ಈಜಿಪ್ಟ್‌ ಅತ್ಯುನ್ನತ ರಾಜ್ಯ ಗೌರವ ‘ಆರ್ಡರ್ ಆಫ್ ದಿ ನೈಲ್’ ಸ್ವೀಕರಿಸಿದ ಮೋದಿ: ಐತಿಹಾಸಿಕ ಮಸೀದಿಗೆ ಭೇಟಿ

ಕೈರೋ (ಜೂನ್ 25, 2023): 2 ದಿನಗಳ ಕಾಲ ಈಜಿಪ್ಟ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರಿಂದ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾದ ‘ಆರ್ಡರ್ ಆಫ್ ದಿ ನೈಲ್’ ಅನ್ನು ಸ್ವೀಕರಿಸಿದ್ದಾರೆ. ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ. 

ಇದಕ್ಕೂ ಮುನ್ನ ಈಜಿಪ್ಟ್‌ ಕಾಲಮಾನದಲ್ಲಿ ಇಂದು ಬೆಳಗ್ಗೆ, ಪ್ರಧಾನಿ ಮೋದಿ ಈಜಿಪ್ಟ್‌ನ 11 ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿ ಮತ್ತು ಕೈರೋದಲ್ಲಿನ ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. ಅಲ್ಲದೆ, ಪ್ರಧಾನಿ ಮೋದಿ ಅವರು ಈಜಿಪ್ಟ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವೆ ಕೆಲ ಒಪ್ಪಂದಗಳಿಗೂ ಸಹಿ ಹಾಕಲಾಗಿದೆ. 

ತಮ್ಮ ರಾಷ್ಟ್ರಕ್ಕೆ ಭೇಟಿ ನೀಡುವಂತೆ ಈಜಿಪ್ಟ್‌ ಅಧ್ಯಕ್ಷ  ಅಬ್ದೆಲ್ ಫತ್ತಾಹ್ ಎಲ್-ಸಿಸಿ ಆಹ್ವಾನಿಸಿದ್ದ ಹಿನ್ನೆಲೆ ಅಲ್ಲಿಗೆ ಭೇಟಿ ನೀಡಿದ್ದಾರೆ. 26 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‌ ಜತೆ ನಡೆಸುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಜಿ-20 ಶೃಂಗಸಭೆಗಾಗಿ ಎಲ್-ಸಿಸಿ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರಯಾಣಿಸಲಿದ್ದು, ಈಜಿಪ್ಟ್ ಅನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ.

ಈಜಿಪ್ಟ್‌ನ ರಾಜಧಾನಿ ಕೈರೋದ ಹೃದಯಭಾಗದಲ್ಲಿರುವ ಸುಮಾರು 1,000 ವರ್ಷಗಳಷ್ಟು ಹಳೆಯದಾದ ಇಮಾಮ್ ಅಲ್-ಹಕೀಮ್ ಬಿ ಅಮ್ರ್ ಅಲ್ಲಾ ಮಸೀದಿಗೆ ಭೇಟಿ ನೀಡಿದ್ದ ವೇಳೆ ಮಸೀದಿಯ ಗೋಡೆಗಳು ಮತ್ತು ದ್ವಾರಗಳ ಮೇಲೆ ಸಂಕೀರ್ಣವಾದ ಕೆತ್ತಿದ ಶಾಸನಗಳನ್ನು ಪ್ರಧಾನಿ ಶ್ಲಾಘಿಸುತ್ತಿರುವುದು ಕಂಡುಬಂದಿತು. 13,560 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಮಸೀದಿಯನ್ನು ಭಾರತದ ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಮರುನಿರ್ಮಿಸಲಾಯಿತು. 

ಈ ಸಮುದಾಯವು ಫಾತಿಮಿಡ್‌ಗಳಿಂದ ಹುಟ್ಟಿಕೊಂಡಿದ್ದು, ಅವರು 1970 ರ ನಂತರ ಮಸೀದಿಯನ್ನು ನವೀಕರಿಸಿದರು ಮತ್ತು ಅಂದಿನಿಂದ ಅದನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಲವು ವರ್ಷಗಳಿಂದ ಗುಜರಾತಿನಲ್ಲಿರುವ ಬೊಹ್ರಾ ಸಮುದಾಯದವರೊಂದಿಗೆ ಪ್ರಧಾನಮಂತ್ರಿಯವರು ನಿಕಟ ಬಾಂಧವ್ಯ ಹೊಂದಿದ್ದಾರೆ ಎಂದು ಈಜಿಪ್ಟ್‌ನಲ್ಲಿರುವ ಭಾರತದ ರಾಯಭಾರಿ ಅಜಿತ್ ಗುಪ್ತೆ ಹೇಳಿದ್ದಾರೆ.

ಈಜಿಪ್ಟ್‌ಗೆ ಅವರ ರಾಜ್ಯ ಭೇಟಿಯ ಎರಡನೇ ದಿನದಂದು, ಪ್ರಧಾನಿ ಮೋದಿ ಮಸೀದಿಗೆ ಭೇಟಿ ನೀಡಿದ್ದು, ಅದರ ಇತ್ತೀಚಿನ ಮರುಸ್ಥಾಪನೆ ಮೂರು ತಿಂಗಳ ಹಿಂದೆ ಪೂರ್ಣಗೊಂಡಿತು. ಮಸೀದಿಯು ಮುಖ್ಯವಾಗಿ ಶುಕ್ರವಾರದ ಪ್ರಾರ್ಥನೆ ಮತ್ತು ಎಲ್ಲಾ ಐದು ಕಡ್ಡಾಯ ಪ್ರಾರ್ಥನೆಗಳನ್ನು ನಿರ್ವಹಿಸುತ್ತದೆ.

ದಾವೂದಿ ಬೋಹ್ರಾ ಮುಸ್ಲಿಮರು ಇಸ್ಲಾಂನ ಅನುಯಾಯಿಗಳ ಒಂದು ಪಂಗಡವಾಗಿದ್ದು, ಅವರು ಫಾತಿಮಿ ಇಸ್ಮಾಯಿಲಿ ತಯ್ಯಿಬಿ ಚಿಂತನೆಯ ಶಾಲೆಗೆ ಬದ್ಧರಾಗಿದ್ದಾರೆ. ಅವರು 11 ನೇ ಶತಮಾನದಲ್ಲಿ ಭಾರತದಲ್ಲಿ ಅಸ್ತಿತ್ವವನ್ನು ಸ್ಥಾಪಿಸುವ ಮೊದಲು ಈಜಿಪ್ಟ್‌ನಿಂದ ಹುಟ್ಟಿ ನಂತರ ಯೆಮೆನ್‌ಗೆ ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಧಾನಿ ಮೋದಿ ಅವರು ಪ್ರಧಾನಿಯಾಗುವ ಮೊದಲಿನಿಂದಲೂ ದಾವೂದಿ ಬೋಹ್ರಾಗಳೊಂದಿಗೆ ದೀರ್ಘಕಾಲದ ಮತ್ತು ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ.

ಇನ್ನೊಂದೆಡೆ, ಹೆಲಿಯೊಪೊಲಿಸ್ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ಮೋದಿ ಅವರು ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸ್ಮಾರಕವು ಮೊದಲ ವಿಶ್ವಯುದ್ಧದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಹೋರಾಡಿ ಮಡಿದ ಸುಮಾರು 4,000 ಭಾರತೀಯ ಸೈನಿಕರನ್ನು ಸ್ಮರಿಸುತ್ತದೆ.