ಮಗಳನ್ನು ತಡವಾಗಿ ಮನೆಗೆ ಬಿಟ್ಟಿದ್ದಕ್ಕೆ ಖಾಸಗಿ ಶಾಲೆಯ ವಿರುದ್ಧ ದೂರು ದಾಖಲಿಸಿದ ಪೋಷಕರು

ಬೆಂಗಳೂರು: ನಗರದ ಖಾಸಗಿ ಶಾಲೆ ಕ್ರಿಸಾಲಿಸ್ ಹೈ ಐದನೇ ತರಗತಿ ಓದುತ್ತಿರುವ ತಮ್ಮ ಮಗಳನ್ನು ತಡವಾಗಿ ಮನೆಗೆ ಬಿಟ್ಟಿದ್ದಾರೆ ಎಂದು ಆರೋಪಿಸಿ ಆಕೆಯ ಪೋಷಕರು ಶಾಲೆಯ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಘಟನೆಯನ್ನು ವರದಿ ಮಾಡಲು ಪೋಷಕರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಸಂಪರ್ಕಿಸಿದರು. ದೂರಿನ ಪ್ರಕಾರ, “ಮಗಳನ್ನು ಮಧ್ಯಾಹ್ನ 3.20 ಕ್ಕೆ ಡ್ರಾಪ್ ಮಾಡಬೇಕಾಗಿತ್ತು, ಆದರೆ ಒಂದು ಗಂಟೆ ಕಳೆದರು ಮಗಳು ಮನೆಗೆ ತಲುಪದ್ದನ್ನು ಕಂಡು ಗಾಬರಿಗೊಂಡೆವು. ವಿಳಂಬದ ಬಗ್ಗೆ ಶಾಲೆಯಿಂದ ಯಾವುದೇ ಮಾಹಿತಿ ಇರಲಿಲ್ಲ. ಅಂತಿಮವಾಗಿ, ಸಂಜೆ 4.40 ರ ಸುಮಾರಿಗೆ ಅವರ ಮಗಳನ್ನು ಡ್ರಾಪ್ ಮಾಡಿದ್ದಾರೆ” ಎಂದು ಪೋಷಕರು ಹೇಳಿದ್ದಾರೆ. ಪೋಷಕರೊಂದಿಗೆ ಮಗಳು ಮಾತನಾಡಿದಾಗ, ಶಾಲೆಯ ಸಿಬ್ಬಂದಿ ಬಾಲಕಿಯನ್ನು ರಸ್ತೆಯ ಇನ್ನೊಂದು ಬದಿಯಲ್ಲಿ ಇಳಿಸಲು ಹೇಳಿದ್ದು, ಅವಳು ನಿರಾಕರಿಸಿದ್ದಾಳೆ ಎಂದು ತಿಳಿದುಬಂದಿದೆ.

ಇದಕ್ಕೆ ಶಿಕ್ಷೆಯಾಗಿ, ಸಿಬ್ಬಂದಿ ಬಾಲಕಿಯನ್ನು ಇತರ ಎಲ್ಲ ಮಕ್ಕಳನ್ನು ಮನೆಗೆ ಬಿಡುವವರೆಗೂ ಕಾಯುವಂತೆ ಮಾಡಿದರು. ಅಗಲವಾದ ದಾರಿ ಮತ್ತು ಡಿವೈಡರ್ ಇದ್ದ ಕಾರಣ ಮಗಳು ರಸ್ತೆ ದಾಟಲು ನಿರಾಕರಿಸಿದ್ದಾಳೆ ಎಂದು ಪೋಷಕರು ವಿವರಿಸಿದರು. ಈ ಕುರಿತು ಶಾಲೆಗೆ ಇಮೇಲ್ ಮಾಡಿದ ಬಳಿಕ ಶಾಲೆ ತಮ್ಮ ಮಗಳಿಗೆ ಸಾರಿಗೆಯನ್ನು ರದ್ದುಗೊಳಿಸಿದೆ ಎಂದು ಶಾಲೆ ತಿಳಿಸಿತು ಎಂದು ಪೋಷಕರು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಶಾಲೆಯ ವಕ್ತಾರರು ಈ ಎಲ್ಲಾ ಆರೋಪವನ್ನು ನಿರಾಕರಿಸಿದರು ಮತ್ತು ಮಕ್ಕಳ ಸುರಕ್ಷತೆ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ ಶಾಲೆಯ ಪ್ರಕಾರ, ಪೋಷಕರು ತಮ್ಮ ಮಗುವನ್ನು ಕರೆದುಕೊಂಡು ಹೋಗಲು ರಸ್ತೆ ದಾಟಲು ನಿರಾಕರಿಸಿದ್ದರು, ಎಲ್ಲಿಂದ ಮಗುವನ್ನು ಕರೆದುಕೊಂಡು ಹೋಗಿರುತ್ತಾರೋ ಅಲ್ಲಿಗೆ ತಂದು ಬಿಡಬೇಕು ಎಂದು ಹೇಳಿದರು, ಹೀಗಾಗಿ ಒಬ್ಬ ಅಟೆಂಡೆಂಟ್ ಬಾಲಕಿಯ ಇನ್ನೊಂದು ಬದಿಗೆ ಕರೆದುಕೊಂಡು ಹೋಗಿದ್ದಾರೆ. ಪೋಷಕರ ಮನವಿಯನ್ನು ಪಾಲಿಸುವುದರಿಂದ ಬಸ್‌ನಲ್ಲಿರುವ ಇತರ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತದೆ ಎಂದು ಶಾಲೆಯವರು ವಾದಿಸಿದರು. ಇದೀಗ ಶಾಲೆಯ ವಿರುದ್ಧ ಪೋಷಕರು ಹೆಣ್ಣೂರು ಪೊಲೀಸರಿಗೆ ದೂರು ನೀಡಿದ್ದಾರೆ.