ಚನ್ನಪಟ್ಟಣದಲ್ಲಿ ತೋಟದ ಕಾವಲುಗಾರ ಆನೆಯ ದಾಳಿಗೆ ಬಲಿ

ಚನ್ನಪಟ್ಟಣ(ಜೂ.04):  ತೋಟ ಕಾಯುತ್ತಿದ್ದ ಕಾವಲುಗಾರನೊಬ್ಬ ಆನೆ ದಾಳಿಗೆ ಕಬ್ಬಾಳುವಿನಲ್ಲಿ ಬಲಿಯಾದ ಘಟನೆ ಮಾಸುವ ಮುನ್ನವೇ ಕಾಡಾನೆ ದಾಳಿಗೆ ಸಿಲುಕಿ ಮಾವಿನ ತೋಟದಲ್ಲಿ ಕಾವಲು ಕಾಯುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. 

ವೀರಭದ್ರಯ್ಯ (33) ಕಾಡಾನೆ ದಾಳಿಯಿಂದ ಮೃತಪಟ್ಟವರು. ಚನ್ನಪಟ್ಟಣದ ವಿರೂಪಸಂದ್ರದ ಮಾವಿನ ತೋಟದಲ್ಲಿ ಕಾವಲು ಕಾಯುವ ಕೆಲಸ ನಿರ್ವಹಿಸುತ್ತಿದ್ದ ವೀರಭದ್ರಯ್ಯ ಅವರು ಮುಂಜಾನೆ ಮೂತ್ರ ವಿಸರ್ಜನೆಗೆಂದು ತೋಟದಲ್ಲಿನ ಬೇಲಿ ಕಡೆ ಹೋಗುವಾಗ ಅಲ್ಲಿದ್ದ ಆನೆ ಏಕಾಏಕಿ ದಾಳಿ ನಡೆಸಿದೆ. 

ಮೂತ್ರವಿಸರ್ಜನೆಗೆಂದು ಬೇಲಿಪಕ್ಕ ಹೋಗಿದ್ದಾಗ ಮರೆಯಲ್ಲಿ ನಿಂತಿದ್ದ ಕಾಡಾನೆ ಏಕಾಏಕಿ ವೀರಭದ್ರಯ್ಯ ಮೇಲೆ ದಾಳಿ ನಡೆಸಿದೆ. ನಂತರ ಅವರ ತಲೆಯನ್ನು ತುಳಿದು ಅಪ್ಪಚ್ಚಿ ಮಾಡಿದೆ. 4 ದಿನಗಳ ಹಿಂದಷ್ಟೇ ಸಾತನೂರಿನ ಕಬ್ಬಾಳಿನಲ್ಲಿ ಕಾಡಾನೆ ದಾಳಿಗೆ ಮಾವಿನ ತೋಟ ಕಾಯುತ್ತಿದ್ದ ಕಾವಲುಗಾರನೊಬ್ಬ ಮೃತಪಟ್ಟಿದ್ದ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಅಕ್ಕೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.