ಮದುವೆ ವಿಚಾರ ಮುಚ್ಚಿಟ್ಟಿದ್ದಕ್ಕೆ ಎರಡು ಜೀವ ಬಲಿ! ಯುವತಿ ಆತ್ಮಹತ್ಯೆ ಮಾಡಿಕೊಳ್ತಿದ್ದಂತೆ, ನೇಣಿಗೆ ಶರಣಾದ ವಿವಾಹಿತ ವ್ಯಕ್ತಿ: ಆತನ ಪತ್ನಿ ಇನ್ನು ಒಂಟಿ

ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದವರು ಎಂದಿನಂತೆ ಮೊನ್ನೆ ಗುರುವಾರ ಸಹ ಕೆಲಸ ಮುಗಿಸಿ ಹೊರಟವರು ಮನೆಯಿಂದ ವಾಪಸ್ ಹೊರಗಡೆ ಬಂದಿರಲಿಲ್ಲ. ಹೀಗಾಗೆ ಸ್ನೇಹಿತರು ಯುವತಿಯ ಮನೆ ಕದ ತಟ್ಟಿ ಎಬ್ಬಿಸೂ ಯತ್ನ ಮಾಡಿದ್ರು, ಆದ್ರೆ ಅಷ್ಟರಲ್ಲೆ ಕಿಟಕಿಯಲ್ಲಿ ಯುವತಿಯ ಮೃತದೇಹ ಕಂಡು ಬಂದಿದ್ದು ಯುವಕನನ್ನ ಹುಡುಕಿ ಹೋದವರಿಗೂ ಶಾಕ್​ ಆಗಿದೆ. ಅವೆರಡೂ ಪ್ರತ್ಯೇಕ ಊರುಗಳು, ಅವು ಸಂಬಂಧವಿಲ್ಲದ ಎರಡು ಪ್ರತ್ಯೇಕ ಕಟ್ಟಡಗಳು. ಆದ್ರೆ ಅಲ್ಲಿ ಆಗಿರೂದು ಒಂದೇ ರೀತಿಯ ಘಟನೆ! ಆಲ್ಲಿ ನಡೆದಿರೂದು ಒಂದೇ ರೀತಿಯ ಆತ್ಮಹತ್ಯೆ. ಒಂದೇ ದಿನ ಹೀಗೆ ಎರೆಡೆರಡು ಕಡೆ ನಡೆದಿವೆ. ಅವೆರಡೂ ಪ್ರತ್ಯೇಕ ಪ್ರಕರಣಗಳಾದ್ರು ಘಟನೆಗೆ ಕಾರಣವಾಗಿದ್ದು ಮಾತ್ರ ಒಂದೇ ಲವ್ (love) ಮತ್ತು ಇಬ್ಬರ ನಡುವಿನ ವೈಮನಸ್ಸು! ಹೌದು ಅಂದಹಾಗೆ ಇಲ್ಲಿ ಪ್ರತ್ಯೇಕವಾಗಿ ಆತ್ಮಹತ್ಯೆಗೆ ಶರಣಾಗಿರುವ ಇವರ ಹೆಸರು ಪವಿತ್ರ ಮತ್ತು ಗುರುಪ್ರಸಾದ್. ವಯಸಲ್ಲಿ ಚಿಕ್ಕವರಾದ್ರು ಇಷ್ಟು ಬೇಗ ಇಂತಹ ನಿರ್ಧಾರಕ್ಕೆ ಬಂದಿದ್ದು ಯಾಕೆ ಅಂತ ನೋಡುತ್ತಾ ಹೋದ್ರೆ ಸಿಗೂದು ಪ್ರೀತಿ ಅನ್ನೂ ಕಾರಣ!

ಹೌದು ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ ಕೋಲಾರ ಮೂಲದ ಪವಿತ್ರಾ ಅನ್ನೂ ಈ ಯುವತಿ ಇಲ್ಲೆ ಜುವಾರಿ ಜೈ ಕಿಸಾನ್ ಫಾರ್ಮಸಿ ಫರ್ಟಿಲೈಸರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ಲು. ಪ್ರತಿನಿತ್ಯ ತಾನಾಯಿತು ತನ್ನ ಕೆಲಸವಾಯಿತು ಅಂತಿದ್ದ ಈಕೆಗೆ ಇದೇ ಕಂಪನಿಯಲ್ಲಿ ಡೆಪ್ಯುಟಿ ಮ್ಯಾನೇಜರ್​ ಆಗಿ ಕೆಲಸ ಮಾಡ್ತಿದ್ದ ಗುರುಪ್ರಸಾದ್ ಅನ್ನೂ ಈತನ ಜೊತೆ ಸ್ನೇಹವಾಗಿದ್ದು ಸ್ನೇಹ ಪ್ರೀತಿಗೆ ಸಹ ತಿರುಗಿತ್ತು ಎನ್ನಲಾಗಿದೆ.

ಅಲ್ಲದೆ ಇದೇ ಸಲುಗೆಯಲ್ಲೆ ಇಬ್ಬರೂ ಸಹ ಎಲ್ಲರಂತೆ ಕಾಲ್ ಮತ್ತು ಮೆಸೆಜ್ಗಳನ್ನ ಮಾಡಿಕೊಂಡಿದ್ದು 6 ತಿಂಗಳಿಂದ ವಿಜಯಪುರ ಪಟ್ಟಣದಲ್ಲೆ ಪವಿತ್ರಾ ವಾಸವಾಗಿದ್ಲು. ಆದ್ರೆ ಈ ನಡುವೆ ಗುರುಪ್ರಸಾದ್ ಗೆ ಈಗಾಗಲೆ ಮದುವೆಯಾಗಿದ್ದರೂ ಮದುವೆಯಾದ ವಿಚಾರ ಬಚ್ಚಿಟ್ಟು ಪವಿತ್ರಾ ಜೊತೆ ಚಾಟಿಂಗ್ ಮಾಡುತ್ತಾ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ.

ಇನ್ನೂ ಗುರುಪ್ರಸಾದ್ ಮದುವೆಯಾದ ವಿಚಾರ ತಿಳಿಯುತ್ತಿದ್ದಂತೆ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗ್ತಿದೆ. ಅದೇ ವಿಚಾರವಾಗಿ ನಡೆದ ಗಲಾಟೆಯಿಂದ ಪವಿತ್ರ ಮನ ನೊಂದಿದ್ದು ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ಪ್ರೀತಿ ಪ್ರೇಮ ಅಂತ ಮೋಸ ಮಾಡಿದ್ದಾನೆ ಅಂತ ಮನನೊಂದು ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನು ಬೆಳಗ್ಗೆ ಪವಿತ್ರಾ ಕಾಲ್ ರಿಸೀವ್ ಮಾಡದ ಕಾರಣ ಸ್ನೇಹಿತರು ಮನೆ ಬಳಿ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ವಿಚಾರ ಗೊತ್ತಾಗ್ತಿದ್ದಂತೆ ವಿಜಯಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಂದಿದ್ದು, ಪ್ರಿಯಕರನನ್ನ ಹುಡುಕಿ ಹೊರಟವರಿಗೆ ಮತ್ತೊಂದು ಶಾಕ್ ಆಗಿದೆ.

ಯುವತಿ ಪವಿತ್ರ ಆತ್ಮಹತ್ಯೆ ಮಾಡಿಕೊಳ್ತಿದ್ದಂತೆ ಗುರುಪ್ರಸಾದ್ (38) ನನ್ನ ಹುಡುಕಿ ಪೊಲೀಸರು ದೊಡ್ಡಬಳ್ಳಾಪುರದತ್ತ ಹೊರಟು ಗುರುಪ್ರಸಾದ್ ಮನೆ ಬಳಿಗೆ ಬಂದಿದ್ದಾರೆ, ಈ ವೇಳೆ ಮನೆಯಲ್ಲಿ ಗುರುಪ್ರಸಾದ್ ಸಹ ಯುವತಿ ಪವಿತ್ರ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಯುತ್ತಿದ್ದಂತೆ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಮನೆ ಬಳಿಗೆ ಬಂದ ಪೊಲೀಸರು ಬಾಗಿಲು ಮುರಿದು ಒಳ ಹೋಗಿದ್ದು ಗುರು ಪ್ರಸಾದ್ ಮೃತದೇಹವನ್ನ ಶವಾಗಾರಕ್ಕೆ ರವಾನಿಸಿ ಶವಪರೀಕ್ಷೆ ನಡೆಸಿದ್ದಾರೆ. ಮೃತ ಗುರುಪ್ರಸಾದ್ ಮತ್ತು ಮೃತ ಪವಿತ್ರಾ ಇಬ್ಬರು ಸಹ ಕೋಲಾರ ಮೂಲದವರು. ಪಂಜಾಬ್ ನಲ್ಲಿ ಬಿಎಸ್ಸಿ ಅಗ್ರಿಕಲ್ವರ್ ಪದವಿ ಪಡೆದಿದ್ದ ಪವಿತ್ರಾಗೆ ಗುರು ತಾನೆ ಉದ್ಯೋಗ ಕೊಡಿಸಿ ನಂತರ ಸಲುಗೆಯಿಂದ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ವಿಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

ಒಟ್ಟಾರೆ ಮದುವೆಯಾಗಿದ್ದ ವಿಚಾರ ಬಚ್ಚಿಟ್ಟು ಪ್ರೀತಿಯ ಬಲೆಗೆ ಬೀಳಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆಗೆ ಶರಣಾದ್ರೆ, ಮೋಸ ಮಾಡಿದ ತಪ್ಪಿಗೆ ವಿವಾಹಿತ ಸಹ ಪರಲೋಕ ಸೇರಿದ್ದಾನೆ. ಈ ನಡುವೆ ಸಾಕಿ ಬೆಳೆಸಿ ಉನ್ನತ ವ್ಯಾಸಾಂಗ ಕೊಡಿಸಿದ್ದ ಯುವತಿಯ ಪೋಷಕರು ಮತ್ತು ಕಟ್ಟಿಕೊಂಡವನನ್ನೆ ನಂಬಿಕೊಂಡು ಬಂದಿದ್ದ ಪತ್ನಿ, ಈಗ ಪತಿಯಿಲ್ಲದೆ ಒಂಟಿಯಾಗಿದ್ದು ನಿಜಕ್ಕೂ ದುರಂತ.