ನಟ, ನಿರ್ದೇಶಕ ನಿತಿನ್ ಗೋಪಿ ಹೃದಯಾಘಾತದಿಂದ ನಿಧನ

ಬಾಲ ನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಹಾಗೂ ಇತ್ತೀಚೆಗೆ ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದ ನಿತಿನ್ ಗೋಪಿ  ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ  ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ‘ಹಲೋ ಡ್ಯಾಡಿ’  ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಇವರು ಬಾಲನಟರಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ‘ಶಾಲೆಗೆ ಈ ದಿನ ರಜಾ’ ಹಾಡಿನ ಮೂಲಕ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ನೆಲೆಯೂರಿದ್ದರು.

ನಿತಿನ್ ಗೋಪಿ ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. ಬೆಳಗ್ಗೆ ನಾಲ್ಕು ಗಂಟೆಗೆ ಅವರಿಗೆ ಹೃದಯಾಘಾತವಾಗಿತ್ತು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿತ್ತು ಅವರ ಕುಟುಂಬ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿರಬಾಂಧವ್ಯ, ನಿಶಬ್ಧ, ಕೆರಳಿದ ಕೇಸರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಿತಿನ್ ಬಾಲಕಲಾವಿದರಾಗಿ ನಟಿಸಿದ್ದರು. ಶ್ರುತಿ ನಾಯ್ಡು  ಪ್ರೊಡಕ್ಷನ್ ನಲ್ಲಿ ಹಾಗೂ ಬಾಲಾಜಿ ಟೆಲಿಫಿಲಮ್ಸ್ ಅಡಿಯಲ್ಲಿ ಮೂಡಿ ಬಂದ ಧಾರಾವಾಹಿಗಳಿಗೆ ನಿರ್ದೇಶಕರಾಗಿಯೂ ಇವರು ಕೆಲಸ ಮಾಡಿದ್ದರು. ಕನ್ನಡದಲ್ಲಿ ಮಾತ್ರವಲ್ಲ ತಮಿಳು ಧಾರಾವಾಹಿಯನ್ನೂ ಅವರು ನಿರ್ದೇಶನ ಮಾಡಿದ್ದಾರೆ.

ಕೇವಲ 39ರ ವಯಸ್ಸಿನ ನಿತಿನ್, ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಅಂದಹಾಗೆ ಇವರು ಖ್ಯಾತ ಕೊಳಲು ವಾದ ಗೋಪಿ ಅವರ ಪುತ್ರ. ನಿತಿನ್ ಅಗಲಿಕೆಗೆ ಕಿರುತೆರೆಯ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಕಂಬನಿ ಮಿಡಿಸಿದ್ದಾರೆ.