ಮಚ್ಚಿನಿಂದ ಹೊಡೆದು ಕರಡಿ ದಾಳಿಯಿಂದ ಪತಿಯನ್ನು ರಕ್ಷಿಸಿದ ಪತ್ನಿ

ಹಾವೇರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ರೈತರ ಮೇಲೆ ಏಕಾಏಕಿ ಕರಡಿಯೊಂದು ದಾಳಿ ಮಾಡಿದ್ದು, ಪತ್ನಿ ಮಚ್ಚಿನಿಂದ ಕರಡಿಯನ್ನು ಹೊಡೆದು ಪತಿ ಹಾಗೂ ಸಹೋದರನನ್ನು ರಕ್ಷಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ಘಟನೆ ನಡೆದಿದ್ದು, ಕರಡಿ ದಾಳಿಯಿಂದಾಗಿ ರೈತ ಬಸೀರಸಾಬ್ (45) ಹಾಗೂ ರಜಾಕ್ (30) ಗಾಯಗೊಂಡಿದ್ದಾರೆ. ಇವರಿಬ್ಬರೂ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕರಡಿ ದಾಳಿ ಮಾಡಿದೆ. ಕರಡಿ ಇಬ್ಬರ ಮೇಲೂ ದಾಳಿ ನಡೆಸಿದ್ದು, ಪತಿ ಬಸೀರಸಾಬ್ ಸವದತ್ತಿ ಜೀವ ಉಳಿಸುವ ಸಲುವಾಗಿ ಪತ್ನಿ ಸಬೀನಾ ಮಚ್ಚಿನಿಂದ 3 ಬಾರಿ ಕರಡಿಯ ಮೇಲೆ ಹೊಡೆದಿದ್ದಾಳೆ. 

ಇದರಿಂದ ಗಾಯಗೊಂಡ ಕರಡಿ ಇಬ್ಬರನ್ನೂ ಅಲ್ಲಿಯೇ ಬಿಟ್ಟು ಬೇರೆ ಜಮೀನಿಗೆ ತೆರಳಿ ಅಲ್ಲಿ ಪ್ರಾಣ ಬಿಟ್ಟಿದೆ. ಕರಡಿ ದಾಳಿಯಿಂದ ಗಾಯಗೊಂಡ ಇಬ್ಬರು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಿಗೂ ಮುಖ, ಕೈ ಹಾಗೂ ದೇಹದ ಭಾಗಗಳಿಗೆ ಗಾಯಗಳಾಗಿವೆ. ದಾಳಿಯ ವೇಳೆ ಸಬೀನಾ ತನ್ನ ದಿಟ್ಟತನವನ್ನು ಪ್ರದರ್ಶಿಸಿ ಕರಡಿಯೊಂದಿಗೆ ಹೋರಾಡಿ ತನ್ನ ಪತ್ನಿ ಹಾಗೂ ಸಹೋದರನನ್ನು ಕಾಪಾಡಿಕೊಂಡಿದ್ದಾಳೆ.

ಕರಡಿ ದಾಳಿಯ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.