ವಿದ್ಯಾರ್ಥಿನಿಯರ ವಿರುದ್ಧ ಅಶ್ಲೀಲ ಗೋಡೆ ಬರಹ, ಸೂಕ್ತ ಕ್ರಮಕ್ಕೆ ಪೋಷಕರು ಆಗ್ರಹ

ಕನಕಗಿರಿ (ಜೂ.25) : ಪಟ್ಟಣದ ಶಾಲಾ ವಿದ್ಯಾರ್ಥಿನಿಯರ ವಿರುದ್ಧ ಅಶ್ಲೀಲ ಗೋಡೆ ಬರಹ ಮತ್ತೆ ಮುಂದುವರೆದಿದ್ದು,ಈ ವಿಚಾರ ಪಾಲಕರು ಹಾಗೂ ಸ್ಥಳೀಯರನ್ನು ಮುಜುಗರಕ್ಕೀಡು ಮಾಡಿದೆ.

ಕಳೆದ ವರ್ಷದ ಹಿಂದೆ ವಿದ್ಯಾರ್ಥಿನಿಯರ ವಿರುದ್ಧ ಇಲ್ಲಿನ ಕೆಪಿಎಸ್‌ ಮೈದಾನದ ಕಟ್ಟಡದ ಗೋಡೆಗಳಿಗೆ ಅಶ್ಲೀಲವಾಗಿ ಬರೆದ ಕಿಡಿಗೇಡಿಗಳು ವಿಕೃತಿ ಮೆರದಿದ್ದರು.ಈ ಪ್ರಕರಣ ನಡೆದು ವರ್ಷದ ಬಳಿಕ ಮತ್ತದೇ ಸಮಸ್ಯೆ ಉದ್ಬವಿಸಿದೆ. ಎಪಿಎಂಸಿಗೆ ಹೊಂದಿಕೊಂಡಿರುವ ಕಾಂಪೌಂಡ್‌ ಉದ್ದಕ್ಕೂ ವಿದ್ಯಾರ್ಥಿನಿಯರ ಹೆಸರು ಬಳಸಿ ಅಶ್ಲೀಲವಾಗಿ ಬರೆದಿದ್ದಲ್ಲದೇ ನಾನು ಕೆಟ್ಟವನು ಎಂದು ಧಮ್ಕಿ ಹಾಕಿರುವ ಬರಹ ಎಲ್ಲರನ್ನೂ ತಲ್ಲಣಗೊಳಿಸುವಂತೆ ಮಾಡಿದೆ.

ಈ ಘಟನೆ ಭಾನುವಾರದ ಅಮವಾಸ್ಯೆಯ ರಾತ್ರಿಯಂದು ಯಾರು ಸಂಚರಿಸದ ಸಂದರ್ಭ ನೋಡಿಕೊಂಡು ಕಿಡಿಗೇಡಿಗಳು ತಡರಾತ್ರಿ ಇಲ್ಲಿನ ಆದರ್ಶ ಸೇವಾ ಸಂಸ್ಥೆ,ಎಪಿಎಂಸಿ ಸಮುದಾಯದ ಕಾಂಪೌಂಡ್‌, ಕಲ್ಮಠ ಶಾಲೆಯ ಗೋಡೆಯ ಅಲ್ಲಲ್ಲಿ ಅಶ್ಲೀಲ ಚಿತ್ರದ ಜತೆಗೆ ಬರವಣಿಗೆ ಬರೆದಿದ್ದಾರೆ. ಇದೇ ಮಾರ್ಗದಲ್ಲಿ ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುತ್ತಿರುವುದನ್ನು ಗಮನಿಸಿದ ಕಿಡಿಗೇಡಿಗಳು ಈ ಕೃತ್ಯವೆಸಗಿರಬಹುದೆನ್ನುವ ಅನುಮಾನ ಸೃಷ್ಟಿಸಿದೆ.

ಅಶ್ಲೀಲ ಚಿತ್ರ,ಬರವಣಿಗೆಯಿಂದ ಪಾಲಕರು ಹಾಗೂ ವಿದ್ಯಾರ್ಥಿನಿಯರಿಗೂ ತೊಂದರೆಯಾಗಿದ್ದಲ್ಲದೇ ಸಾರ್ವಜನಿಕ, ಸರ್ಕಾರದ ಸುಪರ್ದಿಯಲ್ಲಿರುವ ಆಸ್ತಿಗಳು ಇಂತಹ ಬರಹಗಳಿಗೆ ಬಳಕೆಯಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಈಗಾಗಲೇ ಪಾಲಕರು ಈ ಬರವಣಿಗೆ ಹಾಗೂ ಚಿತ್ರ ಅಳುಕಿಸಿದ್ದಾರೆ.ಕಿಡಿಗೇಡಿ ಪತ್ತೆ ಹಚ್ಚುವಂತೆ ಪಾಲಕರು ಠಾಣೆ ಮೆಟ್ಟಿಲೇರಿದ್ದಾರೆ.ಶಾಲೆಗಳ ಸುತ್ತ-ಮುತ್ತ ಸಿಸಿ ಕ್ಯಾಮೇರಾ ಅಳವಡಿಸುವ ಕಾರ್ಯಕ್ಕೆ ಮುಂದಾಗಬೇಕು.ಕಳೆದ ವರ್ಷದಿಂದ ಇಂತಹ ಕೃತ್ಯಗಳು ನಡೆಯುತ್ತಿದ್ದು, ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕನಕಗಿರಿ ಪಟ್ಟಣದಲ್ಲಿ ಅಶ್ಲೀಲ ಗೋಡೆ ಬರಹದ ವಿಚಾರ ಈ ಮೊದಲು ಕೇಸ್‌ ದಾಖಲಾಗಿದೆ.ಇದೀಗ ಕಿಡಿಗೇಡಿಗಳು ಮತ್ತೆ ಅಶ್ಲೀಲ ಚಿತ್ರ,ಬರಹ ಬರೆಯಲು ಪ್ರಾರಂಭಿಸಿದ್ದಾರೆ.ಇಲಾಖೆಯ ಅಧಿಕಾರಿಗಳ ಗೈಡ್‌ಲೈನ್‌ ಬಳಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. ​ ಜಗದೀಶ ಸಿಪಿಐ.