ರಾಯಚೂರು: ಕುಡಿಯುವ ನೀರಿನ ಟ್ಯಾಂಕ್​ನಲ್ಲಿ ಬಿದ್ದು ಸತ್ತ ಮಂಗಗಳು: 3 ದಿನದಿಂದ ಅದೇ ನೀರು ಸೇವಿಸಿದ ಗ್ರಾಮಸ್ಥರು ಅಸ್ವಸ್ಥ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಖಾನಾಪೂರದಲ್ಲಿ ಕುಡಿಯುವ ನೀರಿನ ಟ್ಯಾಂಕ್​ನಲ್ಲಿ ಮಂಗಗಳು ಬಿದ್ದು ಸಾವನ್ನಪ್ಪಿದ್ದು, ಅದೇ ನೀರನ್ನು ಕುಡಿದು ಗ್ರಾಮದ ಕೆಲವರು ಅಸ್ವಸ್ಥರಾದ ಘಟನೆ ನಡಿದಿದೆ. ಇನ್ನು ಮಂಗಗಳು ಸತ್ತು ಬಿದ್ದ ಟ್ಯಾಂಕ್​ನಿಂದಲೇ ಇಡೀ ಊರಿಗೆ ನೀರು ಸರಬರಾಜು ಆಗುತ್ತಿತ್ತು. ತೆರೆದ ವಾಟರ್ ಟ್ಯಾಂಕ್​ ಆದ್ದರಿಂದ ಮಂಗಗಳು ನೀರು ಕುಡಿಯಲು ಹೋಗಿ ಬಿದ್ದಿದ್ದಾವೆ. ನಂತರ ಮೇಲೆ ಬರಲಾಗದೇ ಅದೇ ನೀರಲ್ಲೇ ಎರಡು ಮಂಗಗಳು ಮುಳುಗಿ ಸಾವನ್ನಪ್ಪಿದ್ದಾವೆ.

ಮೂರು ದಿನದಿಂದ ಮಂಗಗಳು ಸತ್ತ ನೀರನ್ನ ಕುಡಿದ ಗ್ರಾಮಸ್ಥರು

ಮಂಗಗಳು ಸತ್ತು ಮೂರು ದಿನಗಳ ಕಾಲ ಇದೇ ನೀರನ್ನು ಗ್ರಾಮಸ್ಥರು ಸೇವಿಸಿದ್ದು, ಅವರಲ್ಲಿ ಕೆಲವರು ಅಸ್ವಸ್ಥರಾಗಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನೀರಿನ ಟ್ಯಾಂಕ್ ಮುಚ್ಚಲು ಯಾವುದೇ ಕ್ರಮವಹಿಸದ ಯಮನಾಳ ಗ್ರಾಮ ಪಂಚಾಯತಿ ಪಿಡಿಓ ಸೇರಿದಂತೆ ಸಿಬ್ಬಂದಿಗಳ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಯಿ ಬಾಬಾ ಮಂದಿರದಲ್ಲಿ ಕಳ್ಳತನ

ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದ ಸಾಯಿಬಾಬಾ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಬೀಗ ಮುರಿದು ಕಾಣಿಕೆ ಹುಂಡಿ, ತಿಜೋರಿ ಒಡೆದ ಖದೀಮರು, ಕಾಣಿಕೆ ಹುಂಡಿ ಹಾಗೂ ತಿಜೋರಿಯಲ್ಲಿದ್ದ ಹಣದೊಂದಿಗೆ‌ ಪರಾರಿಯಾಗಿದ್ದಾರೆ. ಇನ್ನು ಇದು ಎರಡನೇ ಬಾರಿ ಸಾಯಿ ಬಾಬಾ ಮಂದಿರದಲ್ಲಿ ಕಳ್ಳತನವಾಗುತ್ತಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.