ಹೆಚ್‌ಡಿಕೆಯ ವರ್ಗಾವಣೆ ಬಾಂಬ್‌ಗೆ ‘ದ್ವೇಷ’ದ ಪಂಚ್ ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು: ಹಾಲಿ ಸಿಎಂ ವರ್ಸಸ್ ಮಾಜಿ ಸಿಎಂಗಳ ಕದನ ತಾರಕ್ಕೇರಿದೆ. ಹೆಚ್‌ಡಿ ಕುಮಾರಸ್ವಾಮಿ ಬಂಚ್ ಬಾಂಬ್‌ಗಳಿಗೆ ಸಿದ್ದರಾಮಯ್ಯಸನ್ ಸ್ಟ್ರೋಕ್ ಕೊಡುವ ಆಟಕ್ಕಿಳಿದಿದ್ದಾರೆ. ಈ ಗಲಾಟೆ ನಡುವೆ ಬಿಜೆಪಿ ಯತೀಂದ್ರ ಸಿದ್ದರಾಮಯ್ಯಗೆ ಶ್ಯಾಡೋ ಸಿಎಂ ಪಟ್ಟ ಕಟ್ಟಿದೆ. ಹಾಗಾದ್ರೆ `ಛಾಯಾ’ಚಿತ್ರಕಥೆ ರಾಜಕೀಯದ ಅಸಲಿಯತ್ತು ಏನು? ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಅದ್ಯಾಕೋ ಏನೋ 2013-18ರ ಅವಧಿಯ ರಾಜಕೀಯ ಮೇಲಾಟ ಮರುಕಳಿಸುವ ಸಾಧ್ಯತೆ ದಟ್ಟವಾಗಿದೆ. ಹುಬ್ಲೋಟ್ ವಾಚ್ ಪ್ರಕರಣದಲ್ಲಿ ಹೆಚ್‌ಡಿಕೆ ವರ್ಸಸ್ ಸಿದ್ದರಾಮಯ್ಯ ನಡುವೆ ನಡೆದ ಜಂಗೀಕುಸ್ತಿ ಈಗಲೂ ನಡೆಯುಬಹುದಾ ಎಂಬ ಕುತೂಹಲ ಮನೆ ಮಾಡಿದೆ. ಸಿಎಂ ಕಚೇರಿ ಲಂಚದ ಆರೋಪ, ವೈಎಸ್‌ಟಿ ಟ್ಯಾಕ್ಸ್ ಆರೋಪ, ಲಂಚದ ಆಡಿಯೋ ಪೆನ್ ಡ್ರೈವ್ ಪ್ರದರ್ಶನ ಸೇರಿ ಹೆಚ್‌ಡಿಕೆ ದಿನಕ್ಕೊಂದು ಪೊಲಿಟಿಕಲ್ ಬಾಂಬ್ ಹಾಕುತ್ತಿದ್ದಾರೆ. ಸಹಜವಾಗಿಯೇ ಹೆಚ್‌ಡಿಕೆ ಆರೋಪ ಸರ್ಕಾರ ಮಟ್ಟದಲ್ಲೂ ಬಿಸಿಬಿಸಿ ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ಇವತ್ತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಸೋಲಿನ ಹತಾಶೆ, ದ್ವೇಷದಿಂದ ಆರೋಪ ಮಾಡ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇದನ್ನೇ ಮಾಡಿದ್ರಾ ಅಂತಾ ಕೇಳಬಹುದಾ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಹೇಳಿಕೆಗೆ ಹೆಚ್‌ಡಿಕೆ ಇನ್ನಷ್ಟು ಕೆಂಡಕಾರಿದ್ದಾರೆ. ಅವರು ಮನೆಯಲ್ಲೇ ಮಲಗಿದ್ರೆ ಹೀಗೆ. ಹೊರಗೆ ಓಡಾಡಿದ್ರೆ ಇನ್ನೆಷ್ಟಿರಬೇಡ ಅಂತಾ ಟಾಂಗ್ ಕೊಟ್ಟಿದ್ದಾರೆ. ನನ್ನ ಬಳಿ ಇರುವ ಪೆನ್ ಡ್ರೈವ್ ಖಾಲಿ ಅಲ್ಲ, ಓರಿಜಿನಲ್. ಬಿಡುಗಡೆ ಮಾಡಿಯೇ ಮಾಡುತ್ತೇನೆ. ಸ್ವಲ್ಪ ದಿನ ಕಾಯಬೇಕು ಅಂತಾ ಕುತೂಹಲ ಹುಟ್ಟುಹಾಕಿದ್ದಾರೆ.

ಈ ನಡುವೆ ಹೆಚ್‌ಡಿಕೆ, ಸಿದ್ದು ಕದನಕ್ಕೆ ಮತ್ತಷ್ಟು ತುಪ್ಪ ಸುರಿಯುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದಂತೆ ಕಾಣುತ್ತಿದೆ. ಯತೀಂದ್ರ ಸಿದ್ದರಾಮಯ್ಯಗೆ ಶ್ಯಾಡೋ ಸಿಎಂ ಪಟ್ಟ ಕಟ್ಟಲು ಯತ್ನಿಸಿದ್ದು, ಅಧಿಕೃತ ಅಕೌಂಟ್ ನಿಂದ ಟ್ವೀಟ್ ಮಾಡಿದೆ. ಸಿದ್ದರಾಮಯ್ಯ ಹಿಂದೆ ಯತೀಂದ್ರ ಫೋಟೋ ಹಾಕಿ ಶ್ಯಾಡೋ ಸಿಎಂ ಪೋಸ್ಟರ್ ಪೋಸ್ಟ್ ಮಾಡಿದೆ. ಒಟ್ಟಿನಲ್ಲಿ ಸರ್ಕಾರಕ್ಕೆ 50 ದಿನ ತುಂಬವ ಮೊದಲೇ ಸಿಎಂ ಸುತ್ತ ಆರೋಪಗಳ ಮಳೆ ಸುರಿಸಿದ್ದು, ಮುಂದಿನ ದಿನಗಳಲ್ಲಿ ಯಾರು ಯಾರ ಮೇಲೆ ಅಸ್ತ್ರ ಪ್ರಯೋಗ ಮಾಡಿ ಯಶಸ್ವಿ ಆಗ್ತಾರೋ ಕಾದುನೋಡಬೇಕಿದೆ.