ಬಸ್‌ನಲ್ಲಿ ಮಹಿಳಾ ಶಕ್ತಿ ಪ್ರದರ್ಶನ: ಮಳವಳ್ಳಿಯಲ್ಲಿ ಬಾಗಿಲು ಮುರಿತ, ಮಂಡ್ಯದಲ್ಲಿ ವ್ಯಕ್ತಿ ಬಿದ್ದು ಸಾವು

ಮಂಡ್ಯ (ಜೂ.19): ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾದ ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವ ಮಹಿಳೆಯರು ನೂಕುನುಗ್ಗಲಿನಲ್ಲಿ ಕೊಳ್ಳೇಗಾಲದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಬಾಗಿಲನ್ನು ಮುರಿದಿದ್ದರು. ಈಗ ಮಂಡ್ಯದ ಮಳವಳ್ಳಿಯಲ್ಲಿ ಮತ್ತೊಂದು ಬಸ್‌ ಬಾಗಿಲನ್ನು ಮುರಿದು ಹಾಕಿರುವ ಘಟನೆ ನಡೆದಿದೆ. ಆದರೆ, ಮಂಡ್ಯ ತಾಲೂಕಿನಲ್ಲಿ ಬಾಗಿಲಿಲ್ಲದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ರಾಜ್ಯಾದ್ಯಂತ ಕಳೆದ ಎಂಟು ದಿನಗಳ ಹಿಂದೆ ಮಹಿಳಯರಿಗೆ ಉಚಿತವಾಗಿ ಸಂಚಾರ ಮಾಡಲು ‘ಶಕ್ತಿ’ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಉಚಿತ ಪ್ರಯಾಣದ ಲಾಭ ಪಡೆಯುತ್ತಿರುವ ಮಹಿಳೆಯರು ಬಸ್‌ನ ನೂಕು ನುಗ್ಗಲು ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಮೊನ್ನೆ ಮಣ್ಣೆತ್ತಿನ ಅಮವಾಸ್ಯೆಯ ಹಿನ್ನೆಲೆಯಲ್ಲಿ ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟಕ್ಕೆ ಪ್ರಯಾಣ ಮಾಡುವಾಗ ಮಹಿಳೆಯರು ಕೊಳ್ಳೇಗಾಲದಲ್ಲಿ ಬಸ್‌ ಹತ್ತುವಾಗ ಬಾಗಿಲನ್ನು ಮುರಿದು ಹಾಕಿದ್ದರು. ಇದಾದ ಎರಡೇ ದಿನದಲ್ಲಿ ಮಳವಳ್ಳಿಯಲ್ಲಿ ಮತ್ತೊಂದು ಸಾರಿಗೆ ಬಸ್‌ನ ಬಾಗಿಲು ಮುರಿದು ಹಾಕಿದ್ದಾರೆ.

ನಾರಿ ಶಕ್ತಿಗೆ ಮುರಿದ ಮತ್ತೊಂದು KSRTC ಬಸ್ ಡೋರ್ ಮುರಿದು ಬಿದ್ದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ KSRTC ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಮೊನ್ನೆಯಷ್ಟೇ ಕೊಳ್ಳೆಗಾಲದಲ್ಲಿ KSRTC ಬಸ್ ಒಂದರ ಬಾಗಿಲು ಕಿತ್ತು ಬಂದಿತ್ತು. ಇದೀಗ ಮಳವಳ್ಳಿ ಪಟ್ಟಣದಲ್ಲಿ ಮತ್ತೊಂದು ಪ್ರಕರಣ ಮರುಕಳಿಸಿದೆ. ಬಸ್‌ ನಿಲ್ದಾಣಕ್ಕೆ ಬಂದಾಗ ಸೀಟು ಹಿಡಿಯುಲು ಉಂಟಾದ ಜನರಿಂದ ನೂಕು ನುಗ್ಗಲು ಉಂಟಾಗಿತ್ತು. ಈ ವೇಳೆ ಬಾಗಿಲು ಹಿಡಿದು ಬಸ್‌ ಹತ್ತಲು ಮುಂದಾದ ಮಹಿಳೆಯು ಸೇರಿ ಪುರುಷ ಪ್ರಯಾಣಿಕರು ಬಾಗಿಲು ಮುರಿದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಶಕ್ತಿ ಯೋಜನೆ ಘೋಷಣೆ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಹೆಚ್ಚಳವಾಗಿದೆ. ಇದರಿಂದ ನೂಕುನುಗ್ಗಲು  ಉಂಟಾಗಿದ್ದು, ಬಾಗಿಲು ಕಿತ್ತು ಬಂದಿದೆ. ಬಾಗಿಲು ಕಿತ್ತು ಬಂದ ಕಾರಣ ಬಸ್ ನ ಪ್ರಯಾಣಿಕರನ್ನು ಸಾರಿಗೆ ಸಿಬ್ಬಂದಿ ಕೆಳಗಿಳಿಸಿದ್ದಾರೆ. ಕಿತ್ತು ಹೋದ ಡೋರ್ ಅನ್ನು ನಿಲ್ದಾಣದ ಸಿಬ್ಬಂದಿಗೆ ಕಂಡಕ್ಟರ್‌ ಹಸ್ತಾಂತರಿಸಿದ್ದಾರೆ. ನಂತರ ಬಸ್‌ನಲ್ಲಿ ಭರ್ತಿಯಾಗಿ ಪ್ರಯಾಣಿಕರನ್ನು ತುಂಬಿಕೊಳ್ಳದೇ ಬಾಗಿಲ ಬಳಿ ಯಾರನ್ನೂ ನಿಲ್ಲಿಸದೇ ಪ್ರಯಾಣಿಕರನ್ನು ಕರೆದೊಯ್ಯಲಾಯಿತು. ನಂತರ, ಅದನ್ನು ದುರಸ್ತಿ ಮಾಡಿಸುವುದಾಗಿ ಸಾರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಹರಕನಕೆರೆ ಗ್ರಾಮದ ಚಲುವೇಗೌಡ (75) ಮೃತ ವ್ಯಕ್ತಿಯಾಗಿದ್ದಾರೆ. ಬಸ್ ರಶ್ ಇದ್ದ ಕಾರಣ ಬಾಗಿಲ‌ ಬಳಿ ನಿಂತಿದ್ದರು. ಬಸ್‌ಗೆ ಡೋರ್ ಇಲ್ಲದ ಕಾರಣ ಡೋರ್ ಮೆಟ್ಟಿನ ಬಳಿ‌ನಿಂತಿದ್ದ ವ್ಯಕ್ತಿ, ರಸ್ತೆಯಲ್ಲಿದ್ದ ಗುಂಡಿಗೆ ಬಸ್‌ ಅಲ್ಲಾಡಿದ ಚೇಳೆ ನಿಯಂತ್ರಣ ತಪ್ಪಿ ಬಸ್‌ನಿಂದ ಬಿದ್ದಿದ್ದಾರೆ. ಬಸ್‌ ವೇಗವಾಗಿ ಚಲಿಸುತ್ತಿದ್ದರಿಂದ ರಸ್ತೆಗೆ ಬಿದ್ದ ರಭಸಕ್ಕೆ ವ್ಯಕ್ತಿಯ ತಲೆಗೆ ಪೆಟ್ಟು ಬಿದ್ದು, ತೀವ್ರ ರಕ್ತ ಸ್ರಾವದಿಂದ ವ್ಯಕ್ತಿ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

2.5 ಲಕ್ಷ ರೂ. ಪರಿಹಾರ ಘೋಷಣೆ: ಸ್ಥಳಕ್ಕೆ ಬಂದ ಅಧಿಕಾರಿಗೆ ಸಾರ್ವಜನಿಕರಿಂದ ತರಾಟೆ ತೆಗೆದುಕೊಂಡಿದ್ದಾರೆ.  ಬಾಗಿಲು ಇಲ್ಲದ ಬಸ್ ಸಂಚಾರಕ್ಕೆ ಬಿಟ್ಟಿದ್ದು ಯಾಕೆ? RTOಯಿಂದ ಬಾಗಿಲಿಲ್ಲದ ಬಸ್ ಸಂಚಾರಕ್ಕೆ ಆನುಮತಿ ಕೊಟ್ಟಿದ್ದಾರಾ? ಈ ದುರ್ಘಟನೆಗೆ ಯಾರು ಹೊಣೆ ಎಂದು ಅಧಿಕಾರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದರಿಂದ ಕೆಎಸ್‌ಆರ್‌ಟಿಸಿಯದ್ದೇ ತಪ್ಪೆಂದು ಒಪ್ಪಿಕೊಂಡ ಅಧಿಕಾರಿ, ನಿಗಮದಿಂದ 2.5 ಲಕ್ಷ ಪರಿಹಾರದ ಭರವಸೆ ನೀಡಲಾಗಿದೆ. ಜೊತೆಗೆ, ಸ್ಥಳದಲ್ಲೇ 25 ಸಾವಿರ ರೂ. ಪರಿಹಾರ ನೀಡಲಾಗಿದೆ.