ಶೂಟಿಂಗ್ ವೇಳೆ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್​ ಕಾಲಿಗೆ ಗಾಯ; ನಡೆಯಿತು ಶಸ್ತ್ರಚಿಕಿತ್ಸೆ

ಮಲಯಾಳಂನ ಜನಪ್ರಿಯ ನಟ ಪೃಥ್ವಿರಾಜ್​ ಸುಕುಮಾರನ್ ಕಾಲಿಗೆ ಗಂಭೀರ ಗಾಯ ಆಗಿದೆ. ಸಿನಿಮಾ ಶೂಟಿಂಗ್ ವೇಳೆ ಸಂಭವಿಸಿದ ಅವಘಡದಲ್ಲಿ ಅವರ ಕಾಲಿಗೆ ಏಟಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೃಥ್ವಿರಾಜ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಹೀಗಾಗಿ, ಕೆಲ ವಾರಗಳ ಕಾಲ ಅವರು ವಿಶ್ರಾಂತಿಪಡೆಯಲೇಬೇಕಿದೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ಬೇಸರ ಆಗಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.

ಸಾಹಸ ದೃಶ್ಯಗಳ ಶೂಟಿಂಗ್ ವೇಳೆ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಕಾಗುವುದಿಲ್ಲ. ಹೀಗಿದ್ದರೂ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತವೆ. ಈಗ ಪೃಥ್ವಿರಾಜ್ ಅವರಿಗೂ ಹೀಗೆಯೇ ಆಗಿದೆ. ಅವರು ಮುನ್ನೆಚ್ಚರಿಕೆ ಪಡೆದುಕೊಂಡ ಹೊರತಾಗಿಯೂ ಪೆಟ್ಟಾಗಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.

ವಿಲಾಯತ್ ಬುದ್ಧ’ ಹೆಸರಿನ ಸಿನಿಮಾದಲ್ಲಿ ಪೃಥ್ವಿರಾಜ್ ನಟಿಸುತ್ತಿದ್ದರು. ತಕ್ಷಣ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇಂದು (ಜೂನ್ 26) ಅವರ ಕಾಲಿಗೆ ಶಸ್ತ್ರಚಿಕಿತ್ಸೆ ನಡೆದಿದೆ ಎನ್ನಲಾಗುತ್ತಿದೆ. ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಸದ್ಯ ಈ ಸಿನಿಮಾ ಶೂಟಿಂಗ್ ನಿಂತಿದೆ.

ಪೃಥ್ವಿ ರಾಜ್ ಅವರು ‘ಸಲಾರ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಪೂರ್ಣಗೊಂಡಿರುವುದರಿಂದ ಈ ಸಿನಿಮಾ ರಿಲೀಸ್​​ಗೆ ಯಾವುದೇ ತೊಂದರೆ ಇಲ್ಲ. ಈ ಚಿತ್ರ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ. ಪ್ರಭಾಸ್ ಮುಖ್ಯಭೂಮಿಕೆಯಲ್ಲಿದ್ದು, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಟೈಸನ್’ ಚಿತ್ರದಲ್ಲಿ ಪೃಥ್ವಿರಾಜ್ ಅವರು ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಈ ಚಿತ್ರ 2024ರಲ್ಲಿ ರಿಲೀಸ್ ಆಗಲಿದೆ.

ಇತ್ತೀಚೆಗೆ ನಟ ವಿಶಾಲ್ ಅವರು ಗಾಯಗೊಂಡಿದ್ದರು. ‘ವಿಜಯ್ ಆ್ಯಂಟನಿ’ ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಗಾಯ ಆಗಿತ್ತು. ಸಿನಿಮಾ ಸೆಟ್​ನಲ್ಲಿ ಪದೇಪದೇ ಈ ರೀತಿಯ ಅವಘಡಗಳು ಸಂಭವಿಸುತ್ತಿರುವುದು ಸಾಕಷ್ಟು ಆತಂಕ ಮೂಡಿಸಿದೆ.