ಮಹಾಬಲೇಶ್ವರ ದೇವಾಲಯದ ಆತ್ಮಲಿಂಗಕ್ಕೆ ಶ್ರೀಕಾಳ ಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರಿಂದ ಪೂಜೆ

ಗೋಕರ್ಣ : ಇಲ್ಲಿಯ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯಕ್ಕೆ ರವಿವಾರ ಉಡುಪಿ ಆನೆಗುಂದಿಯ ಜಗದ್ಗುರು ಮಹಾ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರು ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.
ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ವೇ. ಮಹಾಬಲ ಉಪಾದ್ಯ ಪೂಜಾ ಕೈಂಕರ್ಯ ನೆರವೇರಿಸಿ ಶ್ರೀಗಳಿಗೆ ಫಲ ಸಮರ್ಪಿಸಿ ವಂದಿಸಿದರು. ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ತಾಮ್ರ ಗೌರಿ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದರು. ಚಾತುರ್ಮಾಸ ವೃತಾಚರಣೆಯ ಪೂರ್ವದಲ್ಲಿ ಒಟ್ಟು 16 ತೀರ್ಥ ಕ್ಷೇತ್ರ ಭೇಟಿ ನೀಡುವುದು ರೂಢಿಗತ ಪರಂಪರೆಯಾಗಿದ್ದು, ಮೊದಲ ಭೇಟಿಯನ್ನು ಇಲ್ಲಿಗೆ ಮಾಡಿ ಪೂಜೆ ಸಲ್ಲಿಸಿದರು. ಹಾಗೆಯೇ ಇಲ್ಲಿನ ಕೋಟಿತೀರ್ಥ ಕಟ್ಟೆಯಲ್ಲಿರುವ ಕಾಳಿಕಾಂಬಾ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದು ಈ ಭಾಗದ ವಿಶ್ವಕರ್ಮ ಸಮಾಜದವರಿಗೆ ಚಾತುರ್ಮಾಸ್ಯದ ಆಮಂತ್ರಣ ನೀಡಿದರು.