ಪೊಲೀಸ್ ಠಾಣೆಯಿಂದ ಲಾರಿ ಚಾಲಕ ನಾಪತ್ತೆ ಪ್ರಕರಣ; ಸ್ಮಶಾನದ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಚಿತ್ರದುರ್ಗ: ಹೊಳಲ್ಕೆರೆ ಪೊಲೀಸ್ ಠಾಣೆ ಬಳಿಯಿಂದ ನಾಪತ್ತೆಯಾಗಿದ್ದ ಲಾರಿ ಚಾಲಕ ಬಸವಂತಕುಮಾರ್(37) ಸ್ಮಶಾನದ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಬಸವಂತಕುಮಾರ್ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ನಿವಾಸಿಯಾಗಿದ್ದು, ಜೂ.5ರಂದು ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಇತನ ಲಾರಿಯನ್ನ ಹೊಳಲ್ಕೆರೆ ಪೊಲೀಸರು ಜಪ್ತಿ ಮಾಡಿ ಠಾಣೆಗೆ ತಂದಿದ್ದರು. ಬಳಿಕ ದಂಡ ಕಟ್ಟಲು ಹಣವಿಲ್ಲದೆ ರಾತ್ರಿ ಲಾರಿಯಲ್ಲೇ ಮಲಗಿದ್ದ. ಇದಾದ ಮಾರನೇ ದಿನ ಬಸವಂತಕುಮಾರ್ ನಾಪತ್ತೆಯಾಗಿದ್ದ. ಈ ಬಗ್ಗೆ ಕುಟುಂಬಸ್ಥರು ಹೊಳಲ್ಕೆರೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜೂನ್ 5 ರಂದು ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಲಾರಿಯನ್ನ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಂಚಾರಿ ಠಾಣೆ ಪೊಲೀಸರು ಜಪ್ತಿ ಮಾಡಿದ್ದರು. ಹಣವಿಲ್ಲದ ಕಾರಣ ರಾತ್ರಿ ಲಾರಿಯಲ್ಲೇ ಮಲಗಿಕೊಂಡಿದ್ದ ಆತ. ಮುಂಜಾನೆ ಠಾಣೆ ಒಳಗಡೆ ಬಂದು, ಬಳಿಕ ನಾಪತ್ತೆಯಾಗಿದ್ದ. ಈ ಕುರಿತು ಆತನ ಸಂಬಂಧಿಕರು ಬಸವಂತಕುಮಾರ್ ಪತ್ತೆಗೆ ಆಗ್ರಹಿಸಿ ಹೊಳಲ್ಕೆರೆ ಠಾಣೆ ಪೊಲೀಸರ ವಿರುದ್ದ ಧರಣಿ ನಡೆಸಿದ್ದು, ಈ ಸಂಬಂಧ ದೂರು ಕೂಡ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಎಸ್ಪಿ ಕೆ.ಪರಶುರಾಮ್ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದರು.