5 ಸ್ಟಾರ್‌ ಹೋಟೆಲ್‌ನಲ್ಲಿ 2 ವರ್ಷ ಇದ್ದು ಹಣ ಕೊಡದೇ ಕಾಲ್ಕಿತ್ತ ಅತಿಥಿ: ಬರೋಬ್ಬರಿ 58 ಲಕ್ಷ ರೂ. ಪಂಗನಾಮ!

ನವದೆಹಲಿ (ಜೂನ್ 21, 2023): ರಾಷ್ಟ್ರ ರಾಜಧಾನಿಯಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ಕುಟುಂಬವೊಂದು ಹಣಕೊಡದೆ ಎಸ್ಕೇಪ್‌ ಆಗಲು ಹೋಗಿ ಪೊಲೀಸರ ಅತಿಥಿಯಾದ ಪ್ರಕರಣ ವರದಿಯಾಗಿತ್ತು. ನಾವು ಹೇಳಲು ಹೊರಟಿರುವ ಈ ಸ್ಟೋರಿಯೂ ಕೂಡ ಅಂತದ್ದೇ. ಆದರೆ, ಇಲ್ಲಿ ಹೋಟೆಲ್‌ಗೆ ಬರೋಬ್ಬರಿ 58 ಲಕ್ಷ ರೂ. ವಂಚನೆಯಾಗಿದೆ. ಅಲ್ಲದೆ, ಆರೋಪಿ ಆರಾಮಾಗಿ ಹಣ ಕೊಡದೆ ಹೋಟೆಲ್‌ನಿಂದ ಹೊರಗೋಗಿದ್ದಾನೆ ಎಂದೂ ತಿಳಿದುಬಂದಿದೆ. ಇದ್ಹೇಗೆ ಸಾಧ್ಯ ಅಂತೀರಾ..

ದೆಹಲಿಯ ಪಂಚತಾರಾ ಹೊಟೇಲ್‌ನ ಅತಿಥಿಯೊಬ್ಬರು ಕೆಲವು ಹೋಟೆಲ್‌ ಸಿಬ್ಬಂದಿಯೊಂದಿಗೆ ಒಪ್ಪಂದ ಮಾಡಿಕೊಂಡು ಸುಮಾರು ಎರಡು ವರ್ಷಗಳ ಕಾಲ ಯಾವುದೇ ಪಾವತಿ ಮಾಡದೆ ಉಳಿದುಕೊಂಡಿದ್ದರಿಂದ 58 ಲಕ್ಷ ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಬಳಿ ಏರೋಸಿಟಿಯಲ್ಲಿರುವ ರೋಸೆಟ್ ಹೌಸ್ ಎಂಬ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಐಜಿಐ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಸೆಟ್‌ ಹೋಟೆಲ್‌ ಅನ್ನು ನಿರ್ವಹಿಸುವ ಬರ್ಡ್ ಏರ್‌ಪೋರ್ಟ್ಸ್ ಹೋಟೆಲ್ ಪ್ರೈವೇಟ್ ಲಿಮಿಟೆಡ್‌ನ ಅಧಿಕೃತ ಪ್ರತಿನಿಧಿ ವಿನೋದ್ ಮಲ್ಹೋತ್ರಾ ಅವರು ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್ ಪ್ರಕಾರ, ಅತಿಥಿ ಅಂಕುಶ್ ದತ್ತಾ 603 ದಿನಗಳ ಕಾಲ ಈ ಹೋಟೆಲ್‌ನಲ್ಲಿದ್ದರು. 58 ಲಕ್ಷ ರೂ. ವೆಚ್ಚವಾಗಿದ್ದರೂ ಒಂದು ಪೈಸೆಯನ್ನೂ ಪಾವತಿಸದೆ ಚೆಕ್ ಔಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಹೋಟೆಲ್‌ನ ಫ್ರಂಟ್ ಆಫೀಸ್ ವಿಭಾಗದ ಮುಖ್ಯಸ್ಥ ಪ್ರೇಮ್ ಪ್ರಕಾಶ್, ರೂಮಿನ ದರಗಳನ್ನು ನಿರ್ಧರಿಸಲು ಅಧಿಕಾರ ಹೊಂದಿದ್ದರು ಮತ್ತು ಎಲ್ಲಾ ಅತಿಥಿಗಳ ಬಾಕಿಗಳನ್ನು ಪತ್ತೆ ಹಚ್ಚಲು ಹೋಟೆಲ್ ಕಂಪ್ಯೂಟರ್ ಸಿಸ್ಟಮ್‌ಗೆ ಪ್ರವೇಶವನ್ನು ಹೊಂದಿದ್ದರು. ಇವರು ಅಂಕುಶ್‌ ದತ್ತಾ ಅವರ ದೀರ್ಘಾವಧಿಯ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಹೋಟೆಲ್ ನಿಯಮಗಳನ್ನು ಉಲ್ಲಂಘಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಎಫ್‌ಐಆರ್ ಆರೋಪಿಸಿದೆ.

ಅತಿಥಿಗಳು ಮತ್ತು ಅವರ ಖಾತೆಗಳ ವಾಸ್ತವ್ಯ/ಭೇಟಿಯನ್ನು ನಿರ್ವಹಿಸುವ ಮತ್ತು ಮೇಲ್ವಿಚಾರಣೆ ಮಾಡುವ ತನ್ನ ಆಂತರಿಕ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಕುಶಲತೆಯಿಂದ ನಿರ್ವಹಿಸುವ ಮೂಲಕಪ್ರೇಮ್‌ ಪ್ರಕಾಶ್ ಅವರು ಅಂಕುಶ್‌ ದತ್ತಾ ಅವರಿಂದ ಸ್ವಲ್ಪ ಹಣವನ್ನು ಪಡೆದಿರಬಹುದು ಎಂದೂ ಹೋಟೆಲ್ ಆಡಳಿತವು ಶಂಕಿಸಿದೆ. “ಅತಿಥಿ ಶ್ರೀ ಅಂಕುಶ್ ದತ್ತಾ ಅವರು ಪ್ರೇಮ್ ಪ್ರಕಾಶ್ ಸೇರಿದಂತೆ ಕೆಲವು ತಿಳಿದಿರುವ ಮತ್ತು ಅಪರಿಚಿತ ಹೋಟೆಲ್ ಸಿಬ್ಬಂದಿಯೊಂದಿಗೆ ಕ್ರಿಮಿನಲ್ ಪಿತೂರಿಯನ್ನು ರೂಪಿಸಿದ್ದಾರೆ. ಈ ಮೂಲಕ ಹೋಟೆಲ್‌ಗೆ ಸರಿಯಾದ ಬಾಕಿಯನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿದ್ದಾರೆ ಹಾಗೂ ಅನ್ಯಾಯದ ಮಾರ್ಗವಾಗಿ ಲಾಭ ಹೊಂದಿದ್ದಾರೆ’’ ಎಂದು ಎಫ್‌ಐಆರ್ ಹೇಳಿದೆ.

ಅತಿಥಿ ಅಂಕುಶ್ ದತ್ತಾ ಮೇ 30, 2019 ರಂದು ಚೆಕ್ ಇನ್ ಮಾಡಿದ್ದಾರೆ ಮತ್ತು ಒಂದು ರಾತ್ರಿಗೆ ಕೊಠಡಿಯನ್ನು ಕಾಯ್ದಿರಿಸಿದ್ದಾರೆ. ಅವರು ಮೇ 31 ರಂದು ಮರುದಿನ ಚೆಕ್ ಔಟ್ ಮಾಡಬೇಕಿತ್ತು. ಆದರೆ ಅವರು ತಮ್ಮ ವಾಸ್ತವ್ಯವನ್ನು ಜನವರಿ 22, 2021 ರವರೆಗೆ ವಿಸ್ತರಿಸುತ್ತಲೇ ಇದ್ದರು ಎಂದು ಹೋಟೆಲ್ ಆರೋಪಿಸಿದೆ. ಅಲ್ಲದೆ, ಅತಿಥಿ 72 ಗಂಟೆಗೂ ಹೆಚ್ಚು ಕಾಲ ಹಣ ಬಾಕಿ ಇರಿಸಿಕೊಂಡಿದ್ದರೆ, ಈ ಬಗ್ಗೆ ಸಿಇಒ ಮತ್ತು ಹಣಕಾಸು ನಿಯಂತ್ರಕರ ಗಮನಕ್ಕೆ ತರಬೇಕು ಮತ್ತು ಸೂಚನೆಯನ್ನು ಪಡೆಯಬೇಕು ಎಂದು ಹೋಟೆಲ್ ನಿಯಮವು ಹೇಳುತ್ತದೆ. ಆದರೆ, ಪ್ರೇಮ್‌ ಪ್ರಕಾಶ್ ಅವರು ಅಂಕುಶ್‌ ದತ್ತಾ ಅವರ ಬಾಕಿ ಹಣವನ್ನು ಹೋಟೆಲ್‌ನ ಸಿಇಒ ಮತ್ತು ಎಫ್‌ಸಿಗೆ ಕಳುಹಿಸಲಿಲ್ಲ ಎಂದೂ ತಿಳಿದುಬಂದಿದೆ. 

ಅಂಕುಶ್‌ ದತ್ತಾ ವಿವಿಧ ದಿನಾಂಕಗಳಲ್ಲಿ ₹ 10 ಲಕ್ಷ, ₹ 7 ಲಕ್ಷ ಮತ್ತು ₹ 20 ಲಕ್ಷದ ಮೂರು ಚೆಕ್‌ಗಳನ್ನು ಪಾವತಿಸಿರುವುದನ್ನು ಹೋಟೆಲ್ ಗಮನಿಸಿದೆ. ಆದರೆ ಅವೆಲ್ಲವೂ ಬೌನ್ಸ್ ಆಗಿವೆ ಮತ್ತು ಪ್ರೇಮ್‌ ಪ್ರಕಾಶ್ ಈ ಸಂಗತಿಯನ್ನು ಹೋಟೆಲ್ ಆಡಳಿತದ ಗಮನಕ್ಕೆ ತಂದಿಲ್ಲ ಎಂದೂ ಹೋಟೆಲ್‌ ತಿಳಿಸಿದೆ.