ಪ್ರೀತಿಸಿದ ಹುಡುಗನ ಕೈಹಿಡಿದಿದ್ದ ಯುವತಿಯನ್ನು ಪೋಷಕರೇ ಬಲವಂತವಾಗಿ ಕರೆದೊಯ್ದ ಪ್ರಕರಣ ಸುಖಾಂತ್ಯ

ಗದಗ (ಜು.15): ಮನೆಯವರ ವಿರೋಧದ ನಡುವೆ ಪ್ರೀತಿಸಿದ ಹುಡುಗನ ಕೈಹಿಡಿದಿದ್ದ ಯುವತಿಯನ್ನು ಪೋಷಕರೇ ಬಲವಂತವಾಗಿ ಕರೆದೊಯ್ದ ಪ್ರಕರಣ ಸುಖಾಂತ್ಯಗೊಂಡಿದೆ. ಪೋಷಕರ ಜತೆಗೆ ತಾನೇ ತೆರಳಿದ್ದೆ ಎಂದು ಯುವತಿ ಹೇಳಿಕೆ ನೀಡಿದ್ದಾರೆ ಅಂತಾ ಗದಗ ಎಸ್ ಪಿ ಬಿಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.

ನಗರದ ಡಿಸಿ ಮಿಲ್‌ ನಿವಾಸಿ ಅಭಿಷೇಕ್‌ ಹಾಗೂ ಹುಬ್ಬಳ್ಳಿಯ ಐಶ್ವರ್ಯಾ ಅವರದ್ದು ಎರಡು ವರ್ಷಗಳ ಪ್ರೀತಿ. ಮದುವೆ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು, ಮುಂದೆ ಅದು ಪ್ರೀತಿಗೆ ತಿರುಗಿತ್ತು. ಪ್ರೀತಿಗೆ ದಾಂಪತ್ಯದ ಬೆಸುಗೆ ಹಾಕಲು ನಿರ್ಧರಿಸಿದ ಜೋಡಿ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾರೆ. ಹುಡುಗನ ಮನೆಯವರು ಖುಷಿಯಿಂದ ಒಪ್ಪಿಕೊಂಡರೆ; ಹುಡುಗಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಐಶ್ವರ್ಯಾ ಪ್ರೀತಿಸಿದ ಹುಡುಗನನ್ನು ಬಿಟ್ಟಿರಲು ಒಪ್ಪಲಿಲ್ಲ. ಒಂದು ದಿನ ಮನೆ ಬಿಟ್ಟು ಬಂದು ಅಭಿಷೇಕ್‌ನನ್ನು ದೇವಸ್ಥಾನದಲ್ಲಿ ಮದುವೆ ಆದರು. ಜೂನ್‌ 23ರಂದು ಜಿಲ್ಲಾ ವಿವಾಹ ನೋಂದಣಿ ಕಚೇರಿಯಲ್ಲಿ ನೋಂದಣಿ ಕೂಡ ಮಾಡಿಸಿದ್ದರು. ಜುಲೈ 14ರಂದು ಆರತಕ್ಷತೆ ಮಾಡಿಕೊಳ್ಳುವ ಸಂಭ್ರಮದಲ್ಲಿದ್ದರು.

ಆದರೆ, ಹುಡುಗಿಯ ಪೋಷಕರು ಬುಧವಾರ ಏಕಾಏಕಿ ಅಭಿಷೇಕ್‌ ಮನೆಗೆ ನುಗ್ಗಿ ಮಗಳನ್ನು ಬಲವಂತದಿಂದ ಕರೆದುಕೊಂಡು ಹೋಗಿದ್ದಾರೆ. ತಡೆಯಲು ಬಂದ ಅಭಿಷೇಕ್‌ ಕಣ್ಣಿಗೆ ಖಾರದಪುಡಿ ಎರಚಿದ್ದಾರೆ. ಅಭಿಷೇಕ್‌ ಸಹೋದರಿ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಹುಡುಗನ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಗದಗ ಮಹಿಳಾ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಪ್ರದೀಪ್‌ ವಿಚಾರಣೆ ನಡೆಸಿ, ಹುಡುಗಿಯನ್ನು ಮರಳಿ ಗದಗಕ್ಕೆ ಕರೆದುಕೊಂಡು ಬಂದಿದ್ದಾರೆ. ಬಳಿಕ ವಿಚಾರಣೆ ನಡೆಸಲಾಗಿ, ಪೋಷಕರ ಜತೆಗೆ ತಾನೇ ತೆರಳಿದ್ದಾಗಿ ಹೇಳಿಕೆ ನೀಡಿದ್ದಾಳೆ. ಸಿನಿಮಿಯ ರೀತಿಯಲ್ಲಿ ಕಾರಿನಲ್ಲಿ ಮಗಳನ್ನು ಬಲವಂತದಿಂದ ಕರೆದುಕೊಂಡು ಹೋಗಿದ್ದ ಪ್ರಕರಣ ಸುಖಾಂತ್ಯ ಕಂಡಿದ್ದು, ಹುಡುಗಿ ಮತ್ತೇ ಗಂಡನ ಮನೆ ಸೇರಿದ್ದಾಳೆ.

ಯುವತಿ ಐಶ್ವರ್ಯಾ ಅವರು ಪೋಷಕರ ಜತೆಗೆ ತಾನೇ ತೆರಳಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ. ಇಡೀ ಘಟನೆ ಯುವತಿಯ ಹೇಳಿಕೆಯನ್ನೇ ಅವಲಂಬಿಸಿದ್ದರಿಂದ ಪ್ರಕರಣ ಸುಖಾಂತ್ಯ ಕಂಡಿದೆ.