ಚಿತ್ರದುರ್ಗದಲ್ಲಿ ಉದ್ಯಮಿ ಮನೆಗೆ ನುಗ್ಗಿ ಕಳ್ಳತನ ಪ್ರಕರಣ; ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು

ಚಿತ್ರದುರ್ಗ: ನಗರದಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಆರ್ ಟಿ ನಗರದ ಸಮ್ಮು ಅಲಿಯಾಸ್ ಬಷೀರ್, ಬಿಹಾರ ಮೂಲದ ಮೊಹಮ್ಮದ್ ಸಾಕೀಬ್, ಬೆಂಗಳೂರಿನ ದೇವಸಂದ್ರದ ಪ್ರಸನ್ನ ಬಂಧಿತರು. ಆರೋಪಿಗಳಿಂದ 49.5ಲಕ್ಷ ನಗದು ಸೇರಿ 9ಲಕ್ಷ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಜುಲೈ 8ರಂದು ಉದ್ಯಮಿ ನಜೀರ್ ಅಹ್ಮದ್ ಮನೆಗೆ ನುಗ್ಗಿ ಪಿಸ್ತೂಲು, ಮಾರಕಾಸ್ತ್ರ ತೋರಿಸಿ ಮನೆಯಲ್ಲಿದ್ದವರಿಗೆ ಬೆದರಿಕೆ ಹಾಕಿ, ಮನೆಯಲ್ಲಿದ್ದ 7ಜನರನ್ನು ಬೆಳಗ್ಗೆ 9ಗಂಟೆಯಿಂದ ಸಂಜೆ 5ಗಂಟೆವರೆಗೆ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಬಳಿಕ ಮಹಿಳೆಯರ ಮೈಮೇಲಿದ್ದ 12ತೊಲೆ ಚಿನ್ನಾಭರಣ ದೋಚಿಕೊಂಡು, ಬಳಿಕ ಇಬ್ಬರನ್ನು ಅಪಹರಿಸಿ 50ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರೆಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.

ಹೌದು ಚಿನ್ನಾಭರಣ ಜೊತೆ ಉದ್ಯಮಿ ನಜೀರ್ ಅಹ್ಮದ್ ಪುತ್ರ ಸಮೀರ್, ಅಳಿಯ ಷಹನಾಜ್​ನನ್ನು ಕಿಡ್ನಾಪ್ ಮಾಡಿ, ಕಾರಲ್ಲಿ ಕರೆದುಕೊಂಡು ಹೋಗಿ ಹಣ ಸುಲಿಗೆ ಮಾಡಿದ್ದರು. ಉದ್ಯಮಿ ಚಿತ್ರದುರ್ಗದ ಕ್ಯಾದಿಗ್ಗೆರೆ ಗ್ರಾಮದ ಸ್ನೇಹಿತರ ಬಳಿ ₹25ಲಕ್ಷ, ಬಳಿಕ ದಾವಣಗೆರೆಯಲ್ಲಿ ಸಂಬಂಧಿಕರ ಬಳಿ ₹25ಲಕ್ಷ ಪಡೆದು ಕೊಟ್ಟಿದ್ದರು. ಇದಾದ ಬಳಿಕ ದಾವಣಗೆರೆಯಲ್ಲಿ ಉದ್ಯಮಿ ಹಣ ಕೊಟ್ಟವರು, ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ಕಾರಲ್ಲಿ ಸಮೀರ್, ಷಹನಾಜ್ ಬಿಟ್ಟು ಎಸ್ಕೇಪ್

50ಲಕ್ಷ ಹಣ ಪಡೆದ ದರೋಡೆಕೋರರು ವಾಪಸ್ ಚಿತ್ರದುರ್ಗಕ್ಕೆ ತೆರಳುತ್ತಿದ್ದರು. ಈ ವೇಳೆ ಉದ್ಯಮಿಯ ಹೊಸ ಕಾರು ಅಪಹರಿಸಲು ಕೂಡ ಸ್ಕೆಚ್ ಹಾಕಿದ್ದರು. ಈ ಹಿನ್ನಲೆ ದಾವಣಗೆರೆ ಹಾಗೂ ಚಿತ್ರದುರ್ಗದ ಪೊಲೀಸರು ಅಲರ್ಟ್ ಆಗಿ ಕಾರ್ ಹುಡುಕಾಟ ಆರಂಭಿಸಿದ್ದರು. ರಾತ್ರಿ 10ಗಂಟೆ ವೇಳೆಗೆ ಚನ್ನಗಿರಿ ಬಳಿ ದರೋಡೆಕೋರರ ಕಾರ್ ಬ್ಯಾರಿಕೇಡ್​ಗೆ ಡಿಕ್ಕಿಯಾಗಿತ್ತು. ಬಳಿಕ ಚನ್ನಗಿರಿ ಠಾಣೆಯ ಪೊಲೀಸರು ಕಾರನ್ನು ಬೆನ್ನು ಹತ್ತಿದ್ದಾರೆ. ಈ ವೇಳೆ ಚಿತ್ರದುರ್ಗದ ಚಿಕ್ಕಬ್ಬಿಗೆರೆ ಗ್ರಾಮದ ಬಳಿ ಕಾರು ಜೊತೆಗೆ ಕಾರಲ್ಲಿದ್ದ ಸಮೀರ್, ಷಹನಾಜ್ ಬಿಟ್ಟು ಎಸ್ಕೇಪ್ ಆಗಿದ್ದರು.

ಉದ್ಯಮಿಯ ಬಗ್ಗೆ ಮಾಹಿತಿ ಕಲೆ ಹಾಕಿ ದರೋಡೆ ನಡೆಸಿದ್ದ ದರೋಡೆಕೋರರು

ಉದ್ಯಮಿ‌‌ ಮೂಲತಃ ಗದಗ ಜಿಲ್ಲೆಯವರು, ಆರೋಪಿ ಸಾಕೀಬ್ ಕೂಡ ಗದಗ ಜಿಲ್ಲೆಯಲ್ಲಿ ಎರಡನೇ ಮದುವೆ ಆಗಿದ್ದನು. ಪತ್ನಿ ಗ್ರಾಮಕ್ಕೆ ತೆರಳಿದಾಗ ಉದ್ಯಮಿ ನಜೀರ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆ ಗ್ಯಾಂಗ್ ಕಟ್ಟಿಕೊಂಡು ದರೋಡೆಗೆ ಸ್ಕೆಚ್ ಹಾಕಿದ ದರೋಡೆಕೋರರು, ಸುಮಾರು ಒಂದು ವಾರ ಕಾಲ ಉದ್ಯಮಿಯ ಮನೆ ಸುತ್ತ ಓಡಾಡಿದ್ದರು. ದರೋಡೆಗೆ ಸ್ಕೆಚ್ ವೇಳೆ ಹಿರಿಯೂರಲ್ಲಿ 2ಮನೆ‌ ಕಳ್ಳತನ, ಚಿತ್ರದುರ್ಗದಲ್ಲಿ 1ಬೈಕ್ ಕಳ್ಳತನ, ಜೊತೆಗೆ ಫೆಬ್ರವರಿಯಲ್ಲಿ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಕಾರ್ ಕಳ್ಳತನ ಮಾಡಿ, ವಾಹನ ಸಂಖ್ಯೆ ಬದಲಿಸಿ ಹರಿಯಾಣದ ನಂಬರ್ ಪ್ಲೇಟ್ ಹಾಕಿದ್ದರು.

ಆರೋಪಿ ಸಮ್ಮು ವಿರುದ್ಧ ವಿವಿಧ ಠಾಣೆಯಲ್ಲಿ 20ಕ್ಕೂ ಹೆಚ್ಚು ಪ್ರಕರಣ

ಇನ್ನು ಬಂಧನವಾದಾಗ ಗಾಂಜಾದ ಅಮಲಿನಲ್ಲಿದ್ದ ಆರೋಪಿಗಳನ್ನು ಪೊಲೀಸರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಮಲು ಇಳಿದ 2ದಿನದ ಬಳಿಕ‌ ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು, ಬಳಿಕ ಆರೋಪಿಗಳಲ್ಲಿ ಓರ್ವನಾದ ಸಮ್ಮು ಎಂಬಾತನ ಮೇಲೆ ದರೋಡೆ, ಮನೆ ಕಳ್ಳತನ, ಕೊಲೆ ಸೇರಿ ಒಟ್ಟು 20 ಪ್ರಕರಣದಲ್ಲಿ ಭಾಗಿಯಾದ ಆರೋಪಗಳು ಕೇಳಿಬಂದಿತ್ತು. ಜೊತೆಗೆ ಸಮ್ಮುಗೆ ಬಿಹಾರದ ಸಾಕೀಬ್, ಬೆಂಗಳೂರಿನ ಪ್ರಸನ್ನ ಜತೆಯಾಗಿದ್ದರು.