ಬೆಂಗಳೂರಿಗೆ ಸಿಂಹಪಾಲು ಸಾಧ್ಯತೆ- ಗರಿಗೆದರಿದ ಹಲವು ನಿರೀಕ್ಷೆಗಳು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇಯ ಇಂದು ಬಜೆಟ್ ಮಂಡನೆ ಮಾಡುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿಗರಲ್ಲಿ ಹಲವು ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು `ಬ್ರ್ಯಾಂಡ್ ಬೆಂಗಳೂರು’ ಬಿಲ್ಡ್ ಗೆ ಉತ್ಸುಕತೆ ತೋರಿದ್ದಾರೆ. ಡಿಕೆಶಿ ನಗರಾಭಿವೃದ್ಧಿ ಖಾತೆ ವಹಿಸಿಕೊಂಡಿರೋ ಹಿನ್ನಲೆಯಲ್ಲಿ ಡಿಸಿಎಂ ಹೊಸ ಮೆಟ್ರೋ ಮಾರ್ಗಗಳ ಬಗ್ಗೆ ಉತ್ಸಾಹ ತೋರಿಸಿದ್ದಾರೆ. ಹೀಗಾಗಿ ಮೆಟ್ರೋ ನಿಗಮವು ಮೂರು ಮಾರ್ಗಗಳ ಬಗ್ಗೆ ಬೇಡಿಕೆ ಇಟ್ಟಿದ್ದು, ಹೀಗಾಗಿ ಹೊಸ ಮೆಟ್ರೋ ಮಾರ್ಗವನ್ನು ಸಿಎಂ ಇಂದು ಘೋಷಣೆ ಮಾಡ್ತಾರಾ ಎಂಬ ಕುತೂಹಲ ಹುಟ್ಟಿದೆ. ವೈಟ್ ಫೀಲ್ಡ್ – ಹೊಸಕೋಟೆ 17 ಕಿ.ಮೀ ಮೆಟ್ರೋ ಮಾರ್ಗ, ಒಳ ವರ್ತುಲ ರಸ್ತೆಯಲ್ಲಿ 35 ಕಿ.ಮೀ ಮೆಟ್ರೋ ಮಾರ್ಗ ಹಾಗೂ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಕಾಡುಗೋಡಿ ವರೆಗೆ 25 ಕಿ.ಮೀ ಮಾರ್ಗ ವಿಸ್ತರಣೆ ಮಾಡುವ ನಿರೀಕ್ಷೆ ಇದೆ.

ಬೆಂಗಳೂರು ನಗರಕ್ಕೆ‌ ಹೊಸ ಫ್ಲೈಓವರ್ ಗಳ ನಿರೀಕ್ಷೆಯೂ ಇದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಹೊಸ ಫ್ಲೈಓವರ್ ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಹಿಂದಿನ ಸರ್ಕಾರ 17 ಹೊಸ ಫ್ಲೈಓವರ್ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಇಂದಿನ ಬಜೆಟ್‍ನಲ್ಲಿ ಈ ಬಗ್ಗೆ ಘೋಷಣೆ ಆಗೋ ಸಾಧ್ಯತೆ ಹೆಚ್ಚಿದೆ.

ಇಂದಿನ ಬಜೆಟ್ ನಲ್ಲಿ ಸುರಂಗ ಮಾರ್ಗ   ಘೋಷಣೆ ಮಾಡುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ 100 ಕಿ.ಮೀ ಸುರಂಗ ನಿರ್ಮಾಣದ ಚರ್ಚೆ ಮಾಡಲಾಗಿದೆ. 100 ರಲ್ಲಿ ಅರ್ಧದಷ್ಟಾದ್ರೂ ಮೊದಲ ಭಾಗವಾಗಿ ಘೋಷಣೆ ಸಾಧ್ಯತೆ ಇದೆ. ಈಗಾಗಲೇ ಸುರಂಗ ಮಾರ್ಗ ನಿರ್ಮಾಣ ಸಂಸ್ಥೆಗಳ ಜೊತೆಗೆ ಡಿಸಿಎಂ ಚರ್ಚೆ ಮಾಡಿದ್ದಾರೆ. ಬೆಂಗಳೂರನ್ನು ಟ್ರಾಫಿಕ್ ಮುಕ್ತ ಮಾಡಲು ಡಿಕೆಶಿ ಪಣತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದಲ್ಲಿ ಘೋಷಣೆ ಆಗದಿದ್ರೂ 50 ಕಿ.ಮೀ ಘೋಷಣೆ ಮಾಡಬಹುದು ಎನ್ನಲಾಗಿದ್ದು, ಈ ಬಗ್ಗೆ ಈಗಾಗಲೇ ಸಿಎಂ ಬಳಿ ಡಿಸಿಎಂ ಮನವಿ ಕೂಡ ಮಾಡಿದ್ದಾರೆ.

ಇತ್ತ ಬಿಬಿಎಂಪಿ ಕೂಡ ಇಂದಿನ ಬಜೆಟ್ ಬಗ್ಗೆ ಬಾರಿ ನಿರೀಕ್ಷೆಯಲ್ಲಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿ ಅನುದಾನಕ್ಕೆ ಪಾಲಿಕೆ ಆಡಳಿತ ವರ್ಗ ಪ್ರಸ್ತಾವನೆ ಸಲ್ಲಿಸಿದೆ. ಈ ಬಾರಿ 7,500ಕೋಟಿ ಅನುದಾನದ ಬಿಡುಗಡೆಗೆ ಬೇಡಿಕೆ ಇಟ್ಟಿದೆ. ಬಿಜೆಪಿ ಸರ್ಕಾರದಲ್ಲಿ (BJP Govt) ನಿರೀಕ್ಷಿತ ಪ್ರಮಾಣದ ಅನುದಾನ ಸಿಗದೇ ನಿರಾಸೆಗೊಂಡಿದ್ದ ಬಿಬಿಎಂಪಿ, ಈ ಬಾರಿಯ ಸಿದ್ದರಾಮಯ್ಯ ಬಜೆಟ್‍ನಲ್ಲಿ ಬಿಬಿಎಂಪಿ ಜಾಕ್ ಪಾಟ್ ಹೊಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ.

ಕಳೆದ ಬಾರಿ ಕೇವಲ 3,500 ಕೋಟಿ ಬಿಬಿಎಂಪಿ ಗೆ ಅನುದಾನ ಬಿಡುಗಡೆಯಾಗಿತ್ತು. ಆದರೆ ಅನೇಕ ಕಾಮಗಾರಿ ಹಾಗೂ ಯೋಜನೆಗೆ 3,500 ಕೋಟಿಗೂ ಅಧಿಕ ಹಣ ವೆಚ್ಚವಾಗಿತ್ತು. ಹೀಗಾಗಿ ಈ ಬಾರಿ 7,500ಕೋಟಿ ಅನುದಾನದ ನಿರೀಕ್ಷೆಯ ಬೇಡಿಕೆಯನ್ನು ಬಿಬಿಎಂಪಿ ಇಟ್ಟಿದೆ. ಇನ್ನು ಇಂದಿರಾ ಕ್ಯಾಂಟೀನ್ ರೀ ಲಾಂಚ್ ಘೋಷಣೆ ಮಾಡುವ ಸಾಧ್ಯತೆಗಳಿವೆ. ಜೊತೆಗೆ ಹೆಚ್ಚುವರಿ 200 ಕೋಟಿ ಅನುದಾನದ ನಿರೀಕ್ಷೆ ಇದ್ದು, ಹೊಸ ವಾರ್ಡ್ ಗಳಿಗೆ ಹೊಸ ಕ್ಯಾಂಟೀನ್ ಘೋಷಣೆಯಾಗುವನಿರೀಕ್ಷೆಗಳಿವೆ.