ವೀರಾಂಜನೇಯ ಸ್ವಾಮಿಗೆ ನಮಿಸಿ ಪ್ರಾಣಬಿಟ್ಟ ಕೋತಿ

ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ ತಾಲೂಕಿನ ಸರ್ಜಾಪುರದ ರಾಮನಾಯಕನಹಳ್ಳಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ರಾಮನಾಯಕನಹಳ್ಳಿ ಗ್ರಾಮದ ವೀರಾಂಜನೇಯ ಸ್ವಾಮಿ ದೇವಾಲಯದ ಬಾಗಿಲಿನಲ್ಲಿ ಕೋತಿ ಪ್ರಾಣ ಬಿಟ್ಟಿದೆ. ವಿಶೇಷ ಅಂದರೆ ಕೋತಿಯ ನಡೆ ವಿಸ್ಮಯ ಹಾಗೂ ಪವಾಡಕ್ಕೆ ಸಾಕ್ಷಿಯಾಗಿದೆ. ಕೋತಿ ದಿನನಿತ್ಯ ದೇವಾಲಯದ ಬಳಿಯೇ ಓಡಾಡಿಕೊಂಡಿತ್ತು.

ನಿನ್ನೆ (ಜು.17) ಭೀಮನ ಅಮಾವಾಸೆ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಯಂಕಾಲ ದೇವಾಲಯ ಬಾಗಿಲು ಹಾಕಿಕೊಂಡು ಅರ್ಚಕ ರಾಮಕೃಷ್ಣಯ್ಯ ಮನೆ ಹೋಗಿದ್ದಾರೆ. ಮರುದಿನ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಕೋತಿ ಬಾಗಿಲ ಬಳಿ ಮಲಗಿತ್ತು. ಹತ್ತಿರ ಬಂದು ನೋಡಿದಾಗ ಕೈಮುಗಿದ ರೀತಿಯಲ್ಲಿ ಕೋತಿ ಪ್ರಾಣ ಬಿಟ್ಟಿತ್ತು.

ಕೋತಿ ದೇವಾಲಯದ ಮುಖ್ಯದ್ವಾರದ ಬಳಿ ತಲೆ ಇಟ್ಟು ಆಂಜನೇಯನಿಗೆ ನಮಿಸಿ ಕೊನೆಯುಸಿರು ಎಳೆದಿದೆ. ವಿಷಯ ತಿಳಿದು ಗ್ರಾಮಸ್ಥರು ದೇವಾಲಯದ ಬಳಿ ಜಮಾಯಿಸಿದ್ದಾರೆ. ನಂತರ ಕೋತಿಗೆ ಪೂಜೆ ಮಾಡಿ ದೇವಾಲಯದ ಬಲ ಭಾಗದಲ್ಲಿ ಅಂತಿಮಸಂಸ್ಕಾರ ನೆರವೇರಿಸಿದ್ದಾರೆ.

ನೂರು ವರ್ಷಗಳ ಇತಿಹಾಸವಿರುವ ದೇವಾಲಯ

ಸುಮಾರು ನೂರು ವರ್ಷಗಳ ಹಿಂದೆ ಕೊತ್ತೊಳ್ಳು ಮುನಯ್ಯ ಎಂಬುವರು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಜಮೀನನ್ನು ದಾನವಾಗಿ ನೀಡಿದ್ದರು. ಬಳಿಕ ಕೊತ್ತೊಳ್ಳು ಮುನಯ್ಯ ಹಾಗೂ ದಂಪತಿ ಕಾಶಿಗೆ ಹೊರಟು ಹೋದರು. ನಂತರ ಊರಿನ ಅರ್ಚಕರಾದ ರಾಮಕೃಷ್ಣಯ್ಯ ಎನ್ನುವವರು ಪೂಜೆ ಮಾಡಿಕೊಂಡು ಬಂದಿದ್ದರು. ನಂತರ ಇವರ ಕುಟುಂಬದ ಅರ್ಚಕ ಸುದರ್ಶನ್ ಪೂಜೆ ಸಲ್ಲಿಸುತ್ತಿದ್ದಾರೆ.