ದೇವಸ್ಥಾನಗಳು ಸಮಾಜದ ಆಸ್ತಿ: ಸಚಿವ ಮಂಕಾಳು ವೈದ್ಯ

ಹೊನ್ನಾವರ (ಜು.2) :  ರಾಜಕಾರಣಕ್ಕಾಗಿ ದೇವಸ್ಥಾನ ಇರಬಾರದು. ಭಕ್ತಿಗಾಗಿ ಇರಬೇಕು. ದೇವಸ್ಥಾನ ಕಟ್ಟಲು ಎಲ್ಲರೂ ಸಹಾಯ ಮಾಡಬೇಕು. ದೇವಸ್ಥಾನ ಸಮಾಜದ ಆಸ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್‌. ವೈದ್ಯ ಹೇಳಿದರು.

ಶೃಂಗೇರಿಯ ಶ್ರೀಗಳ ಶುಭಾಶೀರ್ವಾದದೊಂದಿಗೆ ನಿರ್ಮಾಣವಾಗುತ್ತಿರುವ ಪಟ್ಟಣದ 140 ವರ್ಷಗಳ ಪುರಾತನವಾದ ಶಾರದಾಂಬಾ ದೇವಿ ಮತ್ತು ಚಂದ್ರಮೌಳೇಶ್ವರ ಶಿಲಾಮಯ ದೇವಸ್ಥಾನದ ಮುಖ್ಯದ್ವಾರ ರಾಜಗೋಪುರದ ಭೂಮಿ ಪೂಜಾ ಕಾರ್ಯವನ್ನು ನೆರವೇರಿಸಿ ಶನಿವಾರ ಮಾತನಾಡಿದರು.

ಸಣ್ಣಪುಟ್ಟಸಮಾಜಗಳು ಅಭಿವೃದ್ದಿ ಹೊಂದುತ್ತಿವೆ. ದೇವಸ್ಥಾನ ಹಾಗೂ ಶಾಲೆ ಎರಡು ಅಭಿವೃದ್ದಿ ಆದಲ್ಲಿ ಮಾತ್ರ ಆ ಸಮಾಜ ಆ ಊರು ಅಭಿವೃದ್ದಿಯಾಗಲಿದೆ. ಕ್ಷೇತ್ರದವರು ಶಾಸಕರನ್ನಾಗಿ ಮಾಡಿದಕ್ಕೆ ರಾಜ್ಯಕ್ಕೆ ಮಂತ್ರಿಯಾಗಲೂ ಸಾಧ್ಯವಾಯಿತು. ಈ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡಲ್ಲ. ನನಗೆ ದೇವರು ಅವಕಾಶ ಕೊಟ್ಟಿದ್ದಾನೆ. ದೇವರಿಗಾಗಿ ಆ ಅವಕಾಶವನ್ನ ತ್ಯಾಗ ಮಾಡಬೇಕೆಂದು ನಾನು ನಿರ್ಧಾರ ಮಾಡಿದ್ದೇನೆ. ಸರ್ಕಾರದಿಂದ ಎಷ್ಟುಸಾಧ್ಯವೊ ಅಷ್ಟುಅನುದಾನ ತರುತ್ತೇನೆ. ನಾನು ವೈಯಕ್ತಿಕವಾಗಿ .5 ಲಕ್ಷ ನೀಡುತ್ತೇನೆ. ಆದಷ್ಟುಬೇಗ ರಾಜಗೋಪುರದ ಕಾಮಗಾರಿ ಪೂರ್ಣಗೊಳ್ಳಬೇಕು ಎಂದರು.

ಈ ಸಮಾಜದ ಸ್ವಲ್ಪ ಜನ ಶಿಕ್ಷಣವಂತರಾಗಿದ್ದಾರೆ. ಮುಂದೆ ಎಲ್ಲರೂ ಶಿಕ್ಷಣವಂತರಾಗಲಿ. ಯಾರಾದರೂ ಬಡವರಿದ್ದು, ಓದಲು ಆಸಕ್ತಿ ಇದ್ದು, ಅವಕಾಶ ವಂಚಿತರಾದವರಿದ್ದರೆ ನನ್ನ ಗಮನಕ್ಕೆ ತನ್ನಿ. ಅವರನ್ನು ಡಾಕ್ಟರ್‌, ಎಂಜಿನಿಯರ್‌ ಬೇಕಾದರೂ ಮಾಡ್ತೀನಿ. ನಿಮ್ಮ ಸಮಾಜದೊಂದಿಗೆ ನಾನು ಇದ್ದೀನಿ ಎಂದು ಭರವಸೆ ನೀಡಿದರು.

ತದನಂತರ ಸಚಿವರಿಗೆ ಹೊನ್ನಾವರ ಚಾರೋಡಿ ಮೇಸ್ತ ಸಮಾಜ ಬಾಂಧವರಿಂದ ಸನ್ಮಾನ ನಡೆಯಿತು.

ವೇದಿಕೆಯಲ್ಲಿ ಸಮಾಜದ ಮುಖಡಂರಾದ ಲಕ್ಷಣ ಮೇಸ್ತ, ಅಚ್ಯುತ್‌ ಮೇಸ್ತ, ಪ್ರದೀಪ ಮೇಸ್ತ, ದೇವಪ್ಪ ಮೇಸ್ತ, ನಾಗೇಶ ಮೇಸ್ತ, ಮಂಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೊವಿಂದ ನಾಯ್ಕ, ಆಶಾ ಮೇಸ್ತ , ಶ್ರೇಯಾ ಮೇಸ್ತ, ವಿದ್ಯಾ ಮೇಸ್ತ ಉಪಸ್ಥಿತರಿದ್ದರು. ದೇವಾಲಯದ ಆಡಳಿತ ಮಂಡಳಿಯವರು, ಸಮಾಜದ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.