ಬಾಗಲಕೋಟೆ ತೋವಿವಿ ಘಟಿಕೊತ್ಸವ: ಕೋಲಾರದ ಕಿರಾಣಿ ವ್ಯಾಪಾರಿ ಮಗಳಿಗೆ 16 ಚಿನ್ನದ ಪದಕ

ಬಾಗಲಕೋಟೆ(ಜು.02):  ಕಿರಾಣಿ ವ್ಯಾಪಾರಿಯೊಬ್ಬರ ಪುತ್ರಿ ತೋಟಗಾರಿಕೆ ಅಧ್ಯಯನದಲ್ಲಿ ಕೃಷಿಗೈದು ಬರೋಬ್ಬರಿ 16 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿವಿ 12ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಅಷ್ಟೂ ಚಿನ್ನದ ಪದಕ ಪಡೆದ ಪದವೀಧರೆಯ ಸಂತಸ, ಸಂಭ್ರಕ್ಕೆ ಪಾರವೇ ಇರಲಿಲ್ಲ.

ಈ ಚಿನ್ನದ ಬೆಡಗಿ ಚಿನ್ನದ ಗಣಿ ಖ್ಯಾತಿಯ ಕೋಲಾರ ಜಿಲ್ಲೆಯವರೇ ಆಗಿರುವುದು ಮತ್ತೊಂದು ವಿಶೇಷ. ಕೋಲಾರ ಜಿಲ್ಲೆ ಸುಗಟೂರ ಗ್ರಾಮದ ನಾಗೇಂದ್ರ-ಸವಿತಾ ದಂಪತಿ ಪ್ರಥಮ ಪುತ್ರಿ ಧರಣಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಬೇಟೆಯಾಡಿದ ಸಾಧಕಿ. ಶನಿವಾರ ನಡೆದ ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕಗಳಿಗೆ ಪುರುಸೊತ್ತಿಲ್ಲದಂತೆ ಕೊರಳೊಡ್ಡುವಂತಾಯಿತು. ಧರಣಿಗೆ ರಾಜ್ಯಪಾಲರಿಂದ ಚಿನ್ನದ ಪದಕಗಳ ಸುರಿಮಳೆಯನ್ನೇ ಗೈಯ್ಯಲಾಯಿತು. ಕಿರಾಣಿ ವ್ಯಾಪಾರಿ ಮಗಳಾದ ಧರಣಿಗೆ ರಾಜ್ಯಪಾಲರು ಹಾಗೂ ತೋವಿವಿಯ ಕುಲಾಧಿಪತಿಗಳಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರು 16 ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 10ನೇ ತರಗತಿವರೆಗೆ ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ ತೋಟಗಾರಿಕೆ ಕೃಷಿ ಪದವೀಧರೆ ಧರಣಿ, ಮುನಿರಾಬಾದ್‌ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ (ಹಾನ​ರ್ಸ್‌) ಪದವಿಯ ವಿವಿಧ ವಿಭಾಗಗಳಲ್ಲಿ ಒಟ್ಟು 16 ಚಿನ್ನದ ಪದಕಗಳನ್ನು ಪಡೆದುಕೊಂಡ ಖ್ಯಾತಿಗೆ ಒಳಗಾದರು.

ಬಾಗಲಕೋಟೆ ತೋವಿವಿಯಲ್ಲಿ 2019ರಲ್ಲಿ ನಡೆದ ಅಂತರ್‌ ವಿದ್ಯಾಲಯಗಳ ಪ್ರಬಂಧ ಸ್ಪರ್ಧೆ, 2021ರಲ್ಲಿ ಮೈಸೂರಿನಲ್ಲಿ ನಡೆದ ಅಂತರ್‌ ವಿದ್ಯಾಲಯಗಳ ಯುವ ಪ್ರತಿಭೋತ್ಸವದಲ್ಲಿ ಕೋಲಾಜ್‌ ಮೇಕಿಂಗ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಚತ್ರಕಲೆ, ಕೋಲಾಜ್‌, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಪದವಿಯಲ್ಲಿ ಚಿನ್ನದ ಪದಕ ಬೇಟೆಯಾಡಿದ ಈ ಪದವೀಧರೆ ಮುಂದೆ ಯುಪಿಎಸ್‌ಸಿ ಪರೀಕ್ಷೆ ಹಾಗೂ ಸಿವಿಲ್‌ನಲ್ಲಿ ಸಾಧನೆಗೈಯ್ಯುವ ಒತ್ತಾಸೆಯಿದೆ ಎಂದು ಮಾಧ್ಯಮದವರೊಂದಿಗೆ ಅನಿಸಿಕೆ ಹಂಚಿಕೊಂಡರು.