ಕರ್ನಾಟಕದ ನಂದಿನಿ ಕಳಪೆ ಗುಣಮಟ್ಟದ್ದು ಎಂದ ಕೇರಳದ ಸಚಿವೆ ಚಿಂಜು ರಾಣಿ

ಕೇರಳದಲ್ಲಿ ಕರ್ನಾಟಕದ ನಂದಿನಿ  ಮಳಿಗೆಗಳು ಹೆಚ್ಚಾಗುತ್ತಿದ್ದಂತೆ ಕೇರಳಿಗರು ಸ್ಥಳೀಯ ಬ್ರಾಂಡ್ ಮಿಲ್ಮಾಗೆ ಹೊಡೆತ ಬೀಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೇರಳ- ಕರ್ನಾಟಕ ನಡುವೆ ನಂದಿನಿ- ಮಿಲ್ಮಾ  ಹಾಲು ಸಮರ ನಡೆಯುತ್ತಿದ್ದಂತೆಯೇ ಇದೀಗ ಕೇರಳದ ಸಚಿವೆ ಜೆ ಚಿಂಜು ರಾಣಿ, ನಂದಿನಿ ಹಾಲು ಕಳಪೆ ಗುಣಮಟ್ಟದ್ದು. ಕೇರಳಿಗರು ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದ ಮಿಲ್ಮಾ ಹಾಲನ್ನೇ ಸೇವಿಸಿ ಎಂದು ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳದ ಪಶುಸಂಗೋಪನಾ ಸಚಿವೆ, ಕೇರಳ ಪ್ರವೇಶಿಸುವ ಮುನ್ನ ಕರ್ನಾಟಕ ಹಾಲು ಒಕ್ಕೂಟ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿತ್ತು. ಈ ಬಗ್ಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ ದೂರು ನೀಡುತ್ತೇವೆ. ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದೆ. ಕೇರಳದ ಜನರು ಮಿಲ್ಮಾ ಹಾಲನ್ನು ಸೇವಿಸುವಂತೆ ನಾನು ವಿನಂತಿಸುತ್ತೇನೆ, ಏಕೆಂದರೆ ನಮ್ಮ ಮನೆಗಳಲ್ಲೇ ಮಕ್ಕಳೇ ಹೆಚ್ಚು ಹಾಲು ಸೇವಿಸುತ್ತಿರುವುದು ಎಂದಿದ್ದಾರೆ.

ನಂದಿನಿ ಈ ವರ್ಷ ಕೊಚ್ಚಿ, ಮಲಪ್ಪುರಂನಲ್ಲಿ ತನ್ನ ಪಾರ್ಲರ್‌ಗಳನ್ನು ತೆರೆದಿದೆ. ಮುಂದಿನ ದಿನಗಳಲ್ಲಿ ಇತರ ಪ್ರದೇಶಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಏಪ್ರಿಲ್‌ನಲ್ಲಿ ಕೆಸಿಎಂಎಂಎಫ್ ಕೇರಳದಲ್ಲಿ ನಂದಿನಿಯ ಉಪಸ್ಥಿತಿಯನ್ನು ವಿರೋಧಿಸಿತ್ತು. ನಂದಿನಿಯ ಈ ನಡೆ ನೀತಿಗೆ ವಿರುದ್ದವಾದದು ಎಂದು ಕೇರಳ ಹೇಳಿತ್ತು. ಈ ಬಗ್ಗೆ ಮಾತನಾಡಿದ ಮಿಲ್ಮಾ ಬ್ರ್ಯಾಂಡ್‌ನ ಅಧ್ಯಕ್ಷ ಕೆ.ಎಸ್.ಮಣಿ, ನಂದಿನಿ ಕೇರಳಕ್ಕೆ ತನ್ನ ಮಾರಾಟವನ್ನು ವಿಸ್ತರಿಸುವ ಕ್ರಮವು ನೀತಿಗೆ ವಿರುದ್ಧವಾಗಿದ್ದು ಇದು ಭಾರತದ ಡೈರಿ ಚಳವಳಿಯ ಉದ್ದೇಶವನ್ನು ನಾಶಪಡಿಸುತ್ತದೆ. ಮೊದಲು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದ ಅವರು ಈಗ ಹಾಲು ಕೂಡ ಮಾರಾಟ ಮಾಡುತ್ತಿದ್ದಾರೆ. ಅವರು ಕೇರಳದಲ್ಲಿ ಹಾಲನ್ನು ಅಂಗಡಿಯಿಂದ ಅಂಗಡಿಗೆ ವಿತರಿಸಲು ಪ್ರಾರಂಭಿಸಿದರು. ಈ ಬಗ್ಗೆ ನಾವು ಅವರಿಗೆ ಪತ್ರ ಬರೆದಿದ್ದೇವೆ ಮತ್ತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಕೆಸಿಎಂಎಂಎಫ್‌ನ ಆಕ್ಷೇಪಗಳಿಗೆ ಕರ್ನಾಟಕದ ಸಹಕಾರ ಸಚಿವ ಕ್ಯಾತಸಂದ್ರ ರಾಜಣ್ಣ ಪ್ರತಿಕ್ರಿಯಿಸಿದ್ದು , ಕೇರಳದಲ್ಲಿ ನಂದಿನಿಯ ವ್ಯವಹಾರ ನೀತಿಗೆ ವಿರುದ್ಧ ಅಲ್ಲ ಎಂದು ಹೇಳಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ದೇಶದಲ್ಲಿ, ಯಾರು ಬೇಕಾದರೂ ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರಲ್ಲಿ ನೀತಿಗೆ ವಿರುದ್ಧ ಇಲ್ಲ. ಅಂತೂ ಕೊನೆಯಲ್ಲಿ ಗ್ರಾಹಕರು ಉತ್ತಮ ಗುಣಮಟ್ಟವನ್ನು ನೀಡುವ ಉತ್ಪನ್ನವನ್ನು ಮಾತ್ರ ಆಯ್ಕೆ ಮಾಡುತ್ತಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ, ಗುಜರಾತ್ ಮೂಲದ ಅಮುಲ್ ಡೈರಿ ಬ್ರಾಂಡ್ ಕರ್ನಾಟಕಕ್ಕೆ ಕಾಲಿಡುವುದನ್ನು ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಕರ್ನಾಟಕಕ್ಕೆ ಅಮುಲ್ ಪ್ರವೇಶವು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಡೆಸುತ್ತಿರುವ ಸ್ವದೇಶಿ ನಂದಿನಿಯನ್ನು ನಾಶಪಡಿಸುತ್ತದೆ ಎಂದು ಕಾಂಗ್ರೆಸ್ ವಾದಿಸಿತ್ತು.