದ್ದು, ಈ ಕುರಿತು ನಿನ್ನೆ(ಜು.18) ಟಿವಿ9 ವರದಿ ಮಾಡಿತ್ತು. ಅದರಂತೆ ಇದೀಗ ವರದಿ ಬೆನ್ನಲ್ಲೆ ಎಚ್ಚೆತ್ತ ಪಶು ಇಲಾಖೆಯವರು. ಇಂದು(ಜು.19) ಆನೇಕಲ್​ ತಾಲೂಕಿನ ಹಲವು ಹಳ್ಳಿಗಳಿಗೆ ಹೆಬ್ಬಾಳದ ಪಶುಪಾಲನ‌ ಮತ್ತು ವೈದ್ಯಕೀಯ ಸೇವಾ ಇಲಾಖೆ ವಿಜ್ಞಾನಿಗಳು ತಂಡ ಭೇಟಿ ನೀಡಿದೆ. ಬಮೂಲ್, ಪಶುಪಾಲನೆ ಇಲಾಖೆ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಅಧಿಕಾರಿಗಳು, ಹರ್ಪಿಸ್ ವೈರಸ್, ಸರ್ಪ ಹುಣ್ಣು ಎಂಬ ರೋಗದ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ರಕ್ತದ ಮಾದರಿ, ಕಿವಿ ಹಾಗೂ‌ ಮೂಗಿನ ದ್ರವವನ್ನ ಸಂಗ್ರಹ ಮಾಡಿಕೊಂಡಿರುವ ವಿಜ್ಞಾನಿಗಳು ಮೂರು ದಿನದಲ್ಲಿ ವರದಿ ನೀಡಲಿದ್ದಾರೆ.

ರೋಗದ ಲಕ್ಷಣಗಳು ಹೀಗಿವೆ

ಇನ್ನು ಹಸುಗಳಿಗೆ ಮೊದಲು ಕಿವಿ ಸೋರಲು ಪ್ರಾರಂಭವಾಗುತ್ತದೆ. ಬಳಿಕ ಮೂರು ನಾಲ್ಕು ದಿನಗಳಲ್ಲಿ ತಲೆಯಲ್ಲಿ ಒಂದು ರೀತಿಯ ಸೋಂಕು ಕಾಣಿಸಿಕೊಳ್ಳುತ್ತದೆ. ಈ ಹಿನ್ನಲೆ ಹಸುಗಳು ಸೊರಗಲು ಶುರುವಾಗುತ್ತದೆ. ನಂತರ ಮೂಗು, ಬಾಯಿಯಲ್ಲಿ ಜೊಲ್ಲು ಸೋರಿಕೆಯಾಗುತ್ತದೆ. ಈ ಸಮಯದಲ್ಲಿ ಹಸು ವಾಲಿಕೊಂಡು ನಿಲ್ಲುವುದರಿಂದ ತಲೆ, ಬೆನ್ನು ಮೂಳೆ ಸಂಪೂರ್ಣ ನಿಷ್ಕ್ರಿಯಗೊಂಡು ತಿಂದ ಆಹಾರ ಮೂಗು ಹಾಗೂ ಬಾಯಿಯಿಂದ ರೀಟರ್ನ್​ ಬರುತ್ತದೆ. ಬಳಿಕ ಹಸುಗಳು ಆಹಾರ ತಿನ್ನದೆ ನೀರನ್ನೂ ಕುಡಿಯದೇ ಅಸ್ವಸ್ಥಗೊಂಡು ಸಾವನ್ನಪ್ಪುತ್ತವೆ. ಇದರಿಂದ ಹಸುಗಳು ಹೈರಾಣಾಗಿದ್ದು, ಸೂಕ್ತ ಚಿಕಿತ್ಸೆ ಇಲ್ಲದ ಕಾರಣ ರೈತರು ಕಂಗಾಲಾಗಿದ್ದಾರೆ.

ಈಗಾಗಲೇ 15 ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿದೆ

ಇನ್ನು ಆನೇಕಲ್​ಗೆ ಅಂಟಿಕೊಂಡಿರುವ ತಮಿಳುನಾಡಿನ ಹಲವು ಗ್ರಾಮಗಳಲ್ಲಿ ಈ ವಿಚಿತ್ರ ರೋಗವು ಕಾಣಿಸಿಕೊಂಡು ಆದೆಷ್ಟೋ ಹಸುಗಳು ಕೊನೆಯುಸೆರೆಳೆದಿದ್ದವು. ಇದೀಗ ಆನೇಕಲ್​ತಾಲ್ಲೂಕಿನ ಗಡಿ ಗ್ರಾಮಗಳಿಗೆ ಈ ಮಾರಕ ಕಾಯಿಲೆ ಆವರಿಸಿದ್ದು, ರೈತರ ಜೀವನಾಡಿಯಾಗಿದ್ದ ಹಸುಗಳ ಮಾರಣಹೋಮವಾಗುತ್ತಿದೆ. ಈಗಾಗಲೇ 30 ಕ್ಕೂ ಹೆಚ್ಚು ಹಸುಗಳು ರೋಗಕ್ಕೆ ತುತ್ತಾಗಿದ್ದರೆ, ಸುಮಾರು 15 ಹೆಚ್ಚು ಹಸುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಇದೀಗ ಆನೇಕಲ್ ಭಾಗದಲ್ಲಿ ಹಸುಗಳಲ್ಲಿ ಸೋಂಕು ಉಲ್ಬಣಗೊಂಡಿರುವುದರಿಂದ ಪ್ರತ್ಯೇಕ ಲಸಿಕೆ ಇಲ್ಲದೆ ಹಸುಗಳು ಸಾವನ್ನಪ್ಪುತ್ತಿದೆ. ಹೈನುಗಾರಿಕೆಯನ್ನೇ ನಂಬಿಕೊಂಡಿದ್ದ ರೈತರಿಗೆ ಈ ಕಾಯಿಲೆಯಿಂದ ಹೈರಾಣರಾಗಿದ್ದು, ಹಸುಗಳನ್ನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಇದೀಗ ಹಳ್ಳಿಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿದ್ದು, ಆದಷ್ಟು ಬೇಗ ಈ ಮಾರಕ ಖಾಯಿಲೆಗೆ ಚಿಕಿತ್ಸೆ ದೊರಕುವಂತಾಗಲಿ.