‘ವನಚೇತನ’ದ ಮೂಲಕ ಅಡವಿ ಮಕ್ಕಳ ಬಾಳಿಗೆ ಬೆಳಕಾದ ಕಲಾವಿದ ದಿನೇಶ್ ಹೊಳ್ಳ

ಪ್ರಕೃತಿಯ ಮಡಿಲಲ್ಲಿ ಮಗುವಾಗಿ ಬೆಳೆಯುವ ಅವಕಾಶ ಈ ಭೂಮಿಯ ಮೇಲೆ ಹುಟ್ಟಿದಂತಹ ಪ್ರತಿಯೊಂದು ಜೀವಿಗೂ ದೊರಕಿದ ಉಡುಗೊರೆ. ಅಡವಿಯ ಮಡಿಲಲ್ಲಿ ಪಾಠ ಕೇಳಿದಾಗ ಕಾಣುವ ಪದಗಳ ಸಾರ, ಯಾರನ್ನು ಕರೆದಾಗ ಕೇಳಿ ಬರುವ ಪ್ರತಿಧ್ವನಿ, ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆದ ಹೆಜ್ಜೆ ಸದ್ದು  ಇವೆಲ್ಲವನ್ನೂ ಪಠ್ಯಪುಸ್ತಕಗಳಿಗೆ ಕೇಳುವ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ಈಗಿನ ಆಧುನಿಕ ಯುಗದಲ್ಲಿ ಜನರ ಜಂಜಾಟದ ಬದುಕಿನ ಓಟದಲ್ಲಿ ಜಗತ್ತು ಕಳೆದು ಹೋಗುತ್ತಿದೆ. ನಿತ್ಯ ಜೀವನದ ಶಿಕ್ಷಣ ಅನುಭವ ಮರೆಯಲಾಗುತ್ತಿದೆ. 

ಆದರೆ ಇಂದಿಗೂ ಹಲವಾರು ಹಳ್ಳಿಗಳಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರಕೃತಿಯ ಮಡಿಲಲ್ಲಿ ಪಾಠವ ಆಲಿಸುವ ಅವಕಾಶ ಅಡವಿಯ ಮಕ್ಕಳಿಗೆ ದೊರೆತಿರುವುದು ಅದೃಷ್ಟವೇ ಸರಿ. ಆದರೆ ಹತ್ತಿರದಲ್ಲಿ ಶಾಲೆಗಳು ಇಲ್ಲದಿರುವ ಕಾರಣ ಮೈಲುಗಟ್ಟಲೆ ಕಾಡಿನ ನಡುವೆ ನಡೆದುಕೊಂಡು ಬರುವ ಸನ್ನಿವೇಶ ಎದುರಾಗಿದೆ. ಶಾಲೆಗಳು ಇದ್ದರೂ ಮೂಲ ಸೌಕರ್ಯಗಳ ಕೊರತೆ ,ಅಗತ್ಯ ವಸ್ತುಗಳ ಇಲ್ಲದಿರುವಿಕೆ ಇವೆಲ್ಲವೂ ಮಕ್ಕಳ ಓದಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಇದನ್ನು ಗಮನಿಸಿದಂತಹ ವ್ಯಕ್ತಿ ಓರ್ವರು 25 ವರ್ಷಗಳ ಹಿಂದೆ ಪಶ್ಚಿಮ ಘಟ್ಟಕ್ಕೆ ಟ್ರಕ್ಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಅಡವಿ ಮಕ್ಕಳ ಜೀವನದ ಕಡೆ ಕಣ್ಣಾಯಿಸಿದರು.

ಆ ಮಕ್ಕಳಲ್ಲಿದ್ದಂತಹ ಕಲೆ, ಜ್ಞಾನ, ಓದಬೇಕೆಂಬ ಹಂಬಲ ಇವೆಲ್ಲವೂ ಅವರನ್ನು ಮಕ್ಕಳ ಮುಗ್ಧ ಮನಸ್ಸಿನತ್ತ ಸೆಳೆಯುವಂತೆ ಮಾಡಿತು. ಅಡವಿ ಮಕ್ಕಳ ಶಿಕ್ಷಣದ ಬಗ್ಗೆ ಗಂಭೀರವಾಗಿ ಆಲೋಚಿಸಿದಂತಹ ಈ ವ್ಯಕ್ತಿ ಕಳೆದ 15 ವರ್ಷಗಳಿಂದ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಹಲವಾರು ಶಾಲೆಯ ಮಕ್ಕಳಿಗೆ ಪೀಠೋಪಕರಣಗಳನ್ನು ವಿತರಿಸಿ ಅವರ ಮುಖದಲ್ಲಿ ನಗುವನ್ನು ಕಾಣುತ್ತಿದ್ದಾರೆ. ಅವರೇ ಮಂಗಳೂರಿನ ಬಂಟ್ವಾಳ ತಾಲೂಕಿನ ದಿನೇಶ್ ಹೊಳ್ಳ. ಇವರು ವೃತ್ತಿಯಲ್ಲಿ ಕಲಾವಿದನಾಗಿದ್ದು ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ ಅವರನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ನಿಟ್ಟಿನಲ್ಲಿ 2006ರಲ್ಲಿ ಅಡವಿ ಮಕ್ಕಳ ವಿದ್ಯಾ ವಿಕಸನ ಎಂಬ ಯೋಚನೆಯನ್ನು ತರುತ್ತಾರೆ. 

ಆ ಯೋಜನೆಗೆ 2020ರಲ್ಲಿ ‘ವನಚೇತನ’ ಎಂಬ ಹೆಸರನ್ನು ಕೂಡ ಇಡುತ್ತಾರೆ. ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿರುವ ಕಲೆಯನ್ನು ಹೊರತೆಗೆಯುವ ಕೆಲಸ ಮಾಡುವುದರ ಜೊತೆಗೆ ಅವರೊಟ್ಟಿಗೆ ಆಟ ಹಾಡು ನೃತ್ಯ ಹೀಗೆ ಅನೇಕ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಅಡವಿ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಸಹ್ಯಾದ್ರಿ ಸಂಚಯ ಟ್ರಸ್ಟ್ ಮಂಗಳೂರು ಇದರ ಜೊತೆಗೂಡಿ ಹಲವಾರು ದಾನಿಗಳ ನೆರವಿನಿಂದ ಇಲ್ಲಿಯವರೆಗೆ 350 ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಅವರ ಕಲಿಕೆಗೆ ಅವಕಾಶ ಒದಗಿಸಿ ಕೊಟ್ಟಿದ್ದಾರೆ. ಇಲ್ಲಿಯವರೆಗೂ 36 ಶಾಲೆಗಳಿಗೆ ಕಂಪ್ಯೂಟರ್ 56 ಶಾಲೆಗಳಿಗೆ ಫರ್ನಿಚರ್ 12 ಶಾಲೆಗಳಿಗೆ ಟಿವಿ ಮತ್ತು ಪೀಠೋಪಕರಣಗಳನ್ನು  ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಯಲ್ಲಾಪುರ, ಅಂಕೋಲಾ ಬುಡಕಟ್ಟು ಮಕ್ಕಳ ಶಾಲೆಗಳಿಗೆ  ನೆರವಾಗಿ ನೀಡಿದ್ದಾರೆ. 

ಈ ಕಾರ್ಯಕ್ರಮದ ಮೂಲ ಉದ್ದೇಶ ಅಡವಿ ಮಕ್ಕಳು ಮುಂದೊಂದು ದಿನ ವಿದ್ಯಾವಂತರಾಗಿ ಅರಣ್ಯ ಇಲಾಖೆಯಲ್ಲಿ ಕೆಲಸಕ್ಕೆ  ಸೇರಿಕೊಂಡರೆ ನಮ್ಮ ಕಾಡನ್ನು ರಕ್ಷಿಸುತ್ತಾರೆ ಮತ್ತು ಕಾಡಿನ ಮಹತ್ವವನ್ನು ಅರಿತಿರುತ್ತಾರೆ ಎಂಬುದಾಗಿದೆ. ಹಾಗಾಗಿ ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಮಂಗಳೂರಿನ ವನಚೇತನಾ ತಂಡವು ಉತ್ತರ ಕನ್ನಡ ಶಾಲೆಗಳಲ್ಲಿರುವ ಅಡವಿ ಮಕ್ಕಳನ್ನು ಭೇಟಿ ಮಾಡಿ ಶಿಕ್ಷಣದ ಕುರಿತು ,ಆರೋಗ್ಯದ ಕುರಿತು, ಅರಣ್ಯದ ಕುರಿತು ಅನೇಕ ಚಟುವಟಿಕೆಗಳನ್ನು ಮಾಡಿಸಿ ಮಕ್ಕಳ ಕಲಿಕೆಗೆ ಬೆಳಕನ್ನು ಚೆಲ್ಲುತ್ತಿದ್ದಾರೆ. ಇವರೊಡನೆ ಸಿದ್ದಿ ಸಮುದಾಯದ ರಾಜೇಶ್ವರಿ ಸಿದ್ದಿ ಅನಂತ್ ಸಿದ್ದಿ ಕೈಜೋಡಿಸಿದ್ದಾರೆ.