ಬೈಕ್​ನಿಂದ ಬಿದ್ದು ಶಿಕ್ಷಕ ಸಾವು; ಹತ್ತಿರವಿದ್ದರೂ ಸಹಾಯಕ್ಕೆ ಬಾರದೇ ಮಾನವೀಯತೆ ಮರೆತ ಜನ

ಮಂಡ್ಯ: ಬೈಕ್​ನಿಂದ ಅಯಾತಪ್ಪಿ ಬಿದ್ದು ಶಿಕ್ಷಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆರೆಗೋಡು ಗ್ರಾಮದ ಬಳಿ ನಡೆದಿದೆ. ರವಿ(45) ಮೃತ ಶಿಕ್ಷಕ.  ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದ ಪರಿಣಿತ ‌ವಿದ್ಯಾಸಂಸ್ಥೆಯ ಶಿಕ್ಷಕನಾಗಿದ್ದ ಅವರು ನಿನ್ನೆ(ಜು.7) ಬೆಳಗ್ಗೆ ಶಾಲೆಗೆ ತೆರಳುವ ವೇಳೆ ಕೆರೆಗೋಡು ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಇನ್ನು ಅಪಘಾತದ ನಂತರ ಕೆಲ ಕಾಲ ಶಿಕ್ಷಕ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ. ಯಾರಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಬೇಡಿಕೊಳ್ಳುತ್ತಿದ್ದ. ಅದನ್ನ ನೋಡಿದರೂ ಯಾರೊಬ್ಬರು ಕೂಡ ಆತನನ್ನ ಆಸ್ಪತ್ರೆಗೆ ಸಾಗಿಸಲು ಮುಂದೆ ಬರದೇ ಅಮಾನವೀಯತೆ ತೋರಿದ್ದಾರೆ.

ಆಸ್ಪತ್ರೆಗೆ ರವಾನೆ ಮಾಡಲು ಹಿಂದೇಟು

ಇನ್ನು ಅಪಘಾತದಲ್ಲಿ ಶಿಕ್ಷಕ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ. ದಯವಿಟ್ಟು ಯಾರಾದರೂ ಆಸ್ಪತ್ರೆಗೆ ಸೇರಿಸಿ ಎಂದು ಅಂಗಲಾಚಿದರೂ ಸ್ಥಳದಲ್ಲಿ ನೆರೆದಿದ್ದ ಜನರು ಮಾತ್ರ ಕರಗಲಿಲ್ಲ. ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕಿದ್ದಾರೆ. ತೀವ್ರವಾಗಿ ಗಾಯಗೊಂಡ ಕಾರಣ, ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಇನ್ನು ಈ ಘಟನೆ ಕೆರೆಗೋಡು ಪೊಲೀಸ್ ಠಾಣೆ ಸಮೀಪವೇ ನಡೆದಿದ್ದರೂ, ಸ್ಥಳಕ್ಕೆ ಪೊಲೀಸರು ಬರುವುದು ಕೂಡ ತಡವಾಗಿತ್ತು. ಆಸ್ಪತ್ರೆಗೆ ಸಾಗಿಸಿದ್ರೆ, ಜೀವ ಉಳಿಯುವ ಸಾಧ್ಯತೆಯಿದ್ದು, ಜನರ ಅಮಾನವೀಯತೆಯಿಂದ ಓರ್ವ ಶಿಕ್ಷಕ ಮೃತನಾಗಿದ್ದಾನೆ.