ಗ್ಯಾರಂಟಿ ಯೋಜನೆಗಳಿಗೆ ಷರತ್ತು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ಗೆ ಪರಿಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ

ಬೆಂಗಳೂರು: ಒಂದು ಗ್ಯಾರಂಟಿಯಲ್ಲಿ ಮಾತ್ರವಲ್ಲ, ಬದಲಾಗಿ 5 ಗ್ಯಾರಂಟಿಗಳಲ್ಲೂ ಗೊಂದಲಗಳಿವೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ  ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಘೋಷಣೆ ಮಾಡುವಾಗ ಸಿಎಂ  ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಪರಿಜ್ಞಾನ ಇರಲಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಗ್ಯಾರಂಟಿಗೆ ಹಲವಾರು ಷರತ್ತು ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಇದು ಒಂದು ಕಾರ್ಯಕ್ರಮದ ಗೊಂದಲ ಅಲ್ಲ ಐದು ಕಾರ್ಯಕ್ರಮ ಗೊಂದಲವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮಾಷೆಯಾಗಿ ಮಾತಾಡುತ್ತಿದ್ದಾರೆ. ಇಂಧನ ಇಲಾಖೆ ಸಚಿವರು ಜಾರ್ಜ್ ಅವರಿಗೆ ಅರ್ಥ ಆಗಿಲ್ಲ ಎಂದು ಅನಿಸುತ್ತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮಾಹಿತಿ ಇಲ್ಲ ಅನಿಸುತ್ತಿದೆ ಎಂದರು.

ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು? ಈಗ ಸಬೂಬು ಏನು ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, 15 ಲಕ್ಷ ಬಿಜೆಪಿ ಯವರು ಕೊಟ್ಟಿದ್ದಾರಾ ಅಂತ ಕೇಳುತ್ತಾ ಇದ್ದಾರೆ. ಅವರು ಕೊಟ್ಟಿಲ್ಲ ಅಂತ ನಾನು ಕೊಡಲ್ಲ ಅನ್ನೋದು ಎಷ್ಟು ಸರಿ? ಘೋಷಣೆ ಮಾಡುವಾಗ ಪರಿಜ್ಞಾನ ಇರಲಿಲ್ವಾ ಹಾಗಾದರೆ ಎಂದು ಪ್ರಶ್ನಿಸಿದ್ದಾರೆ.