ಪತ್ನಿಯನ್ನ ಕೊಲೆ ಮಾಡಿ ಅಸ್ಪತ್ರೆಗೆ ತಂದ ಪತಿ  ; ತನಿಖೆ ಬಳಿಕ ಬಯಲಾಯ್ತು ಅಸಲಿಯತ್ತು

ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿ, ಅವಳು ಮಾತನಾಡುತ್ತಿಲ್ಲವೆಂದು ಗಂಡ ಗೋಳಾಡುತ್ತ ಆಸ್ಪತ್ರೆಗೆ ಹೊತ್ತು ತಂದಿದ್ದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿತ್ತು. ಇನ್ನು ಗಂಡನ ಗೋಳಾಟ ಕಂಡು ವೈದ್ಯರು ಮೊದಲು ಚಿಕಿತ್ಸೆ ನೀಡಲು ಕರೆದೊಯ್ದಿದ್ದಾರೆ. ಚೆಕಪ್ ಮಾಡಿದಾಗ ಮಹಿಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಬಳಿಕ ಈ ಬಗ್ಗೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ದೂರು ದಾಖಲಿಸಿದ್ದರು. ನಂತರ ಪೊಲೀಸರ ತನಿಖೆ ವೇಳೆ ಗಂಡನ ಅಸಲಿ ಕಥೆ ಬಯಲಾಗಿದೆ.

ಪತ್ನಿಯನ್ನ ಕೊಲೆ ಮಾಡಿ ಹೈಡ್ರಾಮ ಮಾಡಿದ್ದ ಗಂಡ

ಪತ್ನಿಯನ್ನ ಕೊಲೆ ಮಾಡಿ ಶವದೊಂದಿಗೆ ಆಸ್ಪತ್ರೆಗೆ ಬಂದು ಗಂಡ ಶರತ್ ಹೈಡ್ರಾಮ ಮಾಡಿದ್ದ. ಹೌದು ಆರೋಪಿ ಗಂಡ ಶರತ್ ಗೆ ಎರಡು ಮದುವೆಯಾಗಿತ್ತು. ಮೊದಲ ಪತ್ನಿ ಇದ್ದರೂ ಎರಡನೇ ಪತ್ನಿ ಪ್ರಿಯಾ ಎನ್ನುವವರನ್ನ ಮದುವೆಯಾಗಿದ್ದನು. ಇದೇ ವಿಚಾರಕ್ಕೆ ಮೊದಲ ಪತ್ನಿ ಬಳಿ ಹೋಗ್ತಿಯಾ ಎಂದು ಎರಡನೇ ಪತ್ನಿ ಪ್ರಿಯಾ ಪದೇ ಪದೇ ಜಗಳವಾಡುತ್ತಿದ್ದಳು. ಇದೇ ವಿಚಾರ ಕೆಲ ದಿನಗಳಿಂದ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಎರಡು ದಿನಗಳ ಹಿಂದೆ ಕೂಡ ಶರತ್ ಮತ್ತು ಪ್ರಿಯಾ ಜಗಳವಾಡಿದ್ದರು. ಈ ವೇಳೆ ಪತ್ನಿ ಪ್ರಿಯಾಗೆ ಶರತ್ ಥಳಿಸಿದ್ದ. ಹೊಡೆತದ ರಭಸಕ್ಕೆ ಕೆಳಗೆ ಬಿದ್ದು ಪ್ರಿಯಾ ಸಾವನ್ನಪ್ಪಿದ್ದಳು.

ಎರಡು ದಿನಗಳ ಬಳಿಕ ಅಸಲಿ ಸಂಗತಿ ಬಯಲಿಗೆ

ಗಾಬರಿಯಿಂದ ಘಟನೆ ಮುಚ್ಚಿಡಲು ಪ್ರಯತ್ನಿಸಿದ್ದ ಆರೋಪಿ ಪತಿ ಶರತ್ನ ಹೈಡ್ರಾಮ ನೋಡಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಶವವನ್ನ ವೈದ್ಯರಿಂದ ಪರಿಶೀಲನೆ ನಡೆಸಿದಾಗ ಕುತ್ತಿಗೆಯ ಬಳಿ ಇರುವ ಪಕ್ಕೆಲುಬು ಮುರಿದಿತ್ತು. ಈ ಕುರಿತು ವೈದ್ಯರು ಪ್ರಿಯಾ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ಅಸಹಜ ಸಾವು ಪ್ರಕರಣ ಕೊಲೆ ಕೇಸ್ ಆಗಿ ಬದಲಾವಣೆ ಆಗಿದ್ದು, ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶರತ್ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.