ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕ ಆತ್ಮಹತ್ಯೆ

ಯಲ್ಲಾಪುರ: ಇತ್ತೀಚೆಗೆ ಮದುವೆಯಾಗಲು ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಅಂತೆಯೇ ಇಲ್ಲೊಬ್ಬ ಇದೇ ವಿಚಾರದಿಂದ ಮನನೊಂದು ಸಾವಿನ ದಾರಿ ಹಿಡಿದ ಪ್ರಕರಣ ನಡೆದಿದೆ.

ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಮೃತ ಯುವಕನನ್ನು ನಾಗರಾಜ ಗಣಪತಿ ಗಾಂವ್ಕರ (35) ಎಂದು ಗುರುತಿಸಲಾಗಿದ್ದು, ಈತ ಯಲ್ಲಾಪುರದದ ತೇಲಂಗಾರ ಕಿರಗಾರಿಮನೆ ನಿವಾಸಿ.

ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಾಗರಾಜ್ ಎಲ್ಲರಂತೆಯೇ ತಾನೂ ಮದುವೆಯ ಕನಸು ಕಂಡಿದ್ದ. ಅಂತೆಯೇ ಹಲವು ಸಮಯದಿಂದ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದ. ಸಂಬಂಧಿಕರು, ಬ್ರೋಕರ್ ಗಳ ಬಳಿ ಹೆಣ್ಣು ಹುಡುಕಿಕೊಡಲು ಹೇಳುತ್ತಿದ್ದ. ಆದರೆ ಎಲ್ಲಿಯೂ ನಾಗರಾಜ್‍ಗೆ ಹೆಣ್ಣು ಸಿಗುತ್ತಿರಲಿಲ್ಲ.

ತನಗೆ ಯಾಕೆ ಹೆಣ್ಣು ಸಿಗುತ್ತಿಲ್ಲ ಎಂದು ನಾಗರಾಜ್ ಪ್ರತಿನಿತ್ಯ ಯೋಚನೆಯಲ್ಲಿಯೇ ಮುಳುಗುತ್ತಿದ್ದ. ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ನಾಗರಾಜ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾನೆ. ತನ್ನ ಮನೆಯ ಸಮೀಪದ ಗುಡಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.