ಜು.20ರಿಂದ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಆರಂಭ, ಸರ್ವಪಕ್ಷ ಸಭೆ ಕರೆದ ಸರ್ಕಾರ

ದೆಹಲಿ: ಜುಲೈ 20ರಿಂದ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಇದಕ್ಕೂ ಮುನ್ನ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸರ್ಕಾರವು ಇಂದು (ಜು.19) ಸರ್ವಪಕ್ಷ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಸರ್ಕಾರದ ಹಿರಿಯ ಮಂತ್ರಿಗಳು ಹಾಗೂ ವಿವಿಧ ಪಕ್ಷಗಳು ಸದಸ್ಯರು ತಮ್ಮ ಸಮಸ್ಯೆಗಳನ್ನು ತಿಳಿಸುವುದು ಹಿಂದಿನಿಂದಲ್ಲೂ ನಡೆದುಕೊಂಡು ಬಂದಿರುವ ವಾಡಿಕೆ. ಜತೆಗೆ ಅಧಿವೇಶನವನ್ನು ಸುಗಮವಾಗಿ ನಡೆಸಲು ಸಹಕಾರಿಸುವಂತೆ ಸಭೆಯಲ್ಲಿ ತಿಳಿಸಲಾಗುತ್ತದೆ. ಇನ್ನೂ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಿದ್ದಾರೆ.

ಇನ್ನೂ ಈ ಸರ್ವಪಕ್ಷ ಸಭೆಯನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಮಂಗಳವಾರ ಕರೆದಿದ್ದರು, ಆದರೆ ಅನೇಕ ಪಕ್ಷಗಳ ನಾಯಕರು ಗೈರುಹಾಜರಾದ ಕಾರಣ ಸಭೆಯನ್ನು ಮುಂದೂಡಲಾಗಿದೆ. ಜತೆಗೆ ವಿರೋಧ ಪಕ್ಷದ ನಾಯಕರು ಹಾಗೂ ಬೇರೆ ಬೇರೆ ಪಕ್ಷಗಳ ನಾಯಕರು ಬೆಂಗಳೂರಿನಲ್ಲಿ ನೆನ್ನೆ (ಮಂಗಳವಾರ) ಒಗ್ಗಟಿನ ಸಭೆ ನಡೆಸಿದ್ದಾರೆ. ಇನ್ನೊಂದು ಕಡೆ ಎನ್​​ಡಿಎ ಮಿತ್ರಕೂಟಗಳು ಕೂಡ ಸಭೆಯನ್ನು ನಡೆಸಿದೆ. ಒಟ್ಟಿನಲ್ಲಿ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಎರಡು ಪಕ್ಷಗಳ ಬಲ-ಬಲಗಳ ಶಕ್ತಿ ಪ್ರದರ್ಶನ ಮಾಡುತ್ತಿದೆ.

ಸರ್ವಪಕ್ಷ ಸಭೆಗೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಲ್ಹಾದ್ ಜೋಶಿ ಮತ್ತು ಪಿಯೂಷ್ ಗೋಯಲ್ ಸೇರಿದಂತೆ ತಮ್ಮ ಸಂಪುಟದ ಕೆಲವು ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿದ್ದಾರೆ. ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಗೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಈ ಸಭೆಯಲ್ಲಿ ಚರ್ಚಿಸಲಿದ್ದಾರೆ. ಇದರ ಜತೆಗೆ ಸಂಸತ್​​ ಸದಸ್ಯರು ತಮ್ಮ ಲೋಕಸಭಾ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳವ ದೃಷ್ಟಿಯಿಂದಲ್ಲೂ ಈ ಸಭೆಯನ್ನು ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಡಳಿತ ಬಣವು ಅಧಿವೇಶನಕ್ಕೆ ತನ್ನ ಕಾರ್ಯತಂತ್ರವನ್ನು ರೂಪಿಸುತ್ತಿದ್ದಂತೆ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಬಿಜೆಪಿ ನಾಯಕರ ಪ್ರತ್ಯೇಕ ಸಭೆಗಳು ಬುಧವಾರ ನಡೆಯಲಿವೆ. ಇನ್ನೂ ಈ ವರ್ಷ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಎಲ್ಲ ಪಕ್ಷಗಳು ಸಜ್ಜಾಗುತ್ತಿದ್ದಂತೆ, ಈಗಾಗಲೇ ಬಿಜೆಪಿ ಮತ್ತು ವಿರೋಧ ಪಕ್ಷಗಳು ಪರಸ್ಪರ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಇನ್ನೂ ಅಧಿವೇಶದಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ದೊಡ್ಡ ಪೈಟ್​ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನೂ ಮುಂಗಾರು ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿ ಹಾಕಲು ಬೆಲೆ ಏರಿಕೆ ಮತ್ತು ತನಿಖಾ ಸಂಸ್ಥೆಗಳ ದುರುಪಯೋಗದ ವಿಷಯಗಳ ಜೊತೆಗೆ ಮಣಿಪುರ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಕಲ ಸಿದ್ಧತೆಯನ್ನು ಮಾಡಿದೆ.