ಅಧಿಕಾರಿಗಳ ನಿಷ್ಕಾಳಜಿ: ಡ್ಯಾಮ್ ಕಟ್ಟಿ ದಶಕಗಳೇ ಕಳೆದರೂ ರೈತರಿಗೆ ನೀರಿಲ್ಲ -ಒಂದು ದಂಡೆಗೆ ಬೆಣ್ಣೆ, ಮತ್ತೊಂದು ದಂಡೆಗೆ ಸುಣ್ಣ!

ಅಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ವರ್ಷದ ಹಿಂದೆ ಕಾಲುವೆ ನವೀಕರಣ ಮಾಡಲಾಗಿದೆ. ಕಾಲುವೆ ರೀಪೇರಿ ಮಾಡಿದ್ದರ ಪರಿಣಾಮವಾಗಿ ಬಲದಂಡೆ ಕಾಲುವೆಗೆ ಭರಪೂರ ನೀರು ಹರಿಯುತ್ತಿದೆ. ಆದರೆ ಎಡದಂಡೆ ಕಾಲುವೆಗೆ ಮಾತ್ರ ಈವರೆಗೂ ನೀರು ಹರಿಯುತ್ತಿಲ್ಲ. ಕಾಲುವೆ ದುರಸ್ಥಿಯಾಗಿದ್ದು ನಮ್ಮ ಹೊಲಕ್ಕೆ ನೀರು ಬರುತ್ತದೆಂದುಕೊಂಡಿದ್ದ ರೈತರು ಶಾಕ್ ಗೊಳಗಾಗಿದ್ದಾರೆ. ಕಾರಂಜಾ ಡ್ಯಾಮ್ನ ಬಲದಂಡೆ ಕಾಲುವೆಗೆ ಹರಿಯುತ್ತಿದೆ ನೀರು. ಬಲದಂಡೆ ಕಾಲುವೆ ರೈತರ ಮೊಗದಲ್ಲಿ ಮೂಡಿದೆ ನಗು. ಆದರೆ ಎಡದಂಡೆ ಕಾಲುವೆಗೆ ಹರಿಯದ ನೀರು,ರೈತರ ನಿರಾವರಿ ಕನಸು ನುಚ್ಚುನೂರು. ಅರ್ಧಂಬರ್ಧ ಕಾಲುವೆ ದುರಸ್ಥಿ ಮಾಡಿ ಪಲಾಯನ ಮಾಡಿದ ಗುತ್ತಿಗೆದಾರ ಹೀಗಾಗಿ ಕಾಲುವೆಗೆ ಹರಿಯದ ನೀರು… ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಕಾಲುವೆ ದುರಸ್ಥಿ‌ಮಾಡಿದರೂ ಕಾಲುವೆಗೆ ಹರಿಯದ ನೀರು… ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ…

ಹೌದು ಇದು ಕಾರಂಜಾ ಡ್ಯಾಂ – ಬೀದರ್ ಜಿಲ್ಲೆಯ ಜನರು ಮತ್ತು ರೈತರ ಜೀವನಾಡಿ. ಜಿಲ್ಲೆಯ ಏಕೈಕ ಡ್ಯಾಮ್ ಇದಾಗಿದ್ದು 7.691 ಟಿಎಂಸಿ ಸಾಮರ್ಥ್ಯದ ಡ್ಯಾಂ ಇದಾಗಿದೆ. ನಾಲ್ಕು ದಶಕದ ಹಿಂದೆ ರೈತರ ಜಮೀನಿಗೆ ನೀರು, ಸಾರ್ವಜನಿಕರಿಗೆ ಕುಡಿಯುವ ನೀರು ಕೊಡುವ ಉದ್ದೇಶದಿಂದ ಈ ಡ್ಯಾಂ ನಿರ್ಮಿಸಲಾಗಿದೆ. ಜಲಾಶಯ ನಿರ್ಮಾಣವಾದಾಗಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಮಾತ್ರ ಪೂರೈಕೆಯಾಗುತ್ತಿದ್ದು, ರೈತರ ಜಮೀನಿಗೆ ಮಾತ್ರ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ.

ರೈತರ ಜಮಿನಿಗೆ ನೀರು ಯಾಕೆ ಬಿಡುತ್ತಿಲ್ಲ ಎಂದು ರೈತರು ಅಧಿಕಾರಿಗಳನ್ನ ಕೇಳಿದರೆ ಕಾಲುವೇ ಸರಿಯಾಗಿಲ್ಲ. ದುರಸ್ಥಿಯಾದ ನಂತರ ಕಾಲುವೆಗೆ ನೀರು ಹರಿಸುತ್ತೇವೆಂದು ಅಧಿಕಾರಿಗಳು ಸಬೂಬು ಹೇಳುತ್ತಲೆ ಬಂದಿದ್ದರು. ಆದರೆ ಕಳೆದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾಲುವೆ ದುರಸ್ಥಿಗಾಗಿ 480 ಕೋಟಿ ರೂಪಾಯಿ ಬಿಡುಗಡೆ ಮಾಡಿ ಕಾಲುವೆ ದುರಸ್ಥಿ ಮಾಡಲಾಗಿದೆ. ಕಾಲುವೆ ರಿಪೇರಿ ಮಾಡಿದ್ದರ ಪರಿಣಾಮವಾಗಿ ಕಾರಂಜಾ ಡ್ಯಾಮ್ ಬಲದಂಡೆ ಕಾಲುವೆಗೆ ನೀರು ಹರಿಯುತ್ತಿದ್ದು, ಆ ಭಾಗದ ರೈತರು ನೀರಾವರಿ ಮಾಡಿಕೊಂಡು ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಎಡದಂಡೆ ಕಾಲುವೆಗೆ ನೀರು ಮಾತ್ರ ಬರುತ್ತಿಲ್ಲ. ಇದರಿಂದಾಗಿ ಎಡದಂಡೆ ಕಾಲುವೆಯ ನೂರಾರು ಎಕರೆಯಷ್ಟು ಜಮೀನು ನೀರಾವರಿ ಇಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದು ಕಾಲುವೆಗೆ ನೀರು ಬಾರದಿರುವುದು ಸಹಜವಾಗಿಯೇ ಇಲ್ಲಿನ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.

ಇನ್ನು ಕಾರಂಜಾ ಡ್ಯಾಂ ನ ಬಲದಂಡೆ ಕಾಲುವೆ 131 ಕಿಲೋ ಮೀಟರ್, ಎಡದಂಡೆ ಕಾಲುವೆ 91 ಕಿಲೋಮೀಟರ್ ವರೆಗೆ ರೈತರ ಹೊಲದಲ್ಲಿ ಕಾಲುವೆ ಹರಿದು ಹೋಗಿದೆ. ಇದರ ಜೊತೆಗೆ ರೈತರ ಹೊಲದಲ್ಲಿ ಚಿಕ್ಕಚಿಕ್ಕ ಕಾಲುವೆ ಮಾಡಿದ್ದರಿಂದ ರೈತರು ಆ ನೀರನ್ನ ಬಳಸಿಕೊಂಡು ನೀರಾವರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಎಡದಂಡೆಯ ಕಾಲುವೆ ದುರಸ್ಥಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಎಲ್ಲಾ ಕಾಮಗಾರಿ ಪೂರ್ಣಗೊಂಡಿದೆ ಎಂದು ಗುತ್ತಿಗೆದಾರನು ನೀರಾವರಿ ಇಲಾಖೆಗೆ ಹೇಳಿ ಹೋಗಿದ್ದಾನೆ.

ಆದರೆ ಈವರೆಗೂ ಕೂಡಾ ಎಡದಂಡೆ ಕಾಲುವೆಗಾಗಿ ಅಲ್ಲಲ್ಲಿ ಕಾಲುವೆಯನ್ನು ಮಾಡದೆ ಹಾಗೆಯೇ ಬಿಟ್ಟು ಹೋಗಿದ್ದಾನೆ. ಇಂತಹ ಕಾಲುವೆಗೆ ನೀರು ಹರಿಸಿದರೆ ಆ ನೀರು ಅಲ್ಲಲ್ಲಿ ಸೋರಿಕೆಯಾಗಿ ರೈತರ ಹೊಲಕ್ಕೆ ಹೋಗುತ್ತಿಲ್ಲ. ಇನ್ನು ರೈತರ ಹೊಲದಲ್ಲಿ ಚಿಕ್ಕಚಿಕ್ಕ ಕಾಲುವೆಯನ್ನ ಮಾಡಿದ್ದರೂ ಅದರಲ್ಲಿ ನೀರು ಹೋಗಲು ಒಂದಕ್ಕೊಂದು ಲಿಂಕ್ ಕೊಟ್ಟಿಲ್ಲ. ಇದರಿಂದಾಗಿ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೆ ಎಡದಂಡೆ ಕಾಲುವೆಯ ರೈತರಿಗೆ ನೀರಾವರಿ ಸೌಲಭ್ಯ ಮಾತ್ರ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕಳೆದ ಮೂರು ವರ್ಷದಿಂದ ಡ್ಯಾಮ್ ನಲ್ಲಿ ನೀರು ಸಹ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಆದರೆ ಎಡದಂಡೆ ಕಾಲುವೆಯ ರೈತರಿಗೆ ಮಾತ್ರ ಇದರ ಪ್ರಯೋಜನ ಸಿಗುತ್ತಿಲ್ಲ. ನಮ್ಮ ಜಮೀನಿಗೆ ಇಂದು ನೀರು ಬರಬಹುದು, ನಾಳೆಯಾದರೂ ಬರಬಹುದೆಂದು ಚಾತಕಪಕ್ಷಿಯಂತೆ ಇಲ್ಲಿನ ರೈತರು ಕಾಯುತ್ತಾ ಕುಳಿತ್ತಿದ್ದಾರೆ. ಆದರೆ ನೀರು ಮಾತ್ರ ರೈತರ ಜಮೀನಿಗೆ ಬರುತ್ತಿಲ್ಲ!

ಕೊಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ನೂರಾರು ಕಿಲೋ ಮೀಟರ್ ಗಟ್ಟಲೇ ಕಾಲುವೆ ದುರಸ್ಥಿ ಮಾಡಿದರೂ ರೈತರಿಗೆ ಮಾತ್ರ ಅದರ ಪ್ರಯೋಜನವಾಗುತ್ತಿಲ್ಲ. ಜೊತೆಗೆ ಹಾಳಾದ ಕಾಲುವೆಗಳನ್ನ ರಿಪೇರಿ ಮಾಡುತ್ತೇವೆಂದು ರಿಪೇರಿಗಾಗಿಯೇ ಅಧಿಕಾರಿಗಳು ಪ್ರತಿವರ್ಷ ಕೊಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆದ್ರೆ ನೀರು ಮಾತ್ರ ಹರಿಸಲು ಮುಂದಾಗುತ್ತಿಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೈತರಿಗೆ ಅನಕೂಲವಾಗಲಿ ಅಂತ ಸರ್ಕಾರ ಡ್ಯಾಮಗಳನ್ನು ನಿರ್ಮಾಣ ಮಾಡಿದೆ. ಆದ್ರೆ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಡ್ಯಾಮ್ ನಿರ್ಮಾಣವಾಗಿ ದಶಕಗಳೇ ಕಳೆದರೂ ರೈತರ ಜಮೀನಿಗೆ ನೀರು ಹರಿಯದಿರುವುದು ದುರಂತವೆ ಸರಿ. ಇನ್ನಾದರೂ ರಾಜ್ಯದ ಜಲಂಸಪನ್ಮೂಲ ಸಚಿವರು ಇತ್ತಕಡೆ ಗಮನಹರಿಸುವರೇ? ರೈತರ ಜಮೀನಿಗೆ ಇನ್ನಾದರೂ ಸರಿಯಾಗಿ ನೀರು ಹರಿಸಲು ಅಧಿಕಾರಿಗಳಿಗೆ ಕಟ್ಟಪ್ಪಣೆಯನ್ನು ಮಾಡುವರೆ ಎನ್ನುವುದನ್ನು ಕಾದುನೋಡಬೇಕಿದೆ.