‘ನಾವು ರಾಮಾಯಣದ ಕಥೆಯನ್ನು ಸಿನಿಮಾ ಮಾಡಿಲ್ಲ’: ಉಲ್ಟಾ ಹೊಡೆದ ‘ಆದಿಪುರುಷ್​’ ಚಿತ್ರತಂಡ

ಬಹುಕೋಟಿ ರೂಪಾಯಿ ಬಜೆಟ್​ ಹಾಕಿ ಮಾಡಿದ ‘ಆದಿಪುರುಷ್​’ ಸಿನಿಮಾಗೆ ಕೆಟ್ಟ ವಿಮರ್ಶೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಹಲವು ಅಂಶಗಳನ್ನು ಟೀಕಿಸಲಾಗುತ್ತಿದೆ. ರಾಮಾಯಣವನ್ನು ಆಧರಿಸಿದ ಈ ಸಿನಿಮಾದಲ್ಲಿ Prabhas  ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್​ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್​ ಅವರು ಬಣ್ಣ ಹಚ್ಚಿದ್ದಾರೆ. ಸೈಫ್​ ಅಲಿ ಖಾನ್​ ಅವರು ರಾವಣನಾಗಿ ಅಬ್ಬರಿಸಿದ್ದಾರೆ. ಆದರೆ ರಾಮಾಯಣವನ್ನು ತೋರಿಸಿದ ರೀತಿ ಸರಿಯಾಗಿಲ್ಲ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾದ ಸಂಭಾಷಣಕಾರ ಮನೋಜ್​ ಮುಂತಶೀರ್ ಅವರು ಮಾತು ಬದಲಾಯಿಸಿದ್ದಾರೆ. ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ‘ಆದಿಪುರುಷ್​’ ಸಿನಿಮಾವನ್ನು ಟ್ರೋಲ್​ ಮಾಡಲಾಗುತ್ತಿದೆ. ಪಾತ್ರಗಳನ್ನು ತೋರಿಸಿದ ರೀತಿ, ಸಂಭಾಷಣೆಯ ಶೈಲಿ, ಗ್ರಾಫಿಕ್ಸ್​ ಗುಣಮಟ್ಟ ಸೇರಿದಂತೆ ಅನೇಕ ವಿಚಾರಗಳನ್ನು ಜನರು ಟೀಕಿಸುತ್ತಿದ್ದಾರೆ. ಈ ನಡುವೆ ಸಂಭಾಷಣಕಾರ ಮನೋಜ್​ ಮುಂತಶೀರ್​ ಅವರು ನೀಡಿದ ಕೇಳಿಕೆ ಸೆನ್ಸೇಷನ್​ ಸೃಷ್ಟಿ ಮಾಡಿದೆ. ‘ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್​. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್​​ಕ್ಲೈಮರ್​ನಲ್ಲೂ ನಾವು ಅದನ್ನೇ ಹೇಳಿದ್ದೇವೆ’ ಎಂದು ಮನೋಜ್​ ಮುಂತಶೀರ್​ ಹೇಳಿರುವುದಾಗಿ ವರದಿ ಆಗಿದೆ.

‘ಆದಿಪುರುಷ್​’ ಸಿನಿಮಾ ಬಗ್ಗೆ ಜನರು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾ ನೋಡಿದ ಬಳಿಕ ಬಹುತೇಕರಿಗೆ ನಿರಾಸೆ ಆಗಿದೆ. ‘ರಾಮನ ಹೆಸರನ್ನು ಹಾಳು ಮಾಡಬೇಡಿ’ ಎಂದು ಕಂಗನಾ ರಣಾವತ್​ ಅವರು ಪರೋಕ್ಷವಾಗಿ ಚಿತ್ರತಂಡಕ್ಕೆ ತಿವಿದಿದ್ದಾರೆ. ಈ ಚಿತ್ರದಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಕೂಡ ಕೆಲವರು ಆರೋಪಿಸುತ್ತಿದ್ದಾರೆ. ಹಾಗಿದ್ದರೂ ಕೂಡ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ತಗ್ಗಿಲ್ಲ. ಮೊದಲ ದಿನ ಈ ಸಿನಿಮಾ ವಿಶ್ವಾದ್ಯಂತ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ.

ಪ್ರಭಾಸ್​ ಅವರು ‘ಆದಿಪುರುಷ್​’ ಸಿನಿಮಾದಿಂದ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷಿಸಿದ ರೀತಿಯಲ್ಲಿ ಜನರಿಂದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬುದು ಬೇಸರದ ವಿಚಾರ. ವಿಮರ್ಶಕರು ಕೂಡ ಈ ಚಿತ್ರವನ್ನು ತೆಗಳಿದ್ದಾರೆ. ಸದ್ಯಕ್ಕೆ ಪ್ರಭಾಸ್​ ಅವರು ಮೌನಕ್ಕೆ ಶರಣಾಗಿದ್ದಾರೆ. ಯಾವುದೇ ರೀತಿಯ ಟೀಕೆಗಳಿಗೂ ಅವರು ಉತ್ತರಿಸುವ ಗೋಜಿಗೆ ಕೈ ಹಾಕಿಲ್ಲ. ಮುಂದಿನ ದಿನಗಳಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದುನೋಡಬೇಕು.