ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳ ನಡುವೆ ಶಿಂದೆ, ಫಡ್ನವಿಸ್ ಮಹತ್ವದ ಚರ್ಚೆ

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಡರಾತ್ರಿ ಮುಖ್ಯಮಂತ್ರಿ  ಏಕನಾಥ್ ಶಿಂದೆಯವರನ್ನು ಭೇಟಿಯಾದರು. ಎನ್‌ಸಿಪಿಯ ಎರಡು ಬಣಗಳ ನಡುವಿನ ಜಿದ್ದಾಜಿದ್ದಿನ ನಡುವೆ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ವಾಸ್ತವವಾಗಿ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಸಿಎಂ ಏಕನಾಥ್ ಶಿಂದೆ ಇವೆಲ್ಲವೂ ವದಂತಿಗಳಷ್ಟೇ ಎಂದು ಹೇಳಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ವಿಭಜನೆಯ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಸಿ ಹೆಚ್ಚಾಗಿದೆ. ಏಕನಾಥ್ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾದ ನಂತರ, ಎನ್‌ಸಿಪಿ ಮೇಲಿನ ಅವರ ಹಕ್ಕು ಕುರಿತು ಕೋಲಾಹಲ ಉಂಟಾಗಿದೆ.

ಎನ್‌ಸಿಪಿಯ ಹೊಸ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಅಜಿತ್ ಪವಾರ್ ಅವರು ಚುನಾವಣಾ ಆಯೋಗದಲ್ಲಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲೆ ಹಕ್ಕು ಸಾಧಿಸಿದ್ದಾರೆ. ಅದೇ ಸಮಯದಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಇವೆಲ್ಲದರ ನಡುವೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ (ಜುಲೈ 6) ತಡರಾತ್ರಿ ಸಿಎಂ ಏಕನಾಥ್ ಶಿಂದೆ ಅವರ ನಿವಾಸದಲ್ಲಿ ಭೇಟಿಯಾದರು.

ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವ ಬಗ್ಗೆ ಶಿವಸೇನೆಯಲ್ಲಿ ಯಾರೂ ಅಸಮಾಧಾನ ಹೊಂದಿಲ್ಲ ಎಂದು ಶಿಂದೆ ಹೇಳಿದ್ದಾರೆ. ಈ ಎಲ್ಲಾ ಸುದ್ದಿಗಳನ್ನು ಪ್ರತಿಪಕ್ಷಗಳು ಹಬ್ಬಿಸಿದ ವದಂತಿಗಳು ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಎಲ್ಲವೂ ಸರಿಯಾಗಿದೆ, ಯಾರೂ ಹೊಸ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದರು. ಅಜಿತ್ ಪವಾರ್ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಯಾದ ನಂತರ ಮುಖ್ಯಮಂತ್ರಿ  ಕುರ್ಚಿಗೆ ಅಪಾಯ ಎದುರಾಗಬಹುದು ಎಂದು ಹೇಳಲಾಗಿತ್ತು.

ಏಕನಾಥ್ ಶಿಂಧೆ ಕೂಡ ಪಕ್ಷದೊಳಗಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಅಲ್ಲಗಳೆದಿದ್ದಾರೆ. ನಮ್ಮ ಸರ್ಕಾರ ಈಗ ಮೂರು ಪಕ್ಷಗಳಿಂದ ಮಾಡಲ್ಪಟ್ಟಿದೆ, ನಮ್ಮ ಶಾಸಕರ ಬಲ 200 ಕ್ಕಿಂತ ಹೆಚ್ಚಿದೆ. ನಮ್ಮ ಸರ್ಕಾರವು ಬಲಗೊಳ್ಳುತ್ತಿದೆ. ನಮಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಬೆಂಬಲವಿದೆ ಎಂದು ಶಿಂದೆ ಹೇಳಿದ್ದಾರೆ. ಶೀಘ್ರವೇ ಸಚಿವ ಸಂಪುಟ ವಿಸ್ತರಣೆಯಾಗಬಹುದು ಎಂದು ಹೇಳಲಾಗುತ್ತಿದೆ.