ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಹೆಚ್ಚಾಯ್ತು ಕಳ್ಳರ ಉಪಟಳ! ತಡೆ ಗೋಡೆಗೆ ಹಾಕಿದ ತಂತಿ ಬೇಲಿಗಳು ಮಾಯ

ಮಂಡ್ಯ: ತಡೆಗೋಡೆಗೆ ಹಾಕಿರುವ ತಂತಿ ಬೇಲಿಗಳ ಕಣ್ಮರೆ. ಸಾಲು ಸಾಲಾಗಿ ಬಿದ್ದಿರುವ ಕಬ್ಬಿಣದ ರಾಡ್​ಗಳು, ವೇಗವಾಗಿ ಸಂಚರಿಸುತ್ತಿರುವ ವಾಹನಗಳು. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ದಶಪಥ ರಸ್ತೆಯಲ್ಲಿ. ಹೌದು ಬೆಂಗಳೂರು ಮೈಸೂರು ದಶಪಥ ರಸ್ತೆ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ತಡೆಗೋಡೆಗೆ ಹಾಕಿರುವ ತಂತಿಯ ಮೇಲೆ ಈಗ ಕಳ್ಳರ ಕಣ್ಣು ಬಿದ್ದಿದೆ. ಮದ್ದೂರು ಮಂಡ್ಯಕ್ಕೆ ಬರುವ ಮಾರ್ಗದ ಮದ್ಯೆ ಸುಮಾರು 20 ಕಡೆ ಕಳ್ಳರು ತಂತಿ ಬೇಲಿಯನ್ನ ಕದ್ದು ಎಸ್ಕೇಪಾಗಿದ್ದು, ಈಗ ಪೊಲಿಸರಿಗೆ ಹೊಸತೊಂದು ತಲೆ ನೋವು ಸೃಷ್ಠಿ ಮಾಡಿದೆ.

ಈ ಹಿಂದೆ ರಾಷ್ಟ್ರೀಯ ಹೆದ್ದಾರಿ 275 ರ ಅಕ್ಕ ಪಕ್ಕದಲ್ಲಿರುವ ಬೃಹತ್ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಅಲ್ಯೂಮಿನಿಯಮ್ ಪ್ಲೇಟ್​ಗಳನ್ನ ಕಳ್ಳರು ಕದಿಯುತ್ತಿದ್ರು, ಈ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿತ್ತು. ಈಗ ತಂತಿ ಬೇಲಿಗಳನ್ನ ಕದ್ದು ಮತ್ತೆ ಸುದ್ದಿಯಾಗುತ್ತಿದೆ. ತಂತಿ ಬೇಲಿ ಕಳವು ಮಾಡಿದ ಪರಿಣಾಮ ಪಾದಾಚಾರಿಗಳು, ದನಕರಗಳು ಶ್ವಾನಗಳು ಎಕ್ಸ್ ಪ್ರೆಸ್ ಹೈವೆಗೆ ಎಂಟ್ರಿಯಾಗುತ್ತಿದೆ. ಇದರ ಪರಿಣಾಮ ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಕ್ಕು ಅಪಘಾತವಾಗುವ ಸಾದ್ಯತೆಗಳು ಸಹ ಹೆಚ್ಚಾಗಿದ್ದು, ಹೈವೆ ಅಥಾರಿಟಿ ಅಧಿಕಾರಿಗಳು ಕಳ್ಳರ ಕೈ ಚಳಕಕ್ಕೆ ಬೇಸತ್ತು ಹೋಗಿದ್ದಾರೆ.

ಅದೇನೆ ಹೇಳಿ ಕಳ್ಳರ ಕಾಟಕ್ಕೆ ಪೊಲೀಸ್ ಇಲಾಖೆ ಹಾಗೂ ಹೈವೆ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳಿಗೆ ಹೊಸತೊಂದು ಪಜೀತಿ ಸೃಷ್ಠಿಯಾಗಿದ್ದು. ಆದಷ್ಟು ಬೇಗ ಕಳ್ಳರ ಕೈಗೆ ಪೊಲೀಸರು ಕೋಳ ತೊಡಿಸಬೇಕಿದೆ. ಅದೇ ರೀತಿ ಮತ್ತೆ ತಂತಿ ಬೇಲಿ ಅಳವಡಿಸಿ ಮುಂದಾಗುವ ಅವಘಡಕ್ಕೆ ಬ್ರೇಕ್ ಹಾಕಬೇಕಿದೆ.