ಶಕ್ತಿ ಯೋಜನೆ: ಚಿಕ್ಕಮಗಳೂರಿನ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ!

ಚಿಕ್ಕಮಗಳೂರು (ಜೂ.24): ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ‘ಶಕ್ತಿ ಯೋಜನೆ’ ಜಾರಿಯಿಂದ ಚಿಕ್ಕಮಗಳೂರು  ವಿಭಾಗದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಗಣನೀಯ ಇಳಿಮುಖವಾಗಿದ್ದು, ಈ ವೀಕೆಂಡ್‌ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಮಹಿಳಾ ಪ್ರಯಾಣಿಕರಿಂದ ಶಕ್ತಿ ಯೋಜನೆಗೆ ಅಪಸ್ವರವಾಗಿದ್ದು, ಸಿಎಂ ಸಿದ್ದರಾಮಯ್ಯ ಹೆಂಡತಿಗೆ ಫ್ರೀ ಅಂದಮೇಲೆ ಇನ್ನು ನಾನ್ಯಾಕೆ ದುಡ್ಡು ಕೊಟ್ಟು ಹೋಗಲಿ ಎಂದು ಶ್ರೀಮಂತರು ಕೂಡ ಉಚಿತ ಸೇವೆಯ ಲಾಭ ಪಡೆಯುತ್ತಿದ್ದಾರೆ. 

ಉಚಿತ ಸೇವೆಗೆ ಕೆಲವೊಂದು ಮಾನದಂಡಗಳನ್ನು ಮಾಡಬೇಕಾಗಿತ್ತು. ಅರ್ಧ ಬಸ್ ಚಾರ್ಜ್ ಮಾಡಿದ್ರೆ ಸರ್ಕಾರಕ್ಕೂ ಲಾಭವಾಗುತ್ತಿತ್ತು ಪ್ರಯಾಣಿಕರ ಸಂಖ್ಯೆಯು ಕಡಿಮೆಯಾಗುತ್ತಿತ್ತು. ಬಸ್‌ನಲ್ಲಿ ಲಿಮಿಟ್ ಇಲ್ಲದೇ  ಜನರನ್ನು ತುಂಬುತ್ತಿದ್ದಾರೆ ಇದು ಅಪಾಯಕ್ಕೆ ದಾರಿಯಾಗುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬಸ್ಸಿನ ಸಾಮರ್ಥ್ಯಕ್ಕೆ ತಕ್ಕಂಗೆ ಪ್ರಯಾಣಿಕರು ಹತ್ತಿಸಬೇಕು ಎಂದು ಕಾಫಿನಾಡಿನಲ್ಲಿ ಮಹಿಳಾ ಪ್ರಯಾಣಿಕರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಮಹಿಳಾ ಪ್ರಯಾಣಿಕರು ಸೌಜನ್ಯವಾಗಿ ವರ್ತಿಸಲು ಮನವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಅದ್ಯತೆ ನೀಡಿ, ಶಕ್ತಿ ಯೋಜನೆ ಜಾರಿ ಮಾಡಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದು, ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ ಸೌಜನ್ಯ ಮತ್ತು ತಾಳ್ಮೆಯಿಂದ ನಡೆದುಕೊಳ್ಳುವ ಮೂಲಕ ಸುಖಕರ ಪ್ರಯಾಣ ಮಾಡಬೇಕೆಂದು ಕಾಂಗ್ರೆಸ್‌ ಮುಖಂಡ ಹಾಗೂ ಸಮಾಜ ಸೇವಕ ಮಾದಾಪುರ ರವಿಕುಮಾರ್‌ ಮನವಿ ಮಾಡಿದ್ದಾರೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ಅನೇಕರು ನಾನಾ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡುತ್ತಿದ್ದು, ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದ್ದ ಪರಿಣಾಮ ಗಲಾಟೆ ಹಾಗೂ ತೊಂದರೆಗಳಾಗುತ್ತಿವೆ ಎಂದು ಬಿಂಬಿಸಲು ಹೊರಟಿದ್ದಾರೆ. ವಿರೋಧ ಪಕ್ಷಗಳು ಈ ಯೋಜನೆ ಯಶಸ್ವಿಯಾಗದಂತೆ ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ ತಮ್ಮ ಸಹ ಪ್ರಯಾಣಿಕರು ಮತ್ತು ಸಹೋದರಿಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಮೂಲಕ ಕರ್ನಾಟಕದ ಮಹಿಳೆಯರು ಮಾದರಿಯಾಗಿದ್ದಾರೆ ಎಂದು ತೋರ್ಪಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಎಲ್ಲಾ ರಂಗದಲ್ಲಿಯು ವಿಶೇಷ ಅದ್ಯತೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈಗ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಮಹಿಳಾ ಪ್ರಧಾನವಾಗಿವೆ. ಈ ಎಲ್ಲಾ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವ ಜೊತೆಗೆ ತಮ್ಮ ಕುಟುಂಬ ಮತ್ತು ಸರ್ಕಾರಕ್ಕೆ ಗೌರವವನ್ನು ತಂದು ಕೊಡಬೇಕು ಎಂದು ಮಾದಾಪುರ ಮನವಿ ಮಾಡಿದ್ದಾರೆ.