ಕಾರು ಮಾಲೀಕನ ಮಗನನ್ನೇ ಕೊಲೆ ಮಾಡಿದ ಪಾಪಿ ಚಾಲಕ; ಕಾರಣವೇನು ಗೊತ್ತಾ?

ಕೊಪ್ಪಳ: ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಕಾರು ಮಾಲೀಕನ ಮಗನನ್ನೇ ಬಾವಿಯಲ್ಲಿ ಮುಳುಗಿಸಿ ಚಾಲಕ ಕೊಲೆ ಮಾಡಿದ ಧಾರುಣ ಘಟನೆ ನಡೆದಿದೆ. ಪ್ರಜ್ವಲ್​ ಎಂಬಾತ ಮೃತ ಬಾಲಕ.​ ಐದು ದಿನಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಚಾಲಕ ಶಂಕರ್ ಅಪ್ರಾಪ್ತರಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿ ಅದನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಬಳಿಕ ವಿಡಿಯೋ ತೋರಿಸಿ ಹಣವನ್ನ ಕೀಳುತ್ತಿದ್ದನಂತೆ.​​ ತಾನು ಕೆಲಸ ಮಾಡುತ್ತಿದ್ದ ಕಾರು ಮಾಲೀಕನ ಮಗನಿಗೂ ಇದೇ ರೀತಿಯಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದಿದ್ದರೆ ವಿಡಿಯೋ ತೋರಿಸುವುದಾಗಿ ಪ್ರಜ್ವಲ್​ಗೆ ಬೆದರಿಕೆ ಹಾಕಿದ್ದಾನೆ. ಆದರೆ, ಬಾಲಕ ಹಣ ಕೊಡಲ್ಲ ಎಂದಿದ್ದಾನೆ. ಇದೇ ಕಾರಣಕ್ಕೆ ಪ್ರಜ್ವಲ್​ನನ್ನ ಬಾವಿಗೆ ತಳ್ಳಿ ಕಾಲಿನಿಂದ ತುಳಿದು ಕೊಲೆ ಮಾಡಿದ್ದಾನೆ.

ಹೌದು ಮೃತ ಪ್ರಜ್ವಲ್​ನನ್ನು ಕೊಲೆ ಮಾಡಿ, ಬಾವಿಯಲ್ಲಿ ಮುಳುಗಿ ನಿಮ್ಮ ಮಗ ಮೃತಪಟ್ಟಿದ್ದಾನೆಂದು ಸ್ವತಃ ಪ್ರಜ್ವಲ್​​​​ ತಂದೆಗೆ ಕರೆ ಮಾಡಿ ಶಂಕರ್ ಹೇಳಿದ್ದ. ಜೊತೆಗೆ ಕೊಲೆ ಮಾಡಿದ್ದನ್ನು ಗಮನಿಸಿದ್ದ ಯುವಕರಿಗೂ ಬೆದರಿಕೆ ಹಾಕಿದ್ದನಂತೆ. ಶಂಕರ್ ಮೇಲೆ ಅನುಮಾನ ಇದ್ದ ಹಿನ್ನೆಲೆ ಮೃತ ಬಾಲಕನ ತಂದೆ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಕುಕನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಶಂಕರ್ ತಪ್ಪೊಪ್ಪಿಕೊಂಡಿದ್ದಾನೆ.