ಸೈಕೋ ಕಿಲ್ಲರ್​​ನ ಬಂಧನ, ಒಂಟಿ ಸೆಕ್ಯುರಿಟಿ ಗಾರ್ಡ್​​ಗಳೇ ಈತನ ಟಾರ್ಗೆಟ್​

ಬೆಂಗಳೂರು: ಒಂಟಿ ಸೆಕ್ಯುರಿಟಿ ಗಾರ್ಡ್​​ಗಳನ್ನು ಹುಡುಕಿ  ಕೊಲೆ ಮಾಡುತ್ತಿದ್ದ ಸೈಕೋ ಕಿಲ್ಲರ್​​ನನ್ನು ಆರ್​​. ಟಿ ನಗರ ಪೊಲೀಸರು ಬಂಧಿಸಿದ್ದಾರೆ. ತೌಸೀಪ್​​​ ಕೊಲೆ ಆರೋಪಿ. ಆರೋಪಿ ತೌಸೀಪ್​​ ವಿಚಿತ್ರ ಸೈಕೋಪಾತ್​​ ಆಗಿದ್ದು ಹಲವು ಪೋಲಿಸ್​ ಠಾಣೆಗಳಿಗೆ ಬೇಕಾಗಿದ್ದನು. ಮಧ್ಯರಾತ್ರಿ ಕಂಠಪೂರ್ತಿ ಕುಡಿದು, ಮಾದಕ ವಸ್ತುಗಳಿಂದ ನಶೆ ಏರಿಸಿಕೊಂಡು ಬರುವ ಈತ ನಸುಕಿನ ಜಾವ ಎರಡಿಂದ ಮೂರು ಗಂಟೆ ಅವಧಿಯಲ್ಲಿ ಒಂಟಿ ಸೆಕ್ಯುರಿಟಿ ಗಾರ್ಡ್​​ಗಳನ್ನು ಹುಡುಕಿ ಕೊಲ್ಲುತ್ತಿದ್ದನು.

ಈತ ಈಗಾಗಲೇ ಆರ್​.ಟಿ ನಗರ, ಸಂಜಯ ನಗರ, ಜೆಸಿ ನಗರ, ಕೆಜಿ ಹಳ್ಳಿಯಲ್ಲಿ ಸೆಕ್ಯುರಿಟಿ ಗಾರ್ಡ್​​​ಗಳನ್ನು ಕೊಲೆ ಮಾಡಿದ್ದಾನೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಮನೆ ಬಳಿಯೂ ಸೆಕ್ಯುರಿಟಿಗೆ ಚಾಕುವಿನಿಂದ ಇರಿದಿದ್ದನು.

ಈತ ಸದಾ ಸೊಲ್ಯುಶನ್​​ ಹಾಗೂ ಡ್ಯಾಗರ್ ಅನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗುತ್ತಿದ್ದನು. ​​ಹಲವು ಪೊಲೀಸ್​ ಠಾಣೆಗಳಲ್ಲಿ ಈತನ ವಿರುದ್ಧ ದೂರು ದಾಖಲಾಗಿದ್ದವು. ಈ ಹಿನ್ನೆಲೆ ಮೂರು ದಿನಗಳ ಕಾಲ ಹಗಲು ರಾತ್ರಿ ಪೊಲೀಸರು ಈತನ ಹಿಂದೆ ಬಿದ್ದಿದ್ದರು. ಕೊನೆಗೆ ಆರ್​.ಟಿ ನಗರ 80 FT ರೋಡ್​​ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ.