ಅಕ್ರಮ ಸಂಬಂಧ ಶಂಕೆ: ರಾಡ್‌ನಿಂದ ಚುಚ್ಚಿ ಯುವಕನ ಕೊಲೆ.

ಮಂಗಳೂರು: ಪತ್ನಿ ಜತೆ ಅಕ್ರಮ ಸಂಬಂಧವಿರಿಸಿಕೊಂಡಿದ್ದಾನೆ ಎಂಬ ಸಂಶಯದಲ್ಲಿ ವ್ಯಕ್ತಿಯೊಬ್ಬ ಯುವಕನ ಎದೆಗೆ ರಾಡ್‌ನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಪಶ್ಚಿಮ ಬಂಗಾಳ, ಪ್ರಸ್ತುತ ಕುಳೂರು ನಿವಾಸಿ ಬಿಕಾಸ್‌ ಗುನಿಯಾ (22) ಮೃತಪಟ್ಟಯುವಕ. ಪಶ್ಚಿಮ ಬಂಗಾಳ ನಿವಾಸಿ ವಾಸುದೇವ ಗುನಿಯಾ (34) ಕೊಲೆ ಮಾಡಿದ ಆರೋಪಿ.

ಕೊಲೆಯಾದ ಬಿಕಾಸ್‌ ಗುನಿಯಾ ಮತ್ತು ಆರೋಪಿ ವಾಸುದೇವ ಗುನಿಯಾ ಪಶ್ಚಿಮ ಬಂಗಾಳದವರಾಗಿದ್ದು, ಕುಳೂರಿನಲ್ಲಿ ಗಾರೆ ಕೆಲಸಕ್ಕೆ ತೆರಳಿ ಜೀವನ ಸಾಗಿಸುತ್ತಿದ್ದರು.

ವಾಸುದೇವ ಗುನಿಯಾನಿಗೆ ಬಿಕಾಸ್‌ ಗುನಿಯಾ ಊರಿನ ಯುವತಿಯ ಜತೆ ಹಲವು ವರ್ಷದ ಹಿಂದೆ ಮದುವೆಯಾಗಿತ್ತು. ಆತನ ಪತ್ನಿ ಪಶ್ಚಿಮ ಬಂಗಾಳದಲ್ಲೇ ವಾಸ್ತವ್ಯವಿದ್ದಳು. ಆಕೆಯ ಜತೆ ಬಿಕಾಸ್‌ ಗುನಿಯಾನಿಗೆ ಅಕ್ರಮ ಸಂಬಂಧವಿದೆ, ಮೊಬೈಲ್‌ ಮೂಲಕ ಮಾತನಾಡುತ್ತಾನೆ ಎಂಬ ಸಂಶಯ ಆರೋಪಿಗೆ ಕಾಡುತ್ತಿತ್ತು. ಇದೇ ವಿಚಾರದಲ್ಲಿ ಹಲವು ಬಾರಿ ಇವರಿಬ್ಬರ ಮಧ್ಯೆ ವಾಕ್ಸಮರ, ಜಟಾಪಟಿ ನಡೆದಿದೆ. ಭಾನುವಾರ ಮಧ್ಯಾಹ್ನ ವಾಸುದೇವ ಗುನಿಯಾ ಪಾನಮತ್ತನಾಗಿ ಬಂದು ಅಕ್ರಮ ಸಂಬಂಧದ ನೆಪದಲ್ಲಿ ಬಿಕಾಸ್‌ ಜತೆ ತಗಾದೆ ತೆಗೆದಿದ್ದಾನೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಆರೋಪಿ ವಾಸುದೇವ ರಾಡ್ನಿಂದ ಬಿಕಾಸ್ನ ಎದೆಗೆ ತಿವಿದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಬಿಕಾಸ್‌ ಮೃತಪಟ್ಟಿದ್ದಾನೆ. ಕಾವೂರು ಪೊಲೀಸ್‌ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.