ಶೋಕಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಕೆಜಿಎಫ್ ಗ್ಯಾಂಗ್ ಬಂಧನ; ಚಿನ್ನಾಭರಣ ಸೇರಿ 1.5 ಲಕ್ಷ ಹಣ ಜಪ್ತಿ

ಬೆಂಗಳೂರು ಗ್ರಾಮಾಂತರ: ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಕೆಜಿಎಫ್ ಗ್ಯಾಂಗ್ನ್ನು ಜಿಲ್ಲೆಯ ಹೊಸಕೋಟೆ ಉಪವಿಭಾಗದ ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಸುನೀಲ್, ಅರವಿಂದ್, ನಂದಿನಿ, ಮೇರಿ ಬಂಧನಕ್ಕೊಳಗಾದ ಆರೋಪಿಗಳು. ಇನ್ನು ಈ ವೇಳೆ ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ, 3 ಕೆಜಿ ಬೆಳ್ಳಿ ಸೇರಿ1.5 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಈ ಖತರ್ನಾಕ್​ ಗ್ಯಾಂಗ್​ ಸಂಜೆ ವೇಳೆ ಲೈಟ್ ಹಾಕದೇ ಬೀಗ ಹಾಕಿರುವ‌ ಮನೆಗಳನ್ನೆ ಟಾರ್ಗೆಟ್​ ಮಾಡಿ, ಮಧ್ಯರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ, ಹಣ ದೋಚುತ್ತಿದ್ದರು.

ಆವಲಹಳ್ಳಿ ಸೇರಿ ಬೆಂಗಳೂರಿನ ಹಲವಡೆ ಕಳ್ಳತನ ಮಾಡಿರುವ ಗ್ಯಾಂಗ್

ಇನ್ನು ಈ ಗ್ಯಾಂಗ್​ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿತ್ತು. ಆವಲಹಳ್ಳಿ ಸೇರಿ ಬೆಂಗಳೂರಿನ ಹಲವಡೆ ಕಳ್ಳತನ ಮಾಡಿದ್ದು, ಆರೋಪಿಗಳಾದ ಸುನೀಲ್, ಅರವಿಂದ್ ಇಬ್ಬರೂ ಸೇರಿ ಮನೆ ಕಳ್ಳತನ ಮಾಡಿ, ಕದ್ದ ಚಿನ್ನಾಭರಣವನ್ನ ನಂದಿನಿ ಮತ್ತು ಮೇರಿ ಸೇರಿ ಬ್ಯಾಂಕ್, ಅಂಗಡಿಯಲ್ಲಿ ಮಾರಾಟ ಮಾಡಿ ಹಣ ನೀಡುತ್ತಿದ್ದರು.ಇತ್ತ ಕದ್ದ ಹಣದಿಂದ ಈ ಗ್ಯಾಂಗ್ ಪೊಲೀಸರ ಕಣ್ತಪ್ಪಿಸಿಕೊಂಡು‌ ಶೋಕಿ ಮಾಡುತ್ತಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.